ಸಂಜೆಯ ಸಮಯ. ಒಂದು ವಾಕ್ ಗೆ ಹೊರಟಿದ್ದೆ. ಆಗಷ್ಟೆ ಮಳೆ ನಿಂತು, ನೀಲಾಕಾಶ ಕೆಂಪಾಗಿತ್ತು. ತುಂತುರು ಹನಿ ಮೈಯನ್ನ ತಬ್ಬುತ್ತಿತ್ತು. ಮಣ್ಣಿನ ವಾಸನೆ ಹೊತ್ತ ತಂಗಾಳಿ ಮನಕೆ ತಂಪೆರೆದು ಉಲ್ಲಾಸಗೊಳಿಸಿತ್ತು. ನಾನು ಹೊರಟ ಉದ್ದೇಶವನ್ನೇ ಮರೆತು ನನಗರಿವಿಲ್ಲದಂತೆ ಅಲ್ಲೆ ಹತ್ತಿರದಲ್ಲಿರುವ ರಾಮಕೃಷ್ಣಾಶ್ರಮ ಪ್ರವೇಶಿಸಿ, ಧ್ಯಾನ ಮಂದಿರ ಹೊರಗಡೆ ಕೂತಿದಿದ್ದೆ. ಇನ್ನೇನು ಕಣ್ಮುಚ್ಚಿ ಒಂದೆರೆಡು ನಿಮಿಷ ಧ್ಯಾನ ಮಾಡಿ ಹೊರಡಬೇಕು ಅನ್ನುವಷ್ಟರಲ್ಲಿ ಪಕ್ಕದಲ್ಲಿದ್ದ ಇಳಿವಯಸ್ಸಿನ, ಬಿಳಿಗಡ್ಡದ, ರಾಮಜಪ ಮಾಡುತ್ತಿದ್ದ ವ್ಯಕ್ತಿಯೊಬ್ಬ ನಿನ್ನ ಜೀವನದ ಉದ್ದೇಶವೇನು ಅಂತಾ ಕೇಳಿದ.! ಆ ಘಳಿಗೆಯಲ್ಲಿ ಬಂದೆರಗಿದ ಅಪರಿಚಿತ ಭಾವ ಯಾಕೋ ನನ್ನನ್ನ ವಿಚಿಲಿತಗೊಳಿಸಿತು. ಅಷ್ಟಕ್ಕೆ ಸುಮ್ಮನಾಗಲಿಲ್ಲ ಪುಣ್ಯಾತ್ಮ. ಮಗು ನಿಧಾನವಾಗಿ ಯೋಚಿಸಿ ಅಂತಾ ಹೇಳಿ ನಾಪತ್ತೆಯಾದ. ಅಲ್ಲೆ ಪಕ್ಕದಲ್ಲೆ ಏಕಾಂಗಿಯಾಗಿ ಕೂತು ಯೋಚಿಸುತ್ತಾ ಹೋದೆ. ಉತ್ತರ ಹುಡುಕುವುದು ಕಷ್ಟವಾಯಿತು.!
ಇದಲ್ಲ ಅದು, ಅದಲ್ಲ ಇದು ಅಂತಾ ಹುಡುಕುತ್ತಾ ಹೋಗುತ್ತೇವೆ. ಕೈಗೆ ಬಂದಿದ್ದನ್ನ ದೂರ ತಳ್ಳುತ್ತಾ, ಯಾವತ್ತೊ ದೂರ ತಳ್ಳಿದ್ದನ್ನ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತೇವೆ. ಹೆಸರು ಮಾಡಬೇಕು, ಶ್ರೀಮಂತನಾಗಬೇಕು, ಹೊಸ ಮನೆಕಟ್ಟಿ, ಹೊಸ ಕಾರಿನಲ್ಲಿ ಸುತ್ತಾಡಬೇಕು. ಜಗತ್ತಿನಲ್ಲಿರುವ ಎಲ್ಲಾ ವೈಭೋಗವನ್ನ ಅನುಭವಿಸಬೇಕು. ನೆಮ್ಮದಿ-ಸುಖಬೇಕು. ಮಕ್ಕಳು-ಮೊಮ್ಮಕ್ಕಳ ಜೊತೆ ಬದುಕಬೇಕು. ಇಷ್ಟೆಲ್ಲ ಸಿಕ್ಕರೂ ಸಂತೋಷವಿಲ್ಲ. ಮತ್ತೆನಕ್ಕಾಗೋ ಹುಡುಕಾಟ. ಇದನ್ನೆಲ್ಲ ಸಂಪಾದಿಸುವುದೇ ಜೀವನದ ಉದ್ದೇಶನಾ? ಅಥವಾ ಇದಕ್ಕಾಗೆ ಬದುಕಬೇಕಾ? ಇದನ್ನೆಲ್ಲ ಯೋಚಿಸುತ್ತಾ ಹೋದಂತೆ ಉತ್ತರ ಮತ್ತಷ್ಟು ಕಗ್ಗಂಟಾಗುತ್ತಾ ಹೋಯಿತು. ಸ್ನೇಹಿತನೊಬ್ಬ ಹೇಳಿದ ಲೈಫ್ ಈಸ್ ಫೆಸ್ಟಿವಲ್ ಎನ್ನುವ ಮಾತು ನೆನಪಾಯಿತು. ಎಂಥಾ ಅದ್ಭುತ ಕಲ್ಪನೆ ಎಂದು ಸಂತೋಷಪಡುವಷ್ಟರಲ್ಲಿಯೇ ಸನ್ಯಾಸಿಯೊಬ್ಬರು ಹೇಳಿದ ಲೈಫ್ ಈಸ್ ನಥಿಂಗ್, ಒನ್ ಡೇ ವಿ ವಿಲ್ ಡೈ ಅನ್ನುವ ಮಾತು ಮನಸ್ಸನ್ನ ಹೊಕ್ಕಿತು. ದ್ವಂದ್ವ ಕಾಡಿತು. ಗಂಭೀರವಾಗಿ ಕೂತು ನನ್ನನ್ನ ಅರಿಯಲು ಯತ್ನಿಸಿದೆ. ನಾನು ನಾನಾಗಿ ಯೋಚಿಸಿದೆ. ಅಹಂ ಬ್ರಹ್ಮಾಸ್ಮಿ ಅನ್ನುವುದರ ಅರ್ಥ ಅಸ್ಪಷ್ಟವಾಗುತ್ತಾ ಹೋಯಿತು. ಪ್ರಕೃತಿ ಮತ್ತಷ್ಟು ಸುಂದರವೆನಿಸಿತು. ಮಳೆ ಇನ್ನಷ್ಟು ಆಪ್ತವೆನಿಸಿತು. ಏಳೆಂಟು ನಿಮಿಷ ಮನಸಿನೊಂದಿಗೆ ನಡೆದ ಮಾತುಕತೆಯಲ್ಲಿ ಬದುಕಿನ ಉದ್ದೇಶಕ್ಕೆ ಸ್ಪಷ್ಟ ಉತ್ತರ ಸಿಗಲಿಲ್ಲ. ಬಂದ ಯೋಚನೆಗಳನ್ನೆಲ್ಲ ತಳ್ಳಿ ಹಾಕಲು ನೋಡಿ, ಮನಸ್ಸನ್ನ ಏಕಾಗ್ರಗೊಳಿಸಲು ಪ್ರಯತ್ನಿಸಿದೆ. ಮನಸ್ಸು ಸ್ತಬ್ಧಗೊಂಡಿತು.
ಕೆಲ ಹೊತ್ತಿನ ನಂತರ ಕಣ್ತೆರೆದೆ. ಸಯಮ ಓಡಿದಂತೆ ಭಾಸವಾಯಿತು. ಮಠದಲ್ಲಿ ಜನಜಂಗುಳಿ ಮಾಯವಾಗಿತ್ತು. ಹೊರಡೋಣ ಎಂದು ಮತ್ತೆ ಧ್ಯಾನ ಮಂದಿರದತ್ತ ಬಂದಾಗ ಬಿಳಿಗಡ್ಡ ವ್ಯಕ್ತಿಯನ್ನ ನೋಡಿದೆ. ಹಿಂಬಾಲಿಸಿದೆ.! "ನಿನ್ನ ಜೀವನದ ಉದ್ದೇಶವೇನು, ಯೋಚಿಸು ಮಗು" ಅಂತಾ ಹೇಳಿ ನಾಪತ್ತೆಯಾಗುತ್ತಿರುವ ದೃಶ್ಯ ಕಂಡುಬಂತು. ನನಗೆ ಇನ್ನಷ್ಟು ಕೂತುಹಲ ಹೆಚ್ಚಿತು. ಈ ತಾತನನ್ನ ಮಾತಾಡಿಸಲೇಬೇಕು ಅಂತಾ ಅವರತ್ತ ಹೋದೆ. ನೋಡಿದ ತಕ್ಷಣವೇ ನನಗೆ ಮತ್ತದೇ ಪ್ರಶ್ನೆ ಕೇಳಿದರು. ಅವರನ್ನ ಮಾತಿಗೆಳೆಯುವ ಪ್ರಯತ್ನ ಮಾಡಿದೆ. ಮಾತನಾಡಲಿಲ್ಲ, ಅಲ್ಲಿಂದ ಕಾಲ್ಕಿತ್ತರು.ಏನೇ ಇರಲಿ, ನನ್ನೊಳಗೆ ಬದುಕಿನ ಉದ್ದೇಶದ ಪ್ರಶ್ನೆ ಬಿತ್ತಿ ಕೆಲ ಸಮಯ ಯೋಚಿಸುವಂತೆ ಮಾಡಿದ ತಾತನಿಗೆ ಮನಸಿನಲ್ಲೆ ಥ್ಯಾಂಕ್ಸ್ ಹೇಳಿದೆ. ಮನೆಗೆ ಬಂದರೂ ಆ ಬಳಿಗಡ್ಡದ ನಿಗೂಢ ವ್ಯಕ್ತಿಯ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತಲೇ ಇತ್ತು.
- ವಿಷ್ಣು ಹೆಗಡೆ, ಕುಮಟಾ

