Saturday, September 17, 2011

ಸವಿ ಸವಿ ನೆನಪು..!







ಕಣ್ಣಾಮುಚ್ಚೆ
ಕಾಡೆಗೊಡೆ
ಉದ್ದಿನ ಮೂಟೆ
ಉರುಳೇಹೋಯ್ತು....!!!!

ರಸ್ತೆಯಲ್ಲಿ ಹೋಗುವಾಗ, ಪುಟ್ಟ ಮಕ್ಕಳು ಕಣ್ಣಾಮುಚ್ಚಾಲೆ ಆಡ್ತಿದ್ದನ್ನ ಕಂಡು ನಾನು ಬಾಲ್ಯದ ದಿನಗಳನ್ನ ನೆನೆಸಿಕೊಂಡೆ..

ಆ ನೆನಪುಗಳೇ ಮಧುರ. ಸುಂದರ.. ಕಳೆದುಹೋದ ದಿನಗಳನ್ನ ಸ್ಮರಿಸಿಕೊಂಡ್ರೆ, ರೋಮಾಂಚನ.. ಕೀಟಲೆ , ತಂಟೆ, ಜಗಳ, ಹೊಡೆದಾಟ, ಹೀಗೆ... ಒಂದಾ, ಎರಡಾ..! ಕೊನೆಯಲ್ಲಿ ಕೈಯಲ್ಲಿ ಆಗದಿದ್ದಾಗ ಅಳುವುದು..

ಬಯ್ಯೊ  ಟೀಚರ್, ಹೊಡೆಯೊ ಮೇಟ್ರು, ಬೇಜಾರಾದಾಗ ಕಾಡುಗುಡ್ಡಗಳ ಒಬ್ಬಂಟಿ ಅಲೆದಾಟ, ಸ್ನೇಹಿತನ ಮುನಿಸು, ತರಲೆ... ಅಬ್ಬಾ..! ನೆನಪುಗಳ ಜಾತ್ರೆಯೇ ತೆರೆದುಕೊಳ್ಳುತ್ತೆ.

ಮನೆಯಲ್ಲಿ ತಂದೆ, ತಾಯಿ ಬೈಯ್ತಿರಲಿಲ್ಲ.. ಪ್ರೀತಿಯಿಂದ ನೋಡಿಕೊಳ್ತಿದ್ರು.. ನನ್ಗೆ ಏನಾದ್ರು ಮೇಟ್ರು ಬೈದ್ರೆ, ಅಜ್ಜ ನೇರವಾಗಿ ಶಾಲೆಗೆ ಹೋಗಿ ರಂಪಾಟ ಮಾಡಿದ್ದು ಇದೆ.. ಕೇಳಿದಾಗಲೆಲ್ಲಾ ಕಷ್ಟವಾದ್ರೂ, ಅಪ್ಪ ಪ್ರೀತಿಯಿಂದ ಹಣ ಕೊಡ್ತಿದ್ದ. ನನಗೋ ಕಂಡಿದ್ದನ್ನೇಲ್ಲ ತಿನ್ನೋ ಆಸೆ.. ಅಂಗಡಿಯಲ್ಲಿ ಏನೇ ಹೊಸದು ಬಂದ್ರು, ತಿನ್ನೋ ಚಪಲ.. ಕೊಟ್ಟ ದುಡ್ಡನ್ನ ತಿನ್ನೊದಕ್ಕೆ ಕಾಲಿ ಮಾಡುತ್ತಿದ್ದೆ.. ನಯಾ ಪೈಸೆಯನ್ನ ನಾಳೆಗಾಗಿ ಇಟ್ಟುಕೊಳ್ತಿರ್ಲಿಲ್ಲ.. ಇಂದಿಗೂ ಅಷ್ಟೆ, ನಾಳೆಗಾಗಿ ಏನನ್ನೂ ಕೂಡಿಡದ ನಿಶ್ಚಿಂತೆಯ ಮನುಷ್ಯ ನಾನು..

ಶಾಲೆಗೆ ಹೋಗುವಾಗ ಬ್ಯಾಗ್ನಲ್ಲಿ ಆಟದ ವಸ್ತುಗಳೇ ಇರ್ತಿದ್ವು.. ಟೀಚರ್ ಇದನ್ನೆಲ್ಲ ಸುರಿದು ಎರಡೇಟು ಕೊಟ್ಟಿದ್ದು ಇದೆ.. ಮನೆಗೆ ಕಂಪ್ಲೇಂಟ್ ಮಾಡಿದ್ರು ನಾನ್ ನನ್ನ ಬುದ್ಧಿಯನ್ನ ಬಿಟ್ಟಿರ್ಲಿಲ್ಲ.

ಆದ್ರೆ, ಶಾಲೆಯಲ್ಲಿ ಶಾರದಾ ಪೂಜೆ, ಸ್ವಾತಂತ್ರ್ಯೋತ್ಸವ ಬಂದ್ರೆ, ಅಲಂಕಾರಕ್ಕಾಗಿ ಮೇಟ್ರಿಗೆ ನಾನೇ ಬೇಕಿತ್ತು.. ಆ ಸಮಯದಲ್ಲಿ ಟೀಚರ್ ನನ್ಗೆ ಬೆಣ್ಣೆ ಸವರಿ ಕೆಲಸ ಮಾಡ್ಸ್ಕೊಳ್ತಿದ್ರು.. ಮತ್ತೆ ಒಂದೆರಡು ದಿನ ಕಳೆದ ಮೇಲೆ ಬೆತ್ತದ ಏಟಿನ ರುಚಿ ಇದ್ದಿದ್ದೆ..

ರಜಾ ಸಿಕ್ರೆ ಸಾಕು ನನ್ನ ಪುಟ್ಟ ತಂಗಿಯ ಜೊತೆ ಆಟ ಆಡ್ತಿದ್ದೆ. ಕ್ರಿಕೆಟ್, ಚನ್ನೆಮಣೆ, ಕಳ್ಳಾ ಪೊಲೀಸ್ ಆಟ, ಲಗೋರಿ ಆಡಿದ್ದನ್ನ ನೆನೆಸಿಕೊಂಡ್ರೆ ಏನೋ ಒಂದ್ ರೀತಿ ಖುಷಿಯಾಗುತ್ತೆ.. ಯಾವುದೇ ಚರ್ಚಿಲ್ಲದೇ ಸಂತೋಷ ಸಿಗುತ್ತಿತ್ತು.. ಬಾಲ್ಯ ಎಷ್ಟು ಸಂದರ ಅಲ್ವಾ..?

ಈಗ ಎಲ್ಲಾ ಉಲ್ಟಾ-ಪಲ್ಟಾ.. ಕಾಲ ಬದ್ಲಾಗಿದೆ.. ಜೇಬಿಲ್ಲಿರುತ್ತಿದ್ದ ಚಿಲ್ಲರೆ ಕಾಸುಗಳ ಜಾಗದಲ್ಲಿ ಗರಿಗರಿ ಐದನೂರರ ನೋಟುಗಳು ಬಂದಿವೆ. ಸೈಕಲ್ ಬದ್ಲು ಬೈಕ್, ಐಷಾರಾಮಿ ಕಾರುಗಳು..  ಹಾಗೆನೇ ಮುಗ್ಧತೆಯೂ ಮನಸ್ಸಿನಿಂದಹೊರಟು ಹೋಗಿದೆ.. ಈಗೆನಿದ್ದರೂ ಕೃತಕ ಸಂತೋಷ.. ಒಲ್ಲದ ಮನಸ್ಸಿನ ನಗೆ.

ಇದನ್ನೆಲ್ಲ ನೆನಸಿಕೊಂಡ್ರೆ ಮತ್ತೆ ಬರಬಾರದೇ ಬಾಲ್ಯದ ದಿನಗಳು ಅನಿಸುತಿದೆ..


ವಿಷ್ಣು ಹೆಗಡೆ, ಕುಮಟಾ