Sunday, December 4, 2016
ಬಿರಿದ'ಮನ'...
ಬಿರುಕುಬಿಟ್ಟಿದೆ ಮನ
ಒಣ ಚರ್ಮದಂತೆ
ತೇವವಿಲ್ಲದ
ಶುಷ್ಕ ಗಾಳಿಗೆ ಸಿಲುಕಿ
ಈ ಬೇಗೆಯಲಿ ಬೆಂದು
ಎದೆಯುಸಿರು
ಬಿಸಿಯಾಗಿಹುದು
ಬಿಸಿಯ ಬೇಗೆ
ಉಸಿರುಗುಟ್ಟುವ ಮುನ್ನ
ತಣಿಸು ತನುಮನವ
ಓ ತಂಗಾಳಿಯೇ
- ವಿಷ್ಣು ಹೆಗಡೆ, ಕುಮಟಾ
ಒಣ ಚರ್ಮದಂತೆ
ತೇವವಿಲ್ಲದ
ಶುಷ್ಕ ಗಾಳಿಗೆ ಸಿಲುಕಿ
ಈ ಬೇಗೆಯಲಿ ಬೆಂದು
ಎದೆಯುಸಿರು
ಬಿಸಿಯಾಗಿಹುದು
ಬಿಸಿಯ ಬೇಗೆ
ಉಸಿರುಗುಟ್ಟುವ ಮುನ್ನ
ತಣಿಸು ತನುಮನವ
ಓ ತಂಗಾಳಿಯೇ
- ವಿಷ್ಣು ಹೆಗಡೆ, ಕುಮಟಾ
Saturday, November 26, 2016
ಈ ಚಳಿಯ ತಾಳೇನು?
ಈ ಚಳಿಯ ಸೊಬಗು
ಉಳ್ಳವರಿಗಷ್ಟೆ ಬೆರುಗು
ಬೆಚ್ಚನೆಯ ಮನೆಯೊಳಗೆ
ದಪ್ಪನೆಯ ರಗ್ಗು-ಗುಡಾರ
ಹೊದ್ದು ಮುದುಡಿ
ಮಲಗಿದ್ದವರಿಗೆ
ಈ ಚಳಿಯ ಸೊಬಗು
ಬಲು ಬೆರುಗು
ಪ್ರಯಣ ಪಕ್ಷಿಗಳಿಗೆ
ಪ್ರವಾಸಿಗಳಿಗೆ
ವೀಕೆಂಡ್ ಪ್ರಿಯರಿಗೆ
ಈ ಚಳಿಯ ಸೊಬಗು
ಬಲು ಬೆರುಗು
ಅಸ್ವಸ್ಥರು, ಅನಾಥರು
ನಿರ್ಗತಿಕರು, ನಿರಾಶ್ರಿತರಿಗೆ
ಇದು ಬೆರಗಲ್ಲ, ಸೊಬಗಲ್ಲ
ಉಸಿರುಗಟ್ಟುವ ಬೇಗೆ
ಹೆಪ್ಪುಗಟ್ಟಿಸುವ ಶೀತ
ಅವರೆಲ್ಲರೂ
ಮುದುಡಿ ಮಲಗಿಹರು
ಮರುಕಲು ಮನೆಯೊಳಗೆ
ನಿಶ್ಚಲ ಶವದಂತೆ
ನಾಳಿನ ಹಗಲಿಗಾಗಿ ಕಾಯುತ
ಬೆಚ್ಚನೆಯ ಮನೆಯಲಿಲ್ಲ
ದಪ್ಪನೆಯ ರಗ್ಗು-ಗುಡಾರಗಳಿಲ್ಲ
ಹೆಪ್ಪುಗಟ್ಟಿಸುವ
ಈ ಚಳಿರಾತ್ರಿಯಲಿ
ಎಲ್ಲಿಯ ನಿದ್ದೆ ಅವರಿಗೆ
ಹೌದು, ಈ ಚಳಿಯ ಸೊಬಗು
ಉಳ್ಳವರಿಗಷ್ಟೆ ಬೆರುಗು..!
- ವಿಷ್ಣು ಹೆಗಡೆ, ಕುಮಟಾ
Sunday, July 10, 2016
Tuesday, June 28, 2016
Sunday, June 26, 2016
Monday, June 13, 2016
ಕಾಗೆ
ಕಾ(ಗೆ)ಲೆಳೆದು
ನಿಂದಿಸುವರು
ಇಂದು..!
ಕರೆದು ಪೂಜಿಸುವರು
ಶ್ರದ್ಧೆಯಿಂದ
ಶ್ರಾದ್ಧದಂದು..!
ಎಲೆ ಮಾನವ
ವಿಕಾರ,ವಿಕ್ಷಿಪ್ತ,ವಿಕೃತಿಗೆ
ನಾನು ಉದಾಹರಣೆ
ನನ್ನ ಹೆಸರು
ಅಪಹಾಸ್ಯದ ವಸ್ತು
ಕಪ್ಪು-ಬಿಳುಪಿನ ವ್ಯತ್ಯಾಸಕ್ಕೆ
ನನ್ನ ಮೈಬಣ್ಣವೇ ಹೋಲಿಕೆ
ಎಲೆ ಮಾನವ
ಶನಿಯ ವಾಹನವೆಂಬುದು
ಹೆಸರಿಗಷ್ಟೆ
ನನಗಂಟಿಗೆ
'ಅಪಶಕುನ'ದ ಪಟ್ಟ
ಕರ್ಕಶ ಧ್ವನಿಗೂ
ನನ್ನದೆ ನೆನಪು
ಆದರೆ ನಾನೆಂದು
ಬಣ್ಣ ಬದಲಿಸುವುದಿಲ್ಲ
ನಿನ್ನಹಾಗೆ..!
ಎಲೆ ಮಾವನ
- ವಿಷ್ಣು ಹೆಗಡೆ, ಕುಮಟಾ
Sunday, June 21, 2015
ಮತ್ತೆ ಮಳೆ ಬಂದಿದೆ
ಮತ್ತೆ ಮಳೆ ಬಂದಿದೆ
ಹನಿಯ ಸುರಿಸಲು
ರಂಗುರಂಗಿನ ತರಂಗವೆಬ್ಬಿಸಿ
ಮನ ತಣಿಸಲು
ಕಪ್ಪುಗಟ್ಟಿದ ಮೋಡ
ಭರಸಿಡಿಲು
ಕಣ್ಣುಕೊರೈಸುವ ಮಿಂಚು
ಭೋರ್ಗರೆದು ಅಬ್ಬರಿಸುತದೆ
ಮುದುಡಿದ ಮನಕೆ
ನವೋಲ್ಲಾಸ ತುಂಬಲು
ಮತ್ತೆ ಮಳೆ ಬಂದಿದೆ
ಹೆಬ್ಬಂಡೆ ಮೋಡ
ಕರಗಿ ನೀರಾಗಿ ಸುರಿಯಲು
ಭಾವ ಬೆರಗಾಗಿ ಕುಣಿಯಲು
ಮತ್ತೆ ಮಳೆ ಬಂದಿದೆ
ಹಳೆಯದೆಲ್ಲ ನೆನಪಾಗಿ
ಧಾರೆಧಾರೆಯಾಗಿ ಸುರಿಯುತಿದೆ
ಮನಸು ತೊಯ್ದು
ಕನಸು ಗರಿಗೆದರಿದೆ
ಹಸಿ ಹಸಿ ಒದ್ದೆ ಮನದಲ್ಲಿಗ
ಗರಿಗರಿ ನವಿರು ಕನಸು
ಮನಕೆ ಚೈತನ್ಯ ತುಂಬಲು
ಮತ್ತೆ ಮಳೆ ಬಂದಿದೆ
- ವಿಷ್ಣು ಹೆಗಡೆ, ಕುಮಟಾ
Friday, August 1, 2014
Thursday, January 30, 2014
Monday, November 4, 2013
Saturday, November 2, 2013
ಓ ಕನಸೇ!
ಎಲ್ಲಿ ಹೋದೆ
ನನ್ನಿಂದ ದೂರವಾಗಿ
ಸವಿ ನಿದ್ದೆಯಿಂದ
ಮರೆಯಾಗಿ
ನೀನಿರದ ಬದುಕು
ನನೆಗೊಂದು ಶಾಪ
ಬೆಂದಿಹುದು ಮನಸು
ಹೊರಬರದೆ ತಾಪ
ಬಿಡು ಸಾಕು
ಈ ಕೋಪ
ಸವಿ ನಿದ್ರೆಯ
ಗೆಳೆಯ ನೀನು
ಸುಂದರ ಸ್ವಪ್ನಗಳ
ಯಜಮಾನ ನೀನು
ಕತ್ತಲಾಗಿದೆ ಜಗತ್ತು
ಬೆತ್ತಲಾಗಿದೆ ಮನಸು
ಕಹಿಯಾಗಿವೆ ರಾತ್ರಿಗಳು
ನಿನ್ನೊಲವ
ಕೊರತೆಯಿಂದ
ಭಾವನೆ ನೂರಾರು
ಬಣ್ಣದ ಬದುಕಿಗೆ
ಕಲ್ಪನೆ ಸಾವಿರಾರು
ಹುಚ್ಚು ಮನಸಿಗೆ
ಆದರೆ, ನೀನಿಲ್ಲದೆ
ಇವೆಲ್ಲ ಅಪೂರ್ಣ
ಕಾಯಿಸದಿರು
ಬೇಗ ಬಂದು ಬಿಡು!
ವಿಷ್ಣು ಹೆಗಡೆ, ಕುಮಟಾ
Friday, November 1, 2013
Tuesday, September 10, 2013
Monday, August 26, 2013
ನನ್ನ ಕಥೆ ಕೇಳಿ!
ಹಲೋ, ನಾನು ರೂಪಾಯಿ
ನನ್ನ ಕಥೆ ಕೇಳಿ
ಹುಟ್ಟಿದಾಗಿನಿಂದ
ಮೌಲ್ಯ ಕಳೆದುಕೊಳ್ಳುತ್ತಲೇ ಇದ್ದೇನೆ
ಅಪಮೌಲ್ಯ ಹೊಸತಲ್ಲ ನನಗೆ
ಆದರೆ, ದಿಢೀರ್
ಕುಸಿದಿರುವುದು
ಇದೇ ಮೊದಲು ನಾನು
ಒಂದೆಡೆ 'ದೊಡ್ಡಣ್ಣ'ನ ಆಘಾತ
ಇನ್ನೊಂದೆಡೆ ದೇಶೀಯ ಕುಸಿತ
ಹೊರ ಹರಿವು ಹೆಚ್ಚಿದೆ
ಒಳ ಹರಿವು ಕಡಿಮೆಯಾಗಿದೆ
ಬಡವಾಗಿರುವೆ, ಸೊರಗಿರುವೆ
ನನ್ನ ಕುಸಿತ ತಡೆಯಲು
ಆರ್ಬಿಐನ ಕ್ರಮ
ಫಲ ಕೊಡಲಿಲ್ಲ
ವಿತ್ತ'ತಜ್ಞ'ರ ಜ್ಞಾನ
ಉಪಯೋಗಕ್ಕೆ ಬರಲಿಲ್ಲ
ಪರಿಣಾಮ ಪತಾಳಕ್ಕಿಳಿದೆ
ನೀವಾದರೂ ನನ್ನ ಕುಸಿತ
ತಡೆಯಲು ಪ್ರಯತ್ನಿಸಿ
ಪೆಟ್ರೋಲ್ ಕಡಿಮೆ ಉಪಯೋಗಿಸಿ
ದೇಶೀಯ ಉತ್ಪನ್ನ ಬಳಸಿ
ಚಿನ್ನದ ಮೋಹ ಕಡಿಮೆ ಮಾಡಿ
ಆಮದು ಅವಲಂಬಿತ
ಐಷಾರಾಮಿ ವಸ್ತುಗಳ
ಖರೀದಿಗೆ ಮಿತಿ ಹಾಕಿ
ನನ್ನ ಜೀವ ಉಳಿಸಿ
ನಾನು ಮತ್ತಷ್ಟು ಕುಸಿದರೆ
ಬದುಕು ಭಾರವಾಗಲಿದೆ
ದರ ಏರಿಕೆಯ ಬಿಸಿ ತಟ್ಟಲಿದೆ
ವಿಷ್ಣು ಹೆಗಡೆ, ಕುಮಟಾ
Sunday, August 25, 2013
Saturday, August 24, 2013
Wednesday, June 19, 2013
Thursday, June 13, 2013
ನಗುಮೊಗದವಳು!
ಮುಂಗುರಳ ಸರಿಸಿ
ನಾಚಿ ನಸು ನಕ್ಕಳು
ಅವಳು
ನಗಮೊಗದವಳು
ತಂಗಾಳಿ ಬಂದಾಗ
ಒಮ್ಮೆ ಕಣ್ಮುಚ್ಚಿ
ಕೆನ್ನೆಯ ಸವರಿ
ಬೆವರ ಒರೆಸಿಕೊಂಡಳು
ಮುಖದಲ್ಲಿ ಚಂದ್ರಕಾಂತಿ
ಶ್ವೇತವರ್ಣ, ಕೆಂದುಟಿ
ಮೃದು ಮಾತು
ಮಿತ ಭಾಷಿ ಅವಳು
ಕಲ್ಪನೆಯ ಸುಂದರಿ ನೋಡಿದ
'ಆ ಕ್ಷಣ' ಕಂಡು
ಬಹುದಿನದ ಕನಸು
ಸಾಕಾರಗೊಂಡು
ಮನತುಂಬಿ ಬಂತು
ಸವಿ ಸ್ವಪ್ನಗಳು
ದಡ ಸೇರಿತ್ತು
ಅವಳ ನೋಡುತ್ತ
ಕಾಲ ಓಡುತ್ತಿತ್ತು
ಮಾತನಾಡುತ್ತ..
ಅವಳು, ನನ್ನವಳು
ನಗುಮೊಗದವಳು!
ವಿಷ್ಣು ಹೆಗಡೆ, ಕುಮಟಾ
Sunday, May 26, 2013
ಆ ಬಿಳಿಗಡ್ಡದ ತಾತ ಯಾರು?
ಸಂಜೆಯ ಸಮಯ. ಒಂದು ವಾಕ್ ಗೆ ಹೊರಟಿದ್ದೆ. ಆಗಷ್ಟೆ ಮಳೆ ನಿಂತು, ನೀಲಾಕಾಶ ಕೆಂಪಾಗಿತ್ತು. ತುಂತುರು ಹನಿ ಮೈಯನ್ನ ತಬ್ಬುತ್ತಿತ್ತು. ಮಣ್ಣಿನ ವಾಸನೆ ಹೊತ್ತ ತಂಗಾಳಿ ಮನಕೆ ತಂಪೆರೆದು ಉಲ್ಲಾಸಗೊಳಿಸಿತ್ತು. ನಾನು ಹೊರಟ ಉದ್ದೇಶವನ್ನೇ ಮರೆತು ನನಗರಿವಿಲ್ಲದಂತೆ ಅಲ್ಲೆ ಹತ್ತಿರದಲ್ಲಿರುವ ರಾಮಕೃಷ್ಣಾಶ್ರಮ ಪ್ರವೇಶಿಸಿ, ಧ್ಯಾನ ಮಂದಿರ ಹೊರಗಡೆ ಕೂತಿದಿದ್ದೆ. ಇನ್ನೇನು ಕಣ್ಮುಚ್ಚಿ ಒಂದೆರೆಡು ನಿಮಿಷ ಧ್ಯಾನ ಮಾಡಿ ಹೊರಡಬೇಕು ಅನ್ನುವಷ್ಟರಲ್ಲಿ ಪಕ್ಕದಲ್ಲಿದ್ದ ಇಳಿವಯಸ್ಸಿನ, ಬಿಳಿಗಡ್ಡದ, ರಾಮಜಪ ಮಾಡುತ್ತಿದ್ದ ವ್ಯಕ್ತಿಯೊಬ್ಬ ನಿನ್ನ ಜೀವನದ ಉದ್ದೇಶವೇನು ಅಂತಾ ಕೇಳಿದ.! ಆ ಘಳಿಗೆಯಲ್ಲಿ ಬಂದೆರಗಿದ ಅಪರಿಚಿತ ಭಾವ ಯಾಕೋ ನನ್ನನ್ನ ವಿಚಿಲಿತಗೊಳಿಸಿತು. ಅಷ್ಟಕ್ಕೆ ಸುಮ್ಮನಾಗಲಿಲ್ಲ ಪುಣ್ಯಾತ್ಮ. ಮಗು ನಿಧಾನವಾಗಿ ಯೋಚಿಸಿ ಅಂತಾ ಹೇಳಿ ನಾಪತ್ತೆಯಾದ. ಅಲ್ಲೆ ಪಕ್ಕದಲ್ಲೆ ಏಕಾಂಗಿಯಾಗಿ ಕೂತು ಯೋಚಿಸುತ್ತಾ ಹೋದೆ. ಉತ್ತರ ಹುಡುಕುವುದು ಕಷ್ಟವಾಯಿತು.!
ಇದಲ್ಲ ಅದು, ಅದಲ್ಲ ಇದು ಅಂತಾ ಹುಡುಕುತ್ತಾ ಹೋಗುತ್ತೇವೆ. ಕೈಗೆ ಬಂದಿದ್ದನ್ನ ದೂರ ತಳ್ಳುತ್ತಾ, ಯಾವತ್ತೊ ದೂರ ತಳ್ಳಿದ್ದನ್ನ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತೇವೆ. ಹೆಸರು ಮಾಡಬೇಕು, ಶ್ರೀಮಂತನಾಗಬೇಕು, ಹೊಸ ಮನೆಕಟ್ಟಿ, ಹೊಸ ಕಾರಿನಲ್ಲಿ ಸುತ್ತಾಡಬೇಕು. ಜಗತ್ತಿನಲ್ಲಿರುವ ಎಲ್ಲಾ ವೈಭೋಗವನ್ನ ಅನುಭವಿಸಬೇಕು. ನೆಮ್ಮದಿ-ಸುಖಬೇಕು. ಮಕ್ಕಳು-ಮೊಮ್ಮಕ್ಕಳ ಜೊತೆ ಬದುಕಬೇಕು. ಇಷ್ಟೆಲ್ಲ ಸಿಕ್ಕರೂ ಸಂತೋಷವಿಲ್ಲ. ಮತ್ತೆನಕ್ಕಾಗೋ ಹುಡುಕಾಟ. ಇದನ್ನೆಲ್ಲ ಸಂಪಾದಿಸುವುದೇ ಜೀವನದ ಉದ್ದೇಶನಾ? ಅಥವಾ ಇದಕ್ಕಾಗೆ ಬದುಕಬೇಕಾ? ಇದನ್ನೆಲ್ಲ ಯೋಚಿಸುತ್ತಾ ಹೋದಂತೆ ಉತ್ತರ ಮತ್ತಷ್ಟು ಕಗ್ಗಂಟಾಗುತ್ತಾ ಹೋಯಿತು. ಸ್ನೇಹಿತನೊಬ್ಬ ಹೇಳಿದ ಲೈಫ್ ಈಸ್ ಫೆಸ್ಟಿವಲ್ ಎನ್ನುವ ಮಾತು ನೆನಪಾಯಿತು. ಎಂಥಾ ಅದ್ಭುತ ಕಲ್ಪನೆ ಎಂದು ಸಂತೋಷಪಡುವಷ್ಟರಲ್ಲಿಯೇ ಸನ್ಯಾಸಿಯೊಬ್ಬರು ಹೇಳಿದ ಲೈಫ್ ಈಸ್ ನಥಿಂಗ್, ಒನ್ ಡೇ ವಿ ವಿಲ್ ಡೈ ಅನ್ನುವ ಮಾತು ಮನಸ್ಸನ್ನ ಹೊಕ್ಕಿತು. ದ್ವಂದ್ವ ಕಾಡಿತು. ಗಂಭೀರವಾಗಿ ಕೂತು ನನ್ನನ್ನ ಅರಿಯಲು ಯತ್ನಿಸಿದೆ. ನಾನು ನಾನಾಗಿ ಯೋಚಿಸಿದೆ. ಅಹಂ ಬ್ರಹ್ಮಾಸ್ಮಿ ಅನ್ನುವುದರ ಅರ್ಥ ಅಸ್ಪಷ್ಟವಾಗುತ್ತಾ ಹೋಯಿತು. ಪ್ರಕೃತಿ ಮತ್ತಷ್ಟು ಸುಂದರವೆನಿಸಿತು. ಮಳೆ ಇನ್ನಷ್ಟು ಆಪ್ತವೆನಿಸಿತು. ಏಳೆಂಟು ನಿಮಿಷ ಮನಸಿನೊಂದಿಗೆ ನಡೆದ ಮಾತುಕತೆಯಲ್ಲಿ ಬದುಕಿನ ಉದ್ದೇಶಕ್ಕೆ ಸ್ಪಷ್ಟ ಉತ್ತರ ಸಿಗಲಿಲ್ಲ. ಬಂದ ಯೋಚನೆಗಳನ್ನೆಲ್ಲ ತಳ್ಳಿ ಹಾಕಲು ನೋಡಿ, ಮನಸ್ಸನ್ನ ಏಕಾಗ್ರಗೊಳಿಸಲು ಪ್ರಯತ್ನಿಸಿದೆ. ಮನಸ್ಸು ಸ್ತಬ್ಧಗೊಂಡಿತು.
ಕೆಲ ಹೊತ್ತಿನ ನಂತರ ಕಣ್ತೆರೆದೆ. ಸಯಮ ಓಡಿದಂತೆ ಭಾಸವಾಯಿತು. ಮಠದಲ್ಲಿ ಜನಜಂಗುಳಿ ಮಾಯವಾಗಿತ್ತು. ಹೊರಡೋಣ ಎಂದು ಮತ್ತೆ ಧ್ಯಾನ ಮಂದಿರದತ್ತ ಬಂದಾಗ ಬಿಳಿಗಡ್ಡ ವ್ಯಕ್ತಿಯನ್ನ ನೋಡಿದೆ. ಹಿಂಬಾಲಿಸಿದೆ.! "ನಿನ್ನ ಜೀವನದ ಉದ್ದೇಶವೇನು, ಯೋಚಿಸು ಮಗು" ಅಂತಾ ಹೇಳಿ ನಾಪತ್ತೆಯಾಗುತ್ತಿರುವ ದೃಶ್ಯ ಕಂಡುಬಂತು. ನನಗೆ ಇನ್ನಷ್ಟು ಕೂತುಹಲ ಹೆಚ್ಚಿತು. ಈ ತಾತನನ್ನ ಮಾತಾಡಿಸಲೇಬೇಕು ಅಂತಾ ಅವರತ್ತ ಹೋದೆ. ನೋಡಿದ ತಕ್ಷಣವೇ ನನಗೆ ಮತ್ತದೇ ಪ್ರಶ್ನೆ ಕೇಳಿದರು. ಅವರನ್ನ ಮಾತಿಗೆಳೆಯುವ ಪ್ರಯತ್ನ ಮಾಡಿದೆ. ಮಾತನಾಡಲಿಲ್ಲ, ಅಲ್ಲಿಂದ ಕಾಲ್ಕಿತ್ತರು.ಏನೇ ಇರಲಿ, ನನ್ನೊಳಗೆ ಬದುಕಿನ ಉದ್ದೇಶದ ಪ್ರಶ್ನೆ ಬಿತ್ತಿ ಕೆಲ ಸಮಯ ಯೋಚಿಸುವಂತೆ ಮಾಡಿದ ತಾತನಿಗೆ ಮನಸಿನಲ್ಲೆ ಥ್ಯಾಂಕ್ಸ್ ಹೇಳಿದೆ. ಮನೆಗೆ ಬಂದರೂ ಆ ಬಳಿಗಡ್ಡದ ನಿಗೂಢ ವ್ಯಕ್ತಿಯ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತಲೇ ಇತ್ತು.
- ವಿಷ್ಣು ಹೆಗಡೆ, ಕುಮಟಾ
Sunday, April 28, 2013
Subscribe to:
Posts (Atom)