ಪುಟ್ಟ ಹಳ್ಳಿಯಿಂದ ಭವಿಷ್ಯ ಅರಸಿ, ಬಂದಿದ್ದು ಹೈದರಾಬಾದ್ಗೆ.. ಬಸ್ ನಿಗದಿತ ಸಮಯಕ್ಕಿಂತ ಒಂದೆರಡು ಗಂಟೆ ಲೇಟಾಗೇ ಎಮ್.ಜಿ ಬಸ್ ಸ್ಟ್ಯಾಂಡ್ ತಲುಪಿತ್ತು.. ನನಗದು ಹೊಸ ಪ್ರಪಂಚ, ಹೊಸ ದಿನ, ನೂತನ ಅನುಭವ.. ಸುತ್ತ ಮುತ್ತಲಿನ ವಾತಾವರಣವನ್ನ ಕಂಡು ಒಂದೆರಡು ಕ್ಷಣದಲ್ಲೇ ನಿಜಾಮರ ನಾಡನ್ನ ಅರ್ಥಮಾಡಿಕೊಂಡೆ. ಒರಟು ಜನ, ಚರಂಡಿಯಿಂದ ಬರುತ್ತಿದ್ದ ದುರ್ವಾಸನೆಯನ್ನ ನೋಡಿ, ನಮ್ಮೂರೇ ಚೆಂದ ಅಂತಾ ಮನಸ್ಸು ಹೇಳ್ತಿತ್ತು. ಎಲ್ ನೋಡಿದ್ರು ಚಿತ್ರ ಮಂದಿರಗಳು, ಅಲ್ಲಿ ಸಿಹಿಗೆ ಮುತ್ತಿದ ಇರುವೆ ತರ ಇರೋ ಜನಜಂಗುಳಿಯನ್ನ ನೋಡಿ ದಂಗಾದೆ..
ಆಗ್ಲೆ ಸಮಯ 9 ಗಂಟೆ ಆಗಿತ್ತು. ಬಸ್ ಸ್ಟ್ಯಾಂಡ್ ಪಕ್ಕದಲ್ಲೇ ಇದ್ದ ಹೊಟೇಲ್ ನಲ್ಲಿ ಲಘು ಉಪಹಾರ ಸೇವಿಸಿ, ಒಂದು ಜ್ಯೂಸ್ ಕುಡಿದು, ಅಡ್ರೆಸ್ ಕೇಳ್ಕೊಂಡು , ಮಧ್ಯಾಹ್ನದ ವೇಳೆಗೆ ರಾಮೋಜಿ ಫಿಲಂ ಸಿಟಿಗೆ ಬಂದೆ.. ಬಿಡು ಬಿಸಿಲಿನ ತಾಪಕ್ಕೆ ನಾನಾಗಲೇ ಬೆಂಡಾಗಿದ್ದೆ. ಕೆಂಪಾಗಿದ್ದೆ.. ಅಂತೂ ಅಲ್ಲಿ ಇಲ್ಲಿ ಅಲೆದು ಹೆಚ್.ಆರ್.ಭೇಟಿ ಮಾಡಿ ಡ್ಯೂಟಿ ರಿಪೋರ್ಟ್ ಮಾಡಿಕೊಂಡೆ.. ಟೀವಿ ಚಾನಲ್ಗಳ ಸೊಬಗನ್ನ ಕಂಡು ಮನಸ್ಸಿನಲ್ಲೇ ಬೀಗಿದೆ.. ಒಂದ್ಕಡೆ ಕೆಲಸದ ಖುಷಿ.. ಇನ್ನೊಂದ್ ಕಡೆ ಹೊಸ ಜೀವನ, ಹೊಸ ಪ್ರದೇಶ, ವರ್ಕ್ ಹೇಗ್ ಇರುತ್ತೋ ಅನ್ನೋ ಭಯ..?
ನಾನು ಸಂಪ್ರದಾಯಸ್ಥ ವಾತಾವರಣದಿಂದ ಬಿಡುಗಡೆ ಬಯಸಿದ್ದೆ. ಸಾಂಸ್ಕೃತಿಕ ಪರಿಸರ, ಹಬ್ಬದ ಹಾಡು-ಕುಣಿತ, ಶ್ರಾವಣ ಮಾಸದ ಭಜನೆ ನನಗೆ ಇಷ್ಟವಾಗ್ತಿರ್ಲಿಲ್ಲ.. ( ಈಗ ಹಳ್ಳಿ ಸೊಗಡೆ ಇಷ್ಟ - ನಮ್ಮೂರೆ ಚೆಂದ ) ಹೀಗಾಗಿ ಸ್ವತಂತ್ರವಾಗಿ ಬದುಕಬೇಕೆನ್ನವ ನನ್ನ ಆಸೆಗೆ ರೆಕ್ಕೆಪುಕ್ಕ ಬಂದಿತ್ತು. ಉಂಡಾಡಿ ಗುಂಡನ ಹಾಗಿದ್ದ ನನಗೆ ಒಂದೆರಡು ದಿನದಲ್ಲೇ ಜೀವನ ಅರ್ಥವಾಗಿತ್ತು. ಬಂದ ದಿವಸದಿಂದ ಕಣ್ಣಿಗೆ ಬಿದ್ದಿದ್ದು, ಮನಸ್ಸಿನಲ್ಲಿ ಸೇರಿಹೋಗಿದ್ದು, ಹೃದಯ ಕಲುಕಿದ್ದು, ಚುಚ್ಚಿದ್ದು ನೂರಾರು ಚಿತ್ರಗಳು..!!!
ಹೈಕೋರ್ಟ್ ಕಾಲೋನಿಯಲ್ಲಿ ಕನ್ನಡ ಭವನವೆಂಬ ಹಿರಿಮೆ ಹೊಂದಿದ್ದ ಬಿಲ್ಡಿಂಗ್ನಲ್ಲಿ ವಾಸ.. ಅಲ್ಲಿಂದ ಆಫೀಸ್ಗೆ ಹದಿನೈದು ನಿಮಿಷದ ಹಾದಿ.. ಕಂಪನಿ ಬಸ್ ನಿಂದ ಪಿಕಪ್, ಡ್ರಾಪ್ ಇತ್ತು.. ಕೆಲಸಕ್ಕೆ ಹೋದ ಮೊದಲ ದಿನವೇ ಸುದ್ದಿ ಮಾಧ್ಯಮದ ತರ ತರ ದೃಶ್ಯಗಳನ್ನ ಕಂಡು ಬೆಪ್ಪಾದೆ.. ಮಂಕಾದೆ..
ರೂಮಿನಲ್ಲಿ ಕಳೆಯುತ್ತಿದ್ದ ದಿನಗಳು ಎಂದಿಗೂ ಮನಸ್ಸಿನಿಂದ ಮಾಸುವುದಿಲ್ಲ. ಒಬ್ಬನಿಗೆ ತಮಿಳು ಸಿನಿಮಾ ನೋಡೋ ಆಸೆ. ಇನ್ನೊಬ್ಬ ಸ್ನೇಹಿತನಿಗೆ ಡಬ್ಲ್ಯೂಡಬ್ಲ್ಯೂಎಫ್ ಹೆಚ್ಚು.. ಮತ್ತೊಬ್ಬನಿಗೆ ತೆಲುಗು ಮೋಹ.. ನನಗೆ ಕ್ರಿಕೆಟ್ ನೋಡೋ ಚಟ.. ಇರೋದು ಒಂದೇ ಟೀವಿ.. ಹೀಗಾಗಿ ಕಿತ್ತಾಡಿದ್ದು ಇದೆ..
ಹೈದರಾಬಾದ್ ನಮ್ಮ ಬೆಂಗಳೂರಿನ ತರ ಸುಂದರ ನಾಡಲ್ಲ.. ವ್ಯವಸ್ಥಿತವಾಗಿ ಕಟ್ಟಿದ ನಗರವಲ್ಲ.. ಅಡ್ಡಾತಿಡ್ಡಿಯಾಗಿ, ಬೇಕಾಬಿಟ್ಟಿಯಾಗಿ ಬೆಳೆದಿದೆ. ಓಲ್ಡ್ ಸಿಟಿ , ನ್ಯೂಸಿಟಿ ಅನ್ನೋ ಎರಡು ಕಂದಕಗಳಿವೆ.. ಎಲ್ಲೂ ಟ್ರಾಫಿಕ್ ರೂಲ್ಸ್ ಗೆ ಬೆಲೆನೇ ಇಲ್ಲ.. ಆದ್ರೂ, ಒಂದಿಷ್ಟು ಪ್ರವಾಸಿ ತಾಣಗಳು ಮನಸ್ಸನ್ನ ರಂಜಿಸೋದು ಸುಳ್ಳಲ್ಲ..
ರಾಮೋಜಿ ಫಿಲಂ ಸಿಟಿ, ಗೋಲ್ಕೋಂಡ, ಚಾರ್ಮೀನಾರ್, ಹುಸೇನ್ ಸಾಗರ್, ಲುಂಬಿನಿ ಗಾರ್ಡನ್ ಬಿಟ್ರೆ ಬೇರೇನೂ ಅಷ್ಟೇನೂ ಸುಂದರವಾಗಿಲ್ಲ. ಸೋಗಸಾಗಿಲ್ಲ. ನಗರದಲ್ಲಿ ಎಲ್ ನೋಡಿದ್ರೂ ಗಲೀಜು, ಕಿರಿಕಿರಿ ಹುಟ್ಟಿಸೋ ಕಿರಿದಾದ ರಸ್ತೆಗಳು, ನಗರದ ಮಧ್ಯಭಾಗದಲ್ಲಿದ್ದು ದುರ್ವಾಸನೆ ಪಸರಿಸುತ್ತಿರೋ ನದಿ.. ಇದನ್ನೆಲ್ಲ ನೋಡಿದ್ರೆ, ಇದು ಯಾವ್ ಸೀಮೆ ಊರು ಅನಿಸುತ್ತೆ.. ಮೂರುವರೆ ವರ್ಷದಲ್ಲಿ ಒಂದ್ ಒಳ್ಳೆ ಹುಡುಗಿಯೂ ನೋಡ್ಲಿಕ್ಕೆ ಸಿಕ್ಕಿಲ್ಲ.. ಈ ವಿಷಯದಲ್ಲಿ ಬೆಂಗಳೂರು ಬೆಸ್ಟ್.. ಫಸ್ಟ್..!!!
ಹೈದರಾಬಾದ್ ನಲ್ಲಿ ಕಳೆದ ಮೂರುವರೆವರ್ಷಗಳು ನನಗೆ ಜೀವನಪಾಠ ಕಲಿಸಿದ್ದು ಸುಳ್ಳಲ್ಲ.. ಬದುಕನ್ನ, ಜನರನ್ನ ಅರ್ಥಮಾಡಿಕೊಂಡಿದ್ದು ಅಲ್ಲೆ. ಅಲ್ಲಿಗೆ ಹೋಗುವಾಗ ಬೇಜವಾಬ್ದಾರಿ ವ್ಯಕ್ತಿಯಾಗಿದ್ದೆ.. ಸಮಯಪಾಲನೆ ಅನ್ನೊ ಪದನೇ ಗೊತ್ತಿರ್ಲಿಲ್ಲ.. ಈಗ ಹಾಗಿಲ್ಲ, ಎಲ್ಲವೂ ಅರ್ಥವಾಗಿದೆ.. ಹೀಗಾಗಿ ಆ ಊರು ನನಗೆ ಶಾಲೆಯಂತೆ.. ಅಲ್ಲಿನ ಜನರು, ಮೇಷ್ಟ್ರು..!!!
ವಿಷ್ಣು ಹೆಗಡೆ, ಕುಮಟಾ










