Friday, September 23, 2011

ನಿಜಾಮರನಾಡಲ್ಲಿ...

ಪುಟ್ಟ ಹಳ್ಳಿಯಿಂದ ಭವಿಷ್ಯ ಅರಸಿ, ಬಂದಿದ್ದು ಹೈದರಾಬಾದ್ಗೆ.. ಬಸ್ ನಿಗದಿತ ಸಮಯಕ್ಕಿಂತ ಒಂದೆರಡು ಗಂಟೆ ಲೇಟಾಗೇ ಎಮ್.ಜಿ  ಬಸ್ ಸ್ಟ್ಯಾಂಡ್ ತಲುಪಿತ್ತು.. ನನಗದು ಹೊಸ ಪ್ರಪಂಚ, ಹೊಸ ದಿನ, ನೂತನ ಅನುಭವ.. ಸುತ್ತ ಮುತ್ತಲಿನ ವಾತಾವರಣವನ್ನ ಕಂಡು ಒಂದೆರಡು ಕ್ಷಣದಲ್ಲೇ ನಿಜಾಮರ ನಾಡನ್ನ ಅರ್ಥಮಾಡಿಕೊಂಡೆ. ಒರಟು ಜನ, ಚರಂಡಿಯಿಂದ ಬರುತ್ತಿದ್ದ ದುರ್ವಾಸನೆಯನ್ನ ನೋಡಿ, ನಮ್ಮೂರೇ ಚೆಂದ ಅಂತಾ ಮನಸ್ಸು ಹೇಳ್ತಿತ್ತು. ಎಲ್ ನೋಡಿದ್ರು ಚಿತ್ರ ಮಂದಿರಗಳು, ಅಲ್ಲಿ ಸಿಹಿಗೆ ಮುತ್ತಿದ ಇರುವೆ ತರ ಇರೋ ಜನಜಂಗುಳಿಯನ್ನ ನೋಡಿ ದಂಗಾದೆ..


ಆಗ್ಲೆ ಸಮಯ 9 ಗಂಟೆ ಆಗಿತ್ತು. ಬಸ್ ಸ್ಟ್ಯಾಂಡ್ ಪಕ್ಕದಲ್ಲೇ ಇದ್ದ ಹೊಟೇಲ್ ನಲ್ಲಿ ಲಘು ಉಪಹಾರ ಸೇವಿಸಿ, ಒಂದು ಜ್ಯೂಸ್ ಕುಡಿದು,  ಅಡ್ರೆಸ್ ಕೇಳ್ಕೊಂಡು , ಮಧ್ಯಾಹ್ನದ ವೇಳೆಗೆ ರಾಮೋಜಿ ಫಿಲಂ ಸಿಟಿಗೆ ಬಂದೆ.. ಬಿಡು ಬಿಸಿಲಿನ ತಾಪಕ್ಕೆ ನಾನಾಗಲೇ ಬೆಂಡಾಗಿದ್ದೆ. ಕೆಂಪಾಗಿದ್ದೆ.. ಅಂತೂ ಅಲ್ಲಿ ಇಲ್ಲಿ ಅಲೆದು ಹೆಚ್.ಆರ್.ಭೇಟಿ ಮಾಡಿ ಡ್ಯೂಟಿ ರಿಪೋರ್ಟ್ ಮಾಡಿಕೊಂಡೆ.. ಟೀವಿ ಚಾನಲ್ಗಳ ಸೊಬಗನ್ನ ಕಂಡು ಮನಸ್ಸಿನಲ್ಲೇ ಬೀಗಿದೆ.. ಒಂದ್ಕಡೆ ಕೆಲಸದ ಖುಷಿ.. ಇನ್ನೊಂದ್ ಕಡೆ ಹೊಸ ಜೀವನ, ಹೊಸ ಪ್ರದೇಶ, ವರ್ಕ್ ಹೇಗ್ ಇರುತ್ತೋ ಅನ್ನೋ ಭಯ..?


ನಾನು ಸಂಪ್ರದಾಯಸ್ಥ ವಾತಾವರಣದಿಂದ ಬಿಡುಗಡೆ ಬಯಸಿದ್ದೆ. ಸಾಂಸ್ಕೃತಿಕ ಪರಿಸರ, ಹಬ್ಬದ ಹಾಡು-ಕುಣಿತ, ಶ್ರಾವಣ ಮಾಸದ ಭಜನೆ ನನಗೆ ಇಷ್ಟವಾಗ್ತಿರ್ಲಿಲ್ಲ.. ( ಈಗ ಹಳ್ಳಿ ಸೊಗಡೆ ಇಷ್ಟ - ನಮ್ಮೂರೆ ಚೆಂದ ) ಹೀಗಾಗಿ ಸ್ವತಂತ್ರವಾಗಿ ಬದುಕಬೇಕೆನ್ನವ ನನ್ನ ಆಸೆಗೆ ರೆಕ್ಕೆಪುಕ್ಕ ಬಂದಿತ್ತು. ಉಂಡಾಡಿ ಗುಂಡನ ಹಾಗಿದ್ದ ನನಗೆ ಒಂದೆರಡು ದಿನದಲ್ಲೇ ಜೀವನ ಅರ್ಥವಾಗಿತ್ತು. ಬಂದ ದಿವಸದಿಂದ ಕಣ್ಣಿಗೆ ಬಿದ್ದಿದ್ದು, ಮನಸ್ಸಿನಲ್ಲಿ ಸೇರಿಹೋಗಿದ್ದು, ಹೃದಯ ಕಲುಕಿದ್ದು, ಚುಚ್ಚಿದ್ದು ನೂರಾರು ಚಿತ್ರಗಳು..!!!

ಹೈಕೋರ್ಟ್ ಕಾಲೋನಿಯಲ್ಲಿ ಕನ್ನಡ ಭವನವೆಂಬ ಹಿರಿಮೆ ಹೊಂದಿದ್ದ ಬಿಲ್ಡಿಂಗ್ನಲ್ಲಿ ವಾಸ.. ಅಲ್ಲಿಂದ ಆಫೀಸ್ಗೆ ಹದಿನೈದು ನಿಮಿಷದ ಹಾದಿ.. ಕಂಪನಿ ಬಸ್ ನಿಂದ ಪಿಕಪ್, ಡ್ರಾಪ್ ಇತ್ತು.. ಕೆಲಸಕ್ಕೆ ಹೋದ ಮೊದಲ ದಿನವೇ ಸುದ್ದಿ ಮಾಧ್ಯಮದ ತರ ತರ ದೃಶ್ಯಗಳನ್ನ ಕಂಡು ಬೆಪ್ಪಾದೆ.. ಮಂಕಾದೆ..

ರೂಮಿನಲ್ಲಿ ಕಳೆಯುತ್ತಿದ್ದ ದಿನಗಳು ಎಂದಿಗೂ ಮನಸ್ಸಿನಿಂದ ಮಾಸುವುದಿಲ್ಲ. ಒಬ್ಬನಿಗೆ ತಮಿಳು ಸಿನಿಮಾ ನೋಡೋ ಆಸೆ. ಇನ್ನೊಬ್ಬ ಸ್ನೇಹಿತನಿಗೆ ಡಬ್ಲ್ಯೂಡಬ್ಲ್ಯೂಎಫ್ ಹೆಚ್ಚು.. ಮತ್ತೊಬ್ಬನಿಗೆ ತೆಲುಗು ಮೋಹ.. ನನಗೆ ಕ್ರಿಕೆಟ್ ನೋಡೋ ಚಟ.. ಇರೋದು ಒಂದೇ ಟೀವಿ.. ಹೀಗಾಗಿ ಕಿತ್ತಾಡಿದ್ದು ಇದೆ..

ಹೈದರಾಬಾದ್ ನಮ್ಮ ಬೆಂಗಳೂರಿನ ತರ ಸುಂದರ ನಾಡಲ್ಲ.. ವ್ಯವಸ್ಥಿತವಾಗಿ ಕಟ್ಟಿದ ನಗರವಲ್ಲ.. ಅಡ್ಡಾತಿಡ್ಡಿಯಾಗಿ, ಬೇಕಾಬಿಟ್ಟಿಯಾಗಿ ಬೆಳೆದಿದೆ. ಓಲ್ಡ್ ಸಿಟಿ , ನ್ಯೂಸಿಟಿ ಅನ್ನೋ ಎರಡು ಕಂದಕಗಳಿವೆ.. ಎಲ್ಲೂ ಟ್ರಾಫಿಕ್ ರೂಲ್ಸ್ ಗೆ  ಬೆಲೆನೇ ಇಲ್ಲ.. ಆದ್ರೂ, ಒಂದಿಷ್ಟು ಪ್ರವಾಸಿ ತಾಣಗಳು ಮನಸ್ಸನ್ನ ರಂಜಿಸೋದು ಸುಳ್ಳಲ್ಲ..

ರಾಮೋಜಿ ಫಿಲಂ ಸಿಟಿ, ಗೋಲ್ಕೋಂಡ, ಚಾರ್ಮೀನಾರ್, ಹುಸೇನ್ ಸಾಗರ್, ಲುಂಬಿನಿ ಗಾರ್ಡನ್ ಬಿಟ್ರೆ ಬೇರೇನೂ ಅಷ್ಟೇನೂ ಸುಂದರವಾಗಿಲ್ಲ. ಸೋಗಸಾಗಿಲ್ಲ. ನಗರದಲ್ಲಿ ಎಲ್ ನೋಡಿದ್ರೂ ಗಲೀಜು, ಕಿರಿಕಿರಿ ಹುಟ್ಟಿಸೋ ಕಿರಿದಾದ ರಸ್ತೆಗಳು, ನಗರದ ಮಧ್ಯಭಾಗದಲ್ಲಿದ್ದು ದುರ್ವಾಸನೆ ಪಸರಿಸುತ್ತಿರೋ ನದಿ.. ಇದನ್ನೆಲ್ಲ ನೋಡಿದ್ರೆ, ಇದು ಯಾವ್ ಸೀಮೆ ಊರು ಅನಿಸುತ್ತೆ.. ಮೂರುವರೆ ವರ್ಷದಲ್ಲಿ ಒಂದ್ ಒಳ್ಳೆ ಹುಡುಗಿಯೂ ನೋಡ್ಲಿಕ್ಕೆ ಸಿಕ್ಕಿಲ್ಲ.. ಈ ವಿಷಯದಲ್ಲಿ ಬೆಂಗಳೂರು ಬೆಸ್ಟ್.. ಫಸ್ಟ್..!!!

ಹೈದರಾಬಾದ್ ನಲ್ಲಿ  ಕಳೆದ ಮೂರುವರೆವರ್ಷಗಳು ನನಗೆ ಜೀವನಪಾಠ ಕಲಿಸಿದ್ದು ಸುಳ್ಳಲ್ಲ.. ಬದುಕನ್ನ, ಜನರನ್ನ ಅರ್ಥಮಾಡಿಕೊಂಡಿದ್ದು  ಅಲ್ಲೆ. ಅಲ್ಲಿಗೆ ಹೋಗುವಾಗ ಬೇಜವಾಬ್ದಾರಿ ವ್ಯಕ್ತಿಯಾಗಿದ್ದೆ.. ಸಮಯಪಾಲನೆ ಅನ್ನೊ ಪದನೇ ಗೊತ್ತಿರ್ಲಿಲ್ಲ.. ಈಗ ಹಾಗಿಲ್ಲ, ಎಲ್ಲವೂ ಅರ್ಥವಾಗಿದೆ.. ಹೀಗಾಗಿ ಆ ಊರು ನನಗೆ ಶಾಲೆಯಂತೆ.. ಅಲ್ಲಿನ ಜನರು, ಮೇಷ್ಟ್ರು..!!!


ವಿಷ್ಣು ಹೆಗಡೆ, ಕುಮಟಾ

Monday, September 19, 2011

ಸಹಾಯಕ್ಕಾಗಿ ಬೆತ್ತಲೆ.!!!



ಇದೆಲ್ಲ ಪುಕ್ಕಟ್ಟೆ ಪ್ರಚಾರಕ್ಕಾಗಿ..  ಟೀಂ ಇಂಡಿಯಾ ಗೆದ್ದರೆ ಬಟ್ಟೆಬಿಚ್ತಿನಿ ಅಂತಾ ಹೇಳಿ ದಿನಬೆಳ್ಗಾಗೊದ್ರೆಳ್ಗೆ ಸ್ಟಾರ್ ಪಟ್ಟಕ್ಕೇರಿದ್ದಳು ಮಾಡೆಲ್  ಪೂನಂ ಪಾಂಡೆ.. ಪೂನಂ ಕ್ರೀಡಾಸ್ಫೂರ್ತಿ ನೋಡಿ ದಂಗಾದ ಪಾಕ್ ಮಾಡೆಲ್ ವೀಣಾ ಮಲ್ಲಿಕ್, ಸೋಲಿನಿಂದ ಕಳೆಗುಂದಿರೋ ಪಾಕ್ ತಂಡಕ್ಕೆ ಜೀವತುಂಬಲು ಅರೆಬೆತ್ತಲಾಗ್ತಿನಿ ಅಂತಾ ಚಮಕ್ ಕೊಟ್ಟಿದ್ದಳು.. ಈಗ ಮಾಡೆಲ್ ಡಿಜೆ ಜೆನ್ನಿ ಸರದಿ..

ಬಡ ಹಾಕಿ ಆಟಗಾರರಿಗೆ ಆರ್ಥಿಕ ಸಹಾಯ ನೀಡಲು ಜೆನ್ನಿ ಬೆತ್ತಲಾಗ್ತಿದ್ದಾಳೆ..!!! ಈಗಾಗ್ಲೆ ಫೋಟೋಶೂಟ್ ಮುಗ್ದಿದೆ.. ಬಿಸಿಬಿಸಿ ಚಿತ್ರಗಳನ್ನ ಹರಾಜ್ ಹಾಕೋದ್ ಒಂದೇ ಬಾಕಿ.. ಹಜಾಜಿನಿಂದ ಸಂಗ್ರಹವಾಗೋ ಹಣವನ್ನ ಆಟಗಾರರಿಗೆ ಕೊಡ್ತಾಳಂತೆ. ಪುರುಷರ ಮ್ಯಾಗ್ಜಿನ್ ಒಂದು ಹಾಟ್ ಚಿತ್ರಗಳನ್ನ ಕೊಂಡ್ಕೊಂಡ್ ಬಿಸಿಬಿಸಿ ದೋಸೆಯಂತೆ ಸೇಲ್ ಮಾಡ್ಲಿಕ್ಕೆ ಲೆಕ್ಕಾಚಾರ ಹಾಕಿದೆ.. ಜೆನ್ನಿಗೆ 10ಲಕ್ಷ ಮುಂಗಡ ಹಣವನ್ನೂ ಕೊಟ್ಟಿದೆ..

ಏಷ್ಯನ್ ಟ್ರೋಫಿ ಗೆದ್ದ ಹಾಕಿ ಆಟಗಾರಿಗೆ ಪುಡಿಗಾಸು ಕೊಟ್ಟಿದ್ದು ಸರಿಯಲ್ಲ. ಕ್ರಿಕೆಟ್ ಆಟಗಾರರಿಗೆ ಕೋಟಿ ಕೋಟಿ ಕೋಡೋದು ಯಾವ್ ನ್ಯಾಯ ಅಂತೆಲ್ಲಾ ಮೈಮೇಲೆ ಬಂದೋವ್ರತರ ಆಡ್ತಿದ್ದಾಳೆ.. ಇಷ್ಟು ದಿನ ಸುಮ್ಮನಿದ್ದ ಜೆನ್ನಿ, ಇದ್ದಕ್ಕಿದ್ದಂತೆ ಹಾಕಿ ಸ್ಟಿಕ್ ಹಿಡ್ಕೊಂಡು ಗ್ರೌಂಡ್ಗೆ ಬರ್ಲಿಕ್ಕೆ ಕಾರಣ ಏನು..? ಸಹಾಯ ಮಾಡ್ಲಿಕ್ಕೆ ಬೆತ್ತಲೆನೇ ಆಗ್ಬೇಕಾ..? ಇದೆಲ್ಲ ಪ್ರಚಾರಕ್ಕಾಗಿ ಅನ್ನೋದು ಎಂಥಾ ದಡ್ಡನಿಗಾದ್ರು ಗೊತ್ತಾಗುತ್ತೆ.

ಒಂದೇ ಕಲ್ಲಿಗೆ ಎರಡ್ ಹಕ್ಕಿ ಹೊಡ್ದಿದ್ದಾಳೆ ಜೆನ್ನಿ. ಸಹಾಯದ ನೆಪದಲ್ಲಿ ಬೆತ್ತಲೆನಾಟಕ ಆಡಿ, ಪ್ರಚಾರಕ್ಕೆ ಮುನ್ನುಡಿ ಬರೆದಿದ್ದಾಳೆ.. ಒಂದ್ ಅರ್ಥದಲ್ಲಿ ಪೂನಂಗಿಂತ ಜೆನ್ನಿ ಬುದ್ಧಿವಂತೆ ಅಲ್ವಾ. ???

ವಿಷ್ಣು ಹೆಗಡೆ, ಕುಮಟಾ


Sunday, September 18, 2011

ಹುಡುಗರ ಲೈಫು ಇಷ್ಟೇನೆ...!!!



ಬಾಲ್ಯ, ಪ್ರೌಢ, ಯವ್ವನದ ಗೊಂದಲಗಳು, ತುಮುಲಗಳು, ಆಕರ್ಷಣೆಗಳು, ತಾತ್ಸಾರಗಳು, ಪ್ರೀತಿಗಳು.. ಅಪರಾತಪರಾ ಮನಸ್ಥಿತಿಗಳು.. ಯುವಕರ ಲೈಫು ಇಷ್ಟೇನೆ..!!!
ಬದುಕು, ಪ್ರೀತಿ, ಕೆಲಸ ಕುರಿತು ಯುವಕರ ಅಸಡ್ಡೆ, ಉಡಾಫೆಯನ್ನ "ಲೈಫು ಇಷ್ಟೇನೆ" ಸಿನಿಮಾದಲ್ಲಿ ಯೋಗರಾಜ್ ಭಟ್ಟರು ವಿಡಂಬನೆಯಾಗಿ ಕಟ್ಟಿಕೊಟ್ಟಿದ್ದು ಸುಳ್ಳಲ್ಲ..

ಬೆಂಗಳೂರಿನಲ್ಲಿರೋ ಫೋರಂ, ಪಿವಿಆರ್, ಮಾಲ್ಗಳಿಗೆ ಹೋದ್ರೆ ಸಾಕು ಯುವಕರ ಲೈಫು ಇಷ್ಟೇನೆ ಅಂತಾ ಗೊತ್ತಾಗ್ ಬಿಡುತ್ತೆ..

ಕಾದು ಕಾದು ಬಳಲಿ, ಬೆಂಡಾದ ಮೇಲೆ ಬಳಕುತ್ತಾ ಬರ್ತಾಳೆ ಹುಡುಗಿ.. ಅವನಿಗೋ ಅಮೃತವನ್ನೇ ಸವಿದ ರುಚಿ.! ಅವಳನ್ನ ಕಂಡ್ ಕೂಡ್ಲೆ ಹಾಯ್ ಹೇಳಿ, ಇಬ್ಬರೂ ಅಂಟಿಕೊಂಡೆ ಒಳಗಡೆ ಹೋಗ್ತಾರೆ.. ಮೊದ್ಲು ಐಸ್ ಕ್ರೀಮ್, ಆಮೇಲೆ ಶಾಪಿಂಗ್, ನಂತ್ರ ಸಿನಿಮಾ. ಹುಡ್ಗಿ ಪೋಸ್ಟರ್ ನೋಡ್ತಾ ಇದ್ರೆ, ಹುಡ್ಗ ಕ್ಯೂನಲ್ಲಿ ನಿಂತು ಟಿಕೆಟ್
ತೆಗೆದುಕೊಳ್ತಾನೆ.. ಹಿಂದಿನ ಸಾಲಿನಲ್ಲಿ ಕೂತು ಗುಸು ಗುಸು, ಪಿಸು ಪಿಸು ಅಂತಾ ಸಿನಿಮಾ ನೋಡೋ ಟೈಮ್ನಲ್ಲಿ ಹುಡ್ಗಿ ಕೊಟ್ಟ ಎರಡ್ ಚಮಕ್ಗೆ ಇಂಗ್ ತಿಂದ್ ಮಂಗನಂತಾದ ಹುಡ್ಗನಿಂದ ಹೊರ್ಗೆ ಬಂದಿದ್ದೆ ತಂಡ, ಮತ್ತೆರಡು ಐಸ್ ಕ್ರೀಮ್
ಬೋನಸ್... ಮೂರ್ ತಾಸ್ ಆಗೋದ್ರೆಳ್ಗೆ ಮೂರು ಸಾವಿರ ಉಡೀಸ್... ಫೋರಂ,ಪಿವಿಆರ್ , ಮಾಲ್ಗಳಲ್ಲಿ ಲೈಫು ಇಷ್ಟೇನೆ..!!!!








ಇದು ಸುಮ್ನೆ ಬರೆದಿದ್ದಲ್ಲ.. ಒಮ್ಮೆ ನನ್ನ ಸ್ನೇಹಿತ, ಬೆಸ್ಟ್ ಫ್ರೆಂಡ್ ( ಹುಡುಗಿ) ಕರ್ಕೊಂಡು ಪಿವಿಆರ್ ಸಿನಿಮಾಕ್ಕೆ ಹೋಗಿದ್ದಾಗ ನಡೆದ ಘಟನೆ ಇದು.. ಮೊನ್ನೆ ಲೈಫು ಇಷ್ಟೇನೆ ಸಿನಿಮಾಕ್ಕೆ ಹೋದಾಗ ಹೇಳ್ದ.. ನಾನಂತೂ ಸಿಕ್ಕಾಪಟ್ಟೆ ನಕ್ಕೆ..!!!

ಬೆಂಗಳೂರಿನಲ್ಲಿ ಹುಡುಗರ ಲೈಫು ಇಷ್ಟೇನೆ...!!!!!!!!

ವಿಷ್ಣು ಹೆಗಡೆ, ಕುಮಟಾ

Saturday, September 17, 2011

ಚಿತ್ರಬರಹ


ಊಟಕ್ಕಾಗಿ...















ಅಪಾಯಕಾರಿ ಕೆಲಸ

 















ಅಮ್ಮಾ..! ಗುಲಾಬಿ ಬೇಕಾ..?















ಇಲ್ಲಿ ಏನಾದ್ರೂ ಸಿಗುತ್ತಾ.???






















ತಮಾಷೆಗಾಗಿ..!



ಟೀವಿ ಚಾನಲ್ಗಳಲ್ಲಿ ಹಗಲು, ರಾತ್ರಿ ಎರಡೂ ಒಂದೇ
ಭಾನುವಾರ ಬಂದ್ರೆ ಸಾಕು,
ಎಲ್ಲರೂ ನೊಟೀಸ್ ಬೋರ್ಡ್ ಮುಂದೆ
ಶಿಫ್ಟ್ ನೋಡ್ಲಿಕ್ಕೆ ತಾ ಮುಂದೆ, ತಾ ಮುಂದೆ,
ನಾ ಮಾತ್ರ ಹಿಂದೆ, ಹಿಂದೆ.!!!


ಬ್ರೇಕಿಂಗ್ ಬಂತ್ ಅಂದ್ರೆ ತಿಂಡಿಯಿಲ್ಲ, ಊಟ ಇಲ್ಲ
ಎಲ್ರಿಗೂ ಲೈವೇ ಎಲ್ಲಾ
ನನಗೆ ಮಾತ್ರ ಅಂತಾ ಹಂಗಿಲ್ಲ.
ಯಾಕಂದ್ರೆ ನನಗೂ, ಅದ್ಕೂ ಸಂಬಂಧನೇ ಇಲ್ಲ.!!!
ವಿಷ್ಣು ಹೆಗಡೆ, ಕುಮಟಾ


ಸವಿ ಸವಿ ನೆನಪು..!







ಕಣ್ಣಾಮುಚ್ಚೆ
ಕಾಡೆಗೊಡೆ
ಉದ್ದಿನ ಮೂಟೆ
ಉರುಳೇಹೋಯ್ತು....!!!!

ರಸ್ತೆಯಲ್ಲಿ ಹೋಗುವಾಗ, ಪುಟ್ಟ ಮಕ್ಕಳು ಕಣ್ಣಾಮುಚ್ಚಾಲೆ ಆಡ್ತಿದ್ದನ್ನ ಕಂಡು ನಾನು ಬಾಲ್ಯದ ದಿನಗಳನ್ನ ನೆನೆಸಿಕೊಂಡೆ..

ಆ ನೆನಪುಗಳೇ ಮಧುರ. ಸುಂದರ.. ಕಳೆದುಹೋದ ದಿನಗಳನ್ನ ಸ್ಮರಿಸಿಕೊಂಡ್ರೆ, ರೋಮಾಂಚನ.. ಕೀಟಲೆ , ತಂಟೆ, ಜಗಳ, ಹೊಡೆದಾಟ, ಹೀಗೆ... ಒಂದಾ, ಎರಡಾ..! ಕೊನೆಯಲ್ಲಿ ಕೈಯಲ್ಲಿ ಆಗದಿದ್ದಾಗ ಅಳುವುದು..

ಬಯ್ಯೊ  ಟೀಚರ್, ಹೊಡೆಯೊ ಮೇಟ್ರು, ಬೇಜಾರಾದಾಗ ಕಾಡುಗುಡ್ಡಗಳ ಒಬ್ಬಂಟಿ ಅಲೆದಾಟ, ಸ್ನೇಹಿತನ ಮುನಿಸು, ತರಲೆ... ಅಬ್ಬಾ..! ನೆನಪುಗಳ ಜಾತ್ರೆಯೇ ತೆರೆದುಕೊಳ್ಳುತ್ತೆ.

ಮನೆಯಲ್ಲಿ ತಂದೆ, ತಾಯಿ ಬೈಯ್ತಿರಲಿಲ್ಲ.. ಪ್ರೀತಿಯಿಂದ ನೋಡಿಕೊಳ್ತಿದ್ರು.. ನನ್ಗೆ ಏನಾದ್ರು ಮೇಟ್ರು ಬೈದ್ರೆ, ಅಜ್ಜ ನೇರವಾಗಿ ಶಾಲೆಗೆ ಹೋಗಿ ರಂಪಾಟ ಮಾಡಿದ್ದು ಇದೆ.. ಕೇಳಿದಾಗಲೆಲ್ಲಾ ಕಷ್ಟವಾದ್ರೂ, ಅಪ್ಪ ಪ್ರೀತಿಯಿಂದ ಹಣ ಕೊಡ್ತಿದ್ದ. ನನಗೋ ಕಂಡಿದ್ದನ್ನೇಲ್ಲ ತಿನ್ನೋ ಆಸೆ.. ಅಂಗಡಿಯಲ್ಲಿ ಏನೇ ಹೊಸದು ಬಂದ್ರು, ತಿನ್ನೋ ಚಪಲ.. ಕೊಟ್ಟ ದುಡ್ಡನ್ನ ತಿನ್ನೊದಕ್ಕೆ ಕಾಲಿ ಮಾಡುತ್ತಿದ್ದೆ.. ನಯಾ ಪೈಸೆಯನ್ನ ನಾಳೆಗಾಗಿ ಇಟ್ಟುಕೊಳ್ತಿರ್ಲಿಲ್ಲ.. ಇಂದಿಗೂ ಅಷ್ಟೆ, ನಾಳೆಗಾಗಿ ಏನನ್ನೂ ಕೂಡಿಡದ ನಿಶ್ಚಿಂತೆಯ ಮನುಷ್ಯ ನಾನು..

ಶಾಲೆಗೆ ಹೋಗುವಾಗ ಬ್ಯಾಗ್ನಲ್ಲಿ ಆಟದ ವಸ್ತುಗಳೇ ಇರ್ತಿದ್ವು.. ಟೀಚರ್ ಇದನ್ನೆಲ್ಲ ಸುರಿದು ಎರಡೇಟು ಕೊಟ್ಟಿದ್ದು ಇದೆ.. ಮನೆಗೆ ಕಂಪ್ಲೇಂಟ್ ಮಾಡಿದ್ರು ನಾನ್ ನನ್ನ ಬುದ್ಧಿಯನ್ನ ಬಿಟ್ಟಿರ್ಲಿಲ್ಲ.

ಆದ್ರೆ, ಶಾಲೆಯಲ್ಲಿ ಶಾರದಾ ಪೂಜೆ, ಸ್ವಾತಂತ್ರ್ಯೋತ್ಸವ ಬಂದ್ರೆ, ಅಲಂಕಾರಕ್ಕಾಗಿ ಮೇಟ್ರಿಗೆ ನಾನೇ ಬೇಕಿತ್ತು.. ಆ ಸಮಯದಲ್ಲಿ ಟೀಚರ್ ನನ್ಗೆ ಬೆಣ್ಣೆ ಸವರಿ ಕೆಲಸ ಮಾಡ್ಸ್ಕೊಳ್ತಿದ್ರು.. ಮತ್ತೆ ಒಂದೆರಡು ದಿನ ಕಳೆದ ಮೇಲೆ ಬೆತ್ತದ ಏಟಿನ ರುಚಿ ಇದ್ದಿದ್ದೆ..

ರಜಾ ಸಿಕ್ರೆ ಸಾಕು ನನ್ನ ಪುಟ್ಟ ತಂಗಿಯ ಜೊತೆ ಆಟ ಆಡ್ತಿದ್ದೆ. ಕ್ರಿಕೆಟ್, ಚನ್ನೆಮಣೆ, ಕಳ್ಳಾ ಪೊಲೀಸ್ ಆಟ, ಲಗೋರಿ ಆಡಿದ್ದನ್ನ ನೆನೆಸಿಕೊಂಡ್ರೆ ಏನೋ ಒಂದ್ ರೀತಿ ಖುಷಿಯಾಗುತ್ತೆ.. ಯಾವುದೇ ಚರ್ಚಿಲ್ಲದೇ ಸಂತೋಷ ಸಿಗುತ್ತಿತ್ತು.. ಬಾಲ್ಯ ಎಷ್ಟು ಸಂದರ ಅಲ್ವಾ..?

ಈಗ ಎಲ್ಲಾ ಉಲ್ಟಾ-ಪಲ್ಟಾ.. ಕಾಲ ಬದ್ಲಾಗಿದೆ.. ಜೇಬಿಲ್ಲಿರುತ್ತಿದ್ದ ಚಿಲ್ಲರೆ ಕಾಸುಗಳ ಜಾಗದಲ್ಲಿ ಗರಿಗರಿ ಐದನೂರರ ನೋಟುಗಳು ಬಂದಿವೆ. ಸೈಕಲ್ ಬದ್ಲು ಬೈಕ್, ಐಷಾರಾಮಿ ಕಾರುಗಳು..  ಹಾಗೆನೇ ಮುಗ್ಧತೆಯೂ ಮನಸ್ಸಿನಿಂದಹೊರಟು ಹೋಗಿದೆ.. ಈಗೆನಿದ್ದರೂ ಕೃತಕ ಸಂತೋಷ.. ಒಲ್ಲದ ಮನಸ್ಸಿನ ನಗೆ.

ಇದನ್ನೆಲ್ಲ ನೆನಸಿಕೊಂಡ್ರೆ ಮತ್ತೆ ಬರಬಾರದೇ ಬಾಲ್ಯದ ದಿನಗಳು ಅನಿಸುತಿದೆ..


ವಿಷ್ಣು ಹೆಗಡೆ, ಕುಮಟಾ