Tuesday, November 22, 2011

ಇರುವೆ ಕಂಡಾಗ..!




ಮೊನ್ನೆ ಶನಿವಾರ.. ವೀಕ್ ಆಫ್ ಇತ್ತು.. ರಿಮೋಟ್ ಹಿಡಿದು 80 ಚಾನಲ್ಗಳನ್ನ ಜಾಲಾಡಿದೆ.. ಯಾವ್ದೆ ಮೂವಿಯಾಗ್ಲಿ, ಒಳ್ಳೆ ಕಾರ್ಯಕ್ರಮವಾಗ್ಲಿ ಇರ್ಲಿಲ್ಲ.. ಮನಸ್ಸಿಗೆ ಹಿತ ಕೊಡುವ, ಮದ ನೀಡುವ ಪ್ರೋಗ್ರಾಮ್, ಊಹುಂ... ಮನಸ್ಸಿನಲ್ಲೆ ಗೊಣಗುತ್ತಾ ಮೇಲೆದ್ದೆ. ಡೋರ್ ತೆಗೆದು ಹೊರಗಡೆ ಹೋದೆ.. ನಿಧಾನವಾಗಿ ಬಿಸುತ್ತಿದ್ದ ತಂಗಾಳಿ ಕೆನ್ನೆಯನ್ನ ಸವರುತ್ತಿತ್ತು. ಇಳಿ ಸಂಜೆಯಲ್ಲಿ ಮರೆಯಾಗುವ ಅರುಣ, ಪಡುವಣದಲ್ಲಿ ಮೂಡಿಸಿದ ರಂಗುರಂಗಿನ ಚಿತ್ತಾರ, ಕಲಾವಿದನ ಕುಂಚಗಳ ಬಣ್ಣವನ್ನ ಹೀರಿದಂತೆ ಕಂಡಿದ್ದು ಸುಳ್ಳಲ್ಲ..

ಹಾಗೆ ಕೆಳಗಿಳಿದು, ಬೋಂಡಾ, ಭಜ್ಜಿ ತಿನ್ನೋಣ ಅಂತಾ ಹೊರಟೆ.. ಆದ್ರೆ, ಹೋಗಿದ್ದು ಮಾತ್ರ ಜಿಲೇಬಿ ಅಂಗಡಿಗೆ.. ಸಿಹಿಯಾದ ಜಿಲೇಬಿಯನ್ನ ಮೆಲ್ಲಗೆ ಮೆಲ್ಲುತ್ತಿದ್ದೆ.. ಬಾಯಿಂದ ಜಾರಿ ಚಿಕ್ಕದೊಂದು ತುಂಡು, ಧಪ್ ಅಂತಾ ಕೆಳಗೆ ಬಿತ್ತು.. 'ಬಿಟ್ಹಾಕು' ಅಂತು ಮನಸ್ಸು.. ಕ್ಷಣಾರ್ಧದಲ್ಲೆ ಚಿಕ್ಕದೊಂದು ಇರುವೆ ದರ್ಶನ. ಅದನ್ನ ನೋಡುತ್ತಿದ್ದ ನನಗೆ ಅಚ್ಚರಿ.. ಜಿಲೇಬಿ ತುಂಡಿನ ಸಣ್ಣ ಸಂದಿಯಿಂದ, ಒಂದೊಂದೆ ಇರುವೆ ಹೊರಗಡೆ ಬರಲಾರಂಬಿಸಿತು.. ಕೈಯಲ್ಲಿದ್ದ ಜಿಲೇಬಿಯನ್ನ ನೋಡಿದೆ.. ಇರುವೆಗಳ ಸಾಲೆ ಇತ್ತು.. ಊಫ್ ಅಂತಾ ಉಗಿದು, ಅಂಗಡಿಯವನಿಗೆ ಹಣಕೊಟ್ಟು, ಬೈಯುತ್ತಾ ಬಂದೆ.. ಬಿಸಿ ಬಿಸಿ ಟೀ ಯನ್ನಾದ್ರು, ಕುಡಿಯೋಣ ಅಂತಾ ಹಾಲು ತಂದೆ.. ಸಕ್ಕರೆ ಡಬ್ಬ ತೆಗೆದ್ರೆ, ಅಲ್ಲೂ ಶಿಸ್ತಿನ ಸಿಪಾಯಿಗಳು ಸಕ್ಕರೆಯನ್ನ ಹೀರುತ್ತಾ ಕೂತಿದ್ವು .. ಈಗ ಯಾರಿಗೆ ಹೇಳೋದು..? ಡಬ್ಬದ ಮುಚ್ಚಳವನ್ನ ಸರ್ಯಾಗಿ ಹಾಕದಿರೋದಕ್ಕೆ ನನಗೆ ನಾನೇ ಬೈದುಕೊಂಡೆ..!!!

ವಿಷ್ಣು ಹೆಗಡೆ, ಕುಮಟಾ


Monday, November 21, 2011

ಸ್ನೇಹ ಅಂದ್ರೆ ಇದೇನಾ..?



ಈ ಬದುಕೆ ಹೀಗೆ..!? ಯಾರನ್ನೋ ಇಷ್ಟಪಡ್ತೀವಿ, ಯಾರ ಜೊತೆಗೋ ಬದುಕ್ತೀವಿ, ಬೇಡವಾದವರನ್ನ ನೆನಪು ಮಾಡ್ಕೋತ್ತೀವಿ, ಕೆಲವರನ್ನ ಮರೆತೀವಿ, ಇನ್ನೂ ಕೆಲವರನ್ನ ನೆನಪು ಮಾಡಿಕೊಂಡು ಕೊರಗ್ತೀವಿ.. ಫೈನಲ್ಲಾಗಿ ಯಾರಿಗೂ ಹೇಳದೆ, ಶಿವನಪಾದ ಸೇರ್ತೀವಿ.. ಏನ್ ಲೈಫ್ ರೀ ಇದು..? ಈ ರೀತಿ ಮೆಗಾ ಮೆಸೇಜೊಂದು ನಡುರಾತ್ರಿ ಸ್ನೇಹಿತನ ಮೊಬೈಲ್ನಿಂದ ಬಂದಿತ್ತು.. ಏನೋ ಲವ್ ಫೇಲ್ಯೂರ್ ಅಂತಾ ಸುಮ್ಮನಾಗಿಬಿಟ್ಟೆ..

ಜೀವನಾನುಭವ ತುಸು ವಿಭಿನ್ನವಷ್ಟೆ.. ಹಲವು ವರ್ಷಗಳ ಸ್ನೇಹ, ಪ್ರೀತಿ ಕಾರಣವನ್ನೇ ಹೇಳದೆ ನಮ್ಮನ್ನ ಬಿಟ್ಟಿ ಹೋಗುತ್ತವೆ.
ತಣ್ಣಗೆ ಮೌನವಾಗಿ ಕೊಲ್ಲುವ ಏಕಾಂಗಿ ಭಾವ ಮನಸ್ಸನ್ನ ಆವರಿಸಿಕೊಳ್ಳುತ್ತದೆ.. ತಂಬಾಕಿನ ಘಾಟು, ಮದ್ಯದ ಅಮಲು ನೋವಿಗೆ ದಿವ್ಯೌಷಧವಾಗುತ್ತದೆ.

ಕಟ್ಟಿಕೊಂಡಿದ್ದ ಕನಸು, ಆಸರೆಯಾಗಿದ್ದ ಪ್ರೀತಿ, ಹಿತವೆನಿಸಿದ ಮನೆಯ ವಾತಾವರಣ ಕೈತಪ್ಪಿ ಹೋದಾಗ ಮನಸ್ಸು ವೇದನೆಗೆ, ತಳಮಳಕ್ಕೆ  ಒಳಗಾಗೋದು ಸಹಜ.. ಇದು ಪ್ರಕೃತಿ ನಿಯಮ..! ಅಷ್ಟಕ್ಕೆ ಜೀವನೋತ್ಸಾಹ ಕಳೆದುಕೊಂಡು, " ಅಯ್ಯೋ, ಈ ಹಾಳಾದ ನೋವಿನಲ್ಲಿ ಬದುಕಬೇಕಲ್ಲಪ್ಪ" ಅಂದುಕೊಳ್ಳುವುದು ಎಷ್ಟು ಸರಿ..? ಜೀವನದಲ್ಲಿ ಆಶಾವಾದಿಯಾಗಿರಬೇಕು.. ಬಂದಿದ್ದನ್ನ ಸ್ವೀಕರಿಸಿ, ಗೆಲ್ಲಬೇಕು.. ಕಳೆದು ಹೋಗುವ ಪ್ರತಿಯೊಂದರ ಸಂಬಂಧ "ಮತ್ತೊಂದರ" ಪ್ರವೇಶದಿಂದ ನಿವಾರಣೆಯಾಗುತ್ತದೆ..!!!

ಇಷ್ಟೆಲ್ಲ ಬರೆಯುವುದಕ್ಕೂ ಕಾರಣ ಉಂಟು.. ಮೊನ್ನೆ ಮೊನ್ನೆ ನನ್ನ ಸ್ನೇಹಿತೆಯೊಬ್ಬಳು 'ನನಗೆ ಇನ್ನು ಕಾಲ್ ಮಾಡ್ಬೇಡ. ಮೆಸೇಜೂ ಮಾಡ್ಬೇಡ ಅಂದಳು.. ಕಾರಣ ಕೇಳಿದಾಗ ಬಂದ ಉತ್ತರ "ನನಗೆ ಮದುವೆ"... ಒಂದ್ ಕ್ಷಣ ಮನಸ್ಸು ಖಿನ್ನವಾಯ್ತು..

ಮೊನ್ನೆ ದಸರಾಗೆ ಊರಿಗೆ ಹೋಗಿದ್ದೆ.. ನಾನು ಮತ್ತೆ ಸ್ನೇಹಿತ ಸುಮ್ಮನೆ ಸುತ್ತಾಡ್ತಾ ಇದ್ದೆವು.. ಹಾಗೆ ನನ್ನ ಸ್ನೇಹಿತನ 'ಸ್ನೇಹಿತೆ' ಮಂದೆ ಪ್ರತ್ಯಕ್ಷಳಾಗಿ ಹಾಯ್ ಅಂದಳು.. ಇಬ್ಬರೂ ಹಾಯ್ ಅಂದೆವು.. ಅವಳ ಜೊತೆ ನನಗೆನೂ ಅಂತಾ ಸ್ನೇಹ ಇರ್ಲಿಲ್ಲ.. ಆದ್ರೆ, ನನ್ನ ಜೊತೆಗಿದ್ದ ಫ್ರೆಂಡ್ ಮತ್ತು ಆಕೆ ಇಬ್ಬರೂ ತುಂಬಾ ಕ್ಲೋಸ್.. ಸಹಾಯವನ್ನೂ ಮಾಡಿದ್ದ ಆ ನಿರ್ಭಾವುಕ ಜೀವಿಗೆ.. ಆದ್ರೆ, ಅವಳು " ಇದೇ ತಿಂಗಳು ನನ್ನ ಮದ್ವೆ ಬನ್ನಿ" ಅಂತಾ ಹೇಳಿ, ಆಮಂತ್ರಣ ಪತ್ರಿಕೆಯನ್ನ ಕೊಡದೆ, ಅಡ್ರೆಸ್ ಕೂಡ ಹೇಳದೆ, ದಿಢೀರ್ ಮಾಯವಾದಳು.. ನನ್ನ ಸ್ನೇಹಿತ ಮಾತ್ರ ತುಂಬಾ ಬೇಜಾರ್ ಆಗಿದ್ದ... ಕಸಿವಿಸಿಯೂ ಆಗಿತ್ತು ಅವನಿಗೆ.. ನಾವಿಬ್ಬರೂ ಹರಟೆಗೆ ಕೂತಾಗಲೆಲ್ಲಾ, ಅವಳ ವಿಷ್ಯವನ್ನೇ ಮಾತಾಡುತ್ತಿದ್ದ.. ಅವಳ ಗುಣಗಾನ ಮಾಡುತ್ತಿದ್ದ.. ಸಮಾಧಾನ ಹೇಳಿದೆ. ಎಲ್ಲರ ಜೀವನದಲ್ಲೂ ಇಂತದೊಂದು ಘಟನೆ ಇದ್ದೆ ಇರುತ್ತೆ..!!

ವಿಷ್ಣು ಹೆಗಡೆ, ಕುಮಟಾ