Friday, December 23, 2011

ಷೇರುಪೇಟೆ ಜೂಜುಕಟ್ಟೆಯಲ್ಲ...


ಜಗತ್ತು ಮತ್ತೊಂದು ಆರ್ಥಿಕ ಹಿಂಜರಿತದತ್ತ ಜಾರುತ್ತಿದ್ಯಾ..? ಎಲ್ಲರನ್ನ ಕಾಡುತ್ತಿರೋ ಯಕ್ಷ ಪ್ರಶ್ನೆ ಇದು. ಗ್ರೀಸ್ ನಲ್ಲಿ
ಶುರುವಾದ ಬಿಕ್ಕಟ್ಟು ಈಗ ಯುರೋಪಿಯನ್ ರಾಷ್ಟ್ರಗಳಿಗೂ ಆವರಿಸಿದೆ.. ಪೋರ್ಚುಗಲ್, ಇಟಲಿ, ಸ್ಪೇನ್ ಸಾಲದ ಸುಳಿಗೆ ಸಿಲುಕಿವೆ.. ಈ ಕಂಪನ ಯುರೋಪಿಯನ್ ರಾಷ್ಟ್ರಗಳ ಆರ್ಥಿಕತೆಯನ್ನೇ ಅಲ್ಲಾಡಿಸುತ್ತಿದೆ.. ಹಿಂಜರಿತದ ಸುನಾಮಿ ಭಾರತಕ್ಕೂ ಬಂದು ಅಪ್ಪಳಿಸಿದ್ದು, ಕಳೆದ ನಾಲ್ಕೈದು ತಿಂಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಕಂಪನ ಶುರುವಾಗಿದೆ.. ಈ ಅಪಾಯಕಾರಿ ಬೆಳವಣಿಗೆ ನ್ಯೂಯಾರ್ಕ್ , ಶಾಂಘೈಯಿಂದ ಹಿಡಿದು ಭಾರತದ ಷೇರುಮಾರುಕಟ್ಟೆಗಳನ್ನೂ ಕಾಡುತ್ತಿದೆ.. ಬ್ಯಾಂಕಿಂಗ್, ರಿಯಲ್ ಎಸ್ಟೇಟ್, ಮಾಹಿತಿ ತಂತ್ರಜ್ಞಾನ, ಎಫ್ಎಂಸಿಜಿ, ಶುಗರ್, ಸ್ಟೀಲ್ ಸೆಕ್ಟರ್ ಗಳ ಷೇರುಗಳು ಪಾತಾಳಕ್ಕಿಳಿದಿವೆ.. ಉಳಿದ ವಲಯಗಳ ಷೇರುಗಳೂ ಇದೇ ಹಾದಿಯಲ್ಲಿವೆ..

ಷೇರಿನಲ್ಲಿ ಹಣ ಹೂಡಿದವರು ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ.. ನಾನೂ ಕೂಡಾ..!! ಏನಿಲ್ಲ ಅಂದ್ರೂ ಸುಮಾರು 30 ರಿಂದ 40 ಪರ್ಸೆಂಟ್ ಹಣ ಮಂಗಮಾಯವಾಗಿದೆ.. ಕೊಂಡಾಗ 700 ರೂಪಾಯಿ ಇದ್ದ ಸಂಡೂರ್ ಮ್ಯಾಂಗನೀಸ್ ಈಗ 290ಕ್ಕೆ ಕುಸಿದಿದೆ.. 320ರಷ್ಟಿದ್ದ ಸೀಸಾ ಗೋವಾ 159ಕ್ಕೆ ಇಳಿದಿದೆ.. 58 ರೂಪಾಯಿ ಇದ್ದ ರೇಣುಕಾ ಶುಗರ್ ದಿಢೀರ್ ಜಾರಿಬಿದ್ದು 25ಕ್ಕೆ ಬಂದು ನಿಂತಿದೆ.. ಈ ಎಲ್ಲಾ ಷೇರುಗಳ ಬೆಲೆ ಸದ್ಯಕ್ಕಂತೂ ಏರುವ ಲಕ್ಷಣ ಇಲ್ಲ... ನನಗೂ ಮಾರುವ ಮನಸ್ಸಿಲ್ಲ.. ಆದ್ರೆ, ಒಂದಿಷ್ಟು ಷೇರುಗಳು ಲಾಭ ತಂದುಕೊಟ್ಟಿವೆ.. ಮಹೀಂದ್ರಾ & ಮಹೀಂದ್ರಾ, ಟಾಟಾ ಮೋಟಾರ್, ಅಲಹಾಬಾದ್ ಬ್ಯಾಂಕ್ ಷೇರುಗಳನ್ನ ಲಾಭದಲ್ಲಿರುವಾಗ್ಲೆ ಮಾರಿ, ಬಚಾವಾಗಿದ್ದೇನೆ.. ಎಲ್ಲಾ ಲೆಕ್ಕಾಚಾರ ಹಾಕಿದ್ರೆ, ಕೂಡಿ ಕಳೆದ್ರೆ ಅಲ್ಲಿಂದ ಅಲ್ಲಿಗೆ.. ನೆಚ್ಚಿನ ಸ್ಟ್ರಿಪ್ಟ್ ಹಿಂಡಾಲ್ಕೊನೂ ಕೈಬಿಟ್ಟಿಲ್ಲ.. ಹೀಗಾಗಿ ದುಡಿದಿದ್ದೇ ಹೊಯ್ತು ಅಂತಾ ನಾನೆನೋ ಸುಮ್ನಾಗಬಹುದು.. ಆದ್ರೆ, ಸಾಲಮಾಡಿ ಇನ್ ವೆಸ್ಟ್ ಮಾಡಿದವರ ಕಥೆ ಏನು..? ದುಡಿದ ಎಲ್ಲಾ ದುಡ್ಡಿನ್ನ ಹೂಡಿಕೆ ಮಾಡಿದವರ ಪಾಡೇನು..?

ನನ್ನ ಸ್ನೇಹಿತ(ರವಿ) ಷೇರು ಮಾರ್ಕೆಟ್ "ಜೂಜು" ಅಂತಾನೆ.. ಆತನಿಗೆ ಷೇರಿನ ಬಗ್ಗೆ ಎಬಿಸಿಡಿಯೂ ಗೊತ್ತಿಲ್ಲ.. ಆದ್ರೂ, ಮಾತಾಡ್ತಾನೆ..! ಷೇರುಕ್ಷೇತ್ರ ಬಿಟ್ಟು ಬೇರೆ ವಿಷ್ಯದಲ್ಲಿ ಬುದ್ಧಿವಂತ.. ಆದ್ರೆ, ಖಂಡಿತವಾಗೂ ಷೇರ್ ಮಾರ್ಕೆಟ್ ಜೂಜುಕಟ್ಟೆಯಲ್ಲ.. ಅಲ್ಲಿ ಪ್ರತಿ ಏರಿಳತಕ್ಕೂ ಕಾರಣ ಇರುತ್ತೆ. ಕಂಪನಿಯ ಅಭಿವೃದ್ಧಿ ಮೇಲೆ ಎಲ್ಲಾ ನಿಂತಿದೆ.. ಕಂಪೆನಿ ಉತ್ತಮ ಸಾಧನೆ ತೋರಿಸಿದ್ರೆ ಷೇರುಗಳು ಗಗನಮುಖ.. ಇಲ್ಲದಿದ್ರೆ ಪಾತಾಳಕ್ಕೆ.. ಹಾವು-ಏಣಿ ಆಟಕ್ಕೆ ಅಂತಾರಾಷ್ಟ್ರೀಯ ಬೆಳವಣಿಗೆಗಳೂ ಕಾರಣ.. ವಿಶ್ವದಲ್ಲಾಗೊ ಆರ್ಥಿಕ ಬದಲಾವಣೆಗಳಿಗೆ ತೀವ್ರವಾಗಿ ಸ್ಪಂದಿಸುತ್ತೆ ಮಾರುಕಟ್ಟೆ.. ಈ ಸೂತ್ರದ ಮೇಲೆಯೇ ಕಂಪೆನಿಯ ಷೇರುಗಳ ಕುಣಿತ..

 ಒಂದು ಕಂಪನಿಯಲ್ಲಿ ಪ್ರಮೋಟರ್ ಪಾಲು ಎಷ್ಟಿದೆ..? ಆ ಷೇರು ಎಷ್ಟರ ಮಟ್ಟಿಗೆ ವಿದೇಶಿ ಹೂಡಿಕೆದಾರರ ಮನಗದ್ದಿದೆ..? ವಾಲ್ಯುಮ್ ಎಷ್ಟಿದೆ..? ಮುಖಬೆಲೆಯೆಷ್ಟು? ಇಪಿಎಸ್ ಹೇಗಿದೆ..? ಕಂಪನಿಯ ಕಾರ್ಯಕ್ಷಮತೆ, ಯೋಜನೆ, ದೂರದೃಷ್ಟಿ, ಆಡಳಿಮಂಡಳಿ ಯಲ್ಲಿ ಯಾರಿದ್ದಾರೆ..? ಈ ಎಲ್ಲಾ ಅಂಶಗಳನ್ನ ನೋಡಿ ಹೂಡಿಕೆ ಮಾಡಬೇಕು.. ಗೊತ್ತಿಲ್ಲದಿದ್ದರೆ ಸುಮ್ಮನಿರಬೇಕು.. ಯಾರದೊ ಮಾತನ್ನ ಕೇಳಿ, ಬ್ರೋಕರ್ ಮಾತನ್ನ ನಂಬಿ ಹಣ ಹೂಡಿದ್ರೆ ಏನ್ ಬೇಕಾದ್ರೂ ಆಗ್ಬಹುದು.. ಇಂತ ಸಮಯದಲ್ಲಿ ಹಣ ಕಳೆದುಕೊಳ್ಳೋದೆ ಜಾಸ್ತಿ..

ಕೆಲವೊಂದು ಷೇರುಗಳು ತುಂಬಾ ಅಪಾಯಕಾರಿ. 30 ರೂಪಾಯಿ ಇದ್ದ ಷೇರು ಕೆಲವೇ ದಿನಗಳಲ್ಲಿ 70-80 ರೂಪಾಯಿ ಆಗಿಬಿಡುತ್ತೆ. ಆಗ ಒಂದು ರೂಮರ್ ಹರಡುತ್ತೆ. ಆ ಷೇರು ಇನ್ನೂ ಏರುತ್ತೆ ಅಂತಾ.. ಹೊಸದಾಗಿ ಪೇಟೆಗೆ ಎಂಟ್ರಿಕೊಟ್ಟವರು ಮತ್ತೂ ಏರುತ್ತೆ ಅಂತಾ ಖರೀದಿಸುತ್ತಾರೆ. ಇಂತ ಸಮಯದಲ್ಲಿ ಕೃತಕ ಬೇಡಿಕೆ ಸೃಷ್ಟಿಸಿದವರು ಮಾರಿ ಲಾಭ ಮಾಡಿಕೊಳ್ತಾರೆ.. ಕೊಂಡುಕೊಂಡವನು ಮಾತ್ರ ಕೋಡಂಗಿ..

ನನ್ನ ಮತ್ತೊಬ್ಬ ಸ್ನೇಹಿತ(ರಾಜು).. ಈತನದ್ದು ವಿಚಿತ್ರ ನಂಬಿಕೆ.. ಅತಿಯಾದ ಧೈರ್ಯ. ಇವತ್ತು ಇಳಿದಿದೆ, ನಾಳೆ ಏರುತ್ತೆ..
ಮೂರುದಿನದಿಂದ ಡೌನ್ ಆಗ್ತಾನೆ ಇದೆ, ಇಂದು ಪುಟಿದೇಳುತ್ತೆ.. ಈ ತರ ಗೆಸ್ ಮಾಡಿ, ಹಣ ಕಳೆದುಕೊಂಡಿದ್ದಾನೆ.. ಈಗ ಷೇರಿನ ಹೆಸರೆತ್ತಿದ್ರೆ ಸಾಕು ಸಿಡಿಯುತ್ತಾನೆ.. ಮಾರ್ಕೆಟಿನ ಸಹವಾಸವೇ ಬೇಡ ಅಂತಾ ಸುಮ್ಮನಾಗಿದ್ದಾನೆ.. ಮಾರ್ಕೆಟ್ ಕಡೆ ಮುಖ ಹಾಕಿ ಕೂಡಾ ಮಲಗಲ್ವಂತೆ.. ನನಗಂತೂ ಈ ಸ್ಥಿತಿಯಿಲ್ಲ.. ಕೆರೆಯ ನೀರನ್ನ ಕೆರೆಗೆ ಚಲ್ಲಿದ್ದೇನೆ.. ಲಾಸ್ ಆಗಿಲ್ಲ.. ಜೇಬಿಗೆ ಹಣ ಬಂದಿಲ್ಲ.. ಆದ್ರೆ, ಕಲಿತಿದ್ದು ಮಾತ್ರ ಲಾಭ.. ಮುಂದೊಂದು ದಿನ ಹೆಲ್ಪ್ ಆಗೇ ಆಗುತ್ತೆ..

ಷೇರು ಮಾಯಾಲೋಕವಲ್ಲ.. ಜೂಜಲ್ಲ.. ಗೊತ್ತಿಲ್ಲದಿದ್ದವರಿಗೆ ಅದು ನಿಗೂಢಲೋಕ ಅನಿಸುತ್ತದೆ ಅಷ್ಟೆ..!!!

ವಿಷ್ಣು ಹೆಗಡೆ , ಕುಮಟಾ


Wednesday, December 14, 2011

ಅಕ್ವೇರಿಯಂ...




ಹವ್ಯಾಸವೇ ಹಾಗೆ.. ಒಬ್ಬರಿಂದ ಒಬ್ಬರಿಗೆ ವಿಭಿನ್ನ. ಮನೆಯಲ್ಲಿ ನಾಯಿಯನ್ನೊ, ಬೆಕ್ಕನ್ನೊ ಸಾಕೋದು ಕಾಮನ್. ಕೆಲವರು ಒಂದ್ ಹೆಜ್ಜೆ ಮುಂದೆ ಹೋಗಿ ಹಾವು, ಚೇಳು, ಕೋತಿಗಳನ್ನ ಸಾಕ್ತಾರೆ..! ಇಂತ ತಿಕಲು ಪ್ರಾಣಿಪ್ರಿಯರನ್ನ ನೋಡಿ, ಆಶ್ಚರ್ಯವಾಗಿದೆ.. ಆದ್ರೆ,  ನಾನು ಸದಭಿರುಚಿಯ ಹವ್ಯಾಸಿ..! ರೂಮಿನಲ್ಲೆ ಒಂದು ಚಿಕ್ಕ ಅಕ್ಚೇರಿಯಂ ಮಾಡಿದ್ದೇನೆ..!! 

ಸುಮಾರು 15 ಲೀಟರ್ ನೀರು ಹಿಡಿಯೊ ಚಿಕ್ಕ ಟ್ಯಾಂಕ್ ಇದೆ. ಏಂಜಲ್, ಟೈಗರ್, ಲಯನ್ ಹೆಡ್, ವೈಟ್ ಅರೋನಾ.. ಹೀಗೆ ಹತ್ತಾರು ಜಾತಿಯ ಮೀನುಗಳಿವೆ.. ಅದ್ರಲ್ಲಿ ಗೋಲ್ಡ್ ಫಿಶ್ ಅಂದ್ರೆ ತುಂಬಾ ಪ್ರೀತಿ.. ಅವುಗಳ ಬಂಗಾರದ ದೇಹಕ್ಕೆ , ಹೊಳೆಯುವ ಕಣ್ಣುಗಳಿಗೆ ಎಂಥವರನ್ನ ಆಕರ್ಷಿಸುವ ಶಕ್ತಿ ಇದೆ.. ಕತ್ತಲಾದಾಗ ಅಕ್ವೇರಿಯಂ ಟ್ಯೂಬ್ ಲೈಟ್ ಆನ್ ಮಾಡಿದ್ರೆ ಸಾಕು ಗೋಲ್ಡ್ ಫಿಶ್ ಗಳ ಚಲ್ಲಾಟ ಬೆರಗುಗೊಳಿಸುತ್ತೆ.. ರೆಕ್ಕೆಯನ್ನ ಹಿಂದಕ್ಕೆ ಚಾಚುತ್ತಾ ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸುವುದನ್ನ ನೋಡೋದೆ ಮನಸ್ಸಿಗೆ ಮುದ.. ಒತ್ತಡದಿಂದ ರಿಲ್ಯಾಕ್ಷ್ ಆಗ್ಲಿಕ್ಕೆ ಅಕ್ವೇರಿಯಂ ಒಳ್ಳೆ ಮದ್ದು ಅಂತಾ ಸ್ನೇಹಿತ ಹೇಳಿದ ಮಾತನ್ನ ನೆನಪಿಸಿಕೊಂಡೆ.. ನಿಜ ಅನಿಸಿತ್ತು..


 ಆದ್ರೀಗ ನನ್ನ ಮುದ್ದಿನ ಗೋಲ್ಡ್ ಫಿಶ್ ಇಲ್ಲ.. ಅದ್ರ ಪ್ರಾಣಪಕ್ಷಿ ಹಾರಿಹೋಗಿ ಒಂದುವಾರವೇ ಆಯ್ತು.. ಯಾಕೆ ಸತ್ತಿತು ಅಂತಾ ಯೋಚಿಸುತ್ತಲೆ ಇದ್ದೇನೆ.. ಸಾಯುವ ಕೆಲ ವಾರಗಳ ಮೊದ್ಲು ಲವಲವಿಕೆ ಕುಂಠಿತಗೊಂಡಿತ್ತು.. ಆಹಾರವನ್ನೂ ತಿನ್ನದೆ ಅಡ್ಡಾ-ದಿಡ್ಡಿಯಾಗಿ ಬಿದ್ದುಕೊಂಡಿತ್ತು. ಟ್ಯಾಂಕ್ ಕ್ಲೀನ್ ಮಾಡಿ, ನೀರು ಚೇಂಜ್ ಮಾಡಿದ್ರೆ ಸರಿಹೋಗಬಹುದು ಅಂದುಕೊಂಡೆ.. ವೈಟ್ ಸ್ಪಾಟ್ ಗೆ ಔಷಧವನ್ನೂ ಹಾಕಿದೆ.. ಆದ್ರೆ, ಬೆಳಗಾಗೋದ್ರೊಳ್ಗೆ ಸುತ್ತು, ಟ್ಯಾಂಕ್ ನಲ್ಲಿ  ತೇಲುತ್ತಿತ್ತು.. ಆ ಮೀನಿನ ಸೊಬಗನ್ನ ನೋಡುತ್ತಿದ್ದ  ನನಗೆ ಸಾವನ್ನೂ ನೋಡೊ ಪರಿಸ್ಥಿತಿ.. ದು:ಖ ತಡೆಯಲಾಗಲಿಲ್ಲ..


ವಿಷ್ಣು ಹೆಗಡೆ, ಕುಮಟಾ

Tuesday, December 13, 2011

ಗ್ರಹಣವೆಂದರೆ ಭಯವೇಕೆ..?



ಮೊನ್ನೆ ಚಂದ್ರಗ್ರಹಣ ಸಂಭವಿಸಿದಾಗ ಚಂದಿರನ ಲೋಕಕ್ಕೆ ಜಾರಿದೆ. ಆದ್ರೆ, ಗ್ರಹಣದ ಕುರಿತ ಮೂಢನಂಬಿಕೆಗಳು ತುಂಬಾ ಗೊಂದಲಕ್ಕೀಡುಮಾಡಿತ್ತು. ಗೊಡ್ಡು ಕಥೆಗಳ ಬಗ್ಗೆ ಬೇಸರ ಹುಟ್ಟಿತ್ತು.. ಗ್ರಹಣಕಾಲದಲ್ಲಿ ಊಟ ಮಾಡಬಾದರು, ಹೊರಗಡೆ ಹೋಗಬಾರದು, ಚಂದ್ರನನ್ನ ನೋಡಬಾರದು.... ಹೀಗೆ ಒಂದಾ, ಎರಡಾ..? ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇತ್ತು.

ಆದ್ರೆ, ಆಗಿದ್ದು ಆಗ್ಲಿ ( ಏನೂ ಆಗಲ್ಲ ಅಂತಾ ಗೊತ್ತು..!) ನಾನು ಮಾತ್ರ ಚಂದ್ರಗ್ರಹಣವನ್ನ ನೋಡಲೇಬೇಕೆಂದು ಶಪಥ ಮಾಡಿದ್ದೆ.. ಪ್ರಕೃತಿ ವಿಸ್ಮಯದ ಸುಂದರ ಕ್ಷಣಕ್ಕಾಗಿ ಕಾಯುತ್ತಿದ್ದೆ. ಸಾಯಂಕಾಲ ಆಗುತ್ತಿದ್ದಂತೆ ಟೆರೆಸ್ ಹತ್ತಿ ಕುಳಿತಿದ್ದೆ.. ನಿಗದಿತ ಸಮಯಕ್ಕೆ ಬಾನಂಚಿನಲ್ಲಿ ಚಂದ್ರ ನಿಧಾನವಾಗಿ ಬಂದ.. ಸುತ್ತಲೂ ಕೆಂಪು ಪ್ರಭಾವಲಯ. ನೀರವ ರಾತ್ರಿಯಲ್ಲಿ ಚಳಿಗಾಳಿಯ ಮಧ್ಯೆ ನೀಲಿಯಾಕಾಶವನ್ನ ನೋಡೋದೆ ರೋಮಾಂಚನ.. ಮನಸ್ಸಿಗೆಲ್ಲ ಕಚಗುಳಿಯಾದ ಅನುಭವ.. ಏಕಾಂಗಿಯಾಗಿ, ಏಕಾಗ್ರತೆಯಿಂದ ಆಕಾಶ ನೋಡುತ್ತಲೇ ನಿಂತಿಬಿಟ್ಟೆ.. ಚಂದ್ರಗ್ರಹಣ ನೋಡಿ ಖುಷಿಪಟ್ಟೆ. ಕತ್ತಲು ಆವರಿಸಿದಂತೆ ಚಂದ್ರನನ್ನ ಛಾಯೆಗಳು ಆವರಿಸಿದವು. ಹಾಗೆಯೇ ಪೂರ್ತಿ ಗ್ರಹಣವನ್ನ ವೀಕ್ಷಿಸಿದೆ.. ಪ್ರಕೃತಿ ವೈಚಿತ್ರ್ಯಕ್ಕೆ ಬೆರಗಾದೆ. ದಂಗಾದೆ. ಚಂದಮಾಮನ ಕ್ಲೋಸಪ್ ಚಿತ್ರಗಳೇ ಮನಸ್ಸನ್ನ ಆವರಿಸಿದ್ದವು.. ಬಂದು ಮಲಗಿದರೂ, ಮನದಲ್ಲಿ ಚಂದಿರ ಬೆಳಗುತ್ತಿದ್ದ..


ಇಲ್ಲಿ ಒಂದು ಮಾತನ್ನ ಹೇಳಲೇಬೇಕು. ಚಂದ್ರಗ್ರಹಣದ ಹಿಂದಿನ ದಿನ ಮಾಧ್ಯಮದಲ್ಲಿ ಸಾಧಕ-ಬಾಧಕಗಳದ್ದೇ ಚರ್ಚೆ. ಜ್ಯೋತಿಷಿಗಳಿಂದ ವಿಶ್ಲೇಷಣೆ.. ಆ ನಕ್ಷತ್ರದವರಿಗೆ ಕೆಡುಕಾಗುತ್ತೆ.. ಈ ರಾಶಿಯವರಿಗೆ ಒಳ್ಳೆಯದು.. ಇನ್ನೊಂದು ಕಡೆ ದುರ್ಬಲ ಮನಸ್ಸಿನ ಒಂದಿಷ್ಟು ಜನ ಫೋನ್ ನಲ್ಲಿ ಪರಿಹಾರ ಕೇಳುತ್ತಿದ್ರು. ಗೋದಾನ ಮಾಡಬೇಕು, ಬಟ್ಟೆದಾನ ಮಾಡಬೇಕು ಅನ್ನೊ ಉತ್ತರ ಜ್ಯೋತಿಷಿಗಳದ್ದು.. ಜನರು ಇಂಥದನ್ನ ನಂಬುತ್ತಾರೆಯೇ ಅಂತಾ ಅಚ್ಚರಿಯಾಯ್ತು..! 

ನನಗೆ ಜ್ಯೋತಿಷ್ಯದ ಶಕ್ತಿಗಳ ಬಗ್ಗೆ ಅಷ್ಟಾಗಿ ತಿಳಿದಿಲ್ಲ. ಆದ್ದರಿಂದ ಅದರಲ್ಲಿ ದೋಷವಿದೆ ಅಂತಾ ಹೇಳಲಾರೆ.. ಆದ್ರೆ, ಧರ್ಮದ ಹೆಸರಿನಲ್ಲಿ ಮೂಢನಂಬಿಕೆಗಳನ್ನ ಹೇರುವುದು ಎಷ್ಟು ಸರಿ.? ವೇದ, ಪುರಾಣ, ಧರ್ಮದ ಹೆಸರಿನಲ್ಲಿ ಅಂಧಾಚರಣೆ ಯಾಕೆ..?

ವಿಷ್ಣು ಹೆಗಡೆ , ಕುಮಟಾ


Thursday, December 8, 2011

ಬಹಿಷ್ಕಾರವೇ ಲೇಸು...


ಒಲಿಂಪಿಕ್ಸ್ ಶಾಂತಿಯ ಆಚರಣೆ. ಸಮಾನತೆ ಸಾರೊ ಸಾಧನ.. ಐಕ್ಯತೆಯ ಸಂಕೇತ. ಆಟಗಳ ನಡುವಿನ ಅಂತರ ಬೆಸೆಯುವ ವೇದಿಕೆ.. ಆದರೆ, 2012ರಲ್ಲಿ ಲಂಡನ್ನಲ್ಲಿ ನಡ್ಯೊ ಒಲಿಂಪಿಕ್ಸ್ ಇದ್ಕೆ ತದ್ವಿರುದ್ಧ. ಜಾಗತಿಕ ಕ್ರೀಡಾಹಬ್ಬದ ಮೂಲತತ್ವಗಳಿಗೆ ಇಲ್ಲಿ ಬೆಲೆಯೇ ಇಲ್ಲ. ಸಾವಿರಾರು ಕುಟುಂಬವನ್ನ ಬೀದಿಗೆ ತಂದ, ಲಕ್ಷಾಂತರ ಜನರ ಪ್ರಾಣ ಕಿತ್ತುಕೊಂಡ "ಡೌ" ರಾಸಾಯನಿಕ ಕಂಪೆನಿಯೇ ಲಂಡನ್ ಒಲಿಂಪಿಕ್ಸ್ ಪ್ರಾಯೋಜಿಸುತ್ತಿದೆ..! ಎಂಥಾ ವಿಪರ್ಯಾಸ ನೋಡಿ..!!


 ದುರಂತದಲ್ಲಿ ಬಲಿಯಾದವರಿಗೆ ದಶಕಗಳು ಕಳೆದರೂ ಪರಿಹಾರ ಹಣವನ್ನೇ ಕೊಟ್ಟಿಲ್ಲ.. ಆದ್ರೆ, ಒಲಿಂಪಿಕ್ಸ್ ನಂತಹ ಕ್ರೀಡಾಮೇಹಾಳವನ್ನ ಆಯೋಜಿಸೋದಕ್ಕೆ ಬೇಕಾದಷ್ಟು ದುಡ್ಡಿದೆ..!! ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಇದನ್ನ ಪ್ರಶ್ನಿಸದಿರೋದು ನಿಜಕ್ಕೂ ಆಶ್ಚರ್ಯ. ಪ್ರಪಂಚಕ್ಕೆ ಇದೊಂದು ದೊಡ್ಡ ವಿಷಯವಲ್ಲದಿರಬಹುದು. ಆದ್ರೆ, ನಮಗೆ..? ಅಮಾಯಕ ಜೀವಗಳನ್ನ ಬಲಿಪಡೆದ ಘಟನೆಯನ್ನ ನೆನೆಸಿಕೊಂಡ್ರೆ ಮೈಯೆಲ್ಲ ಕುದಿಯುತ್ತೆ. ಅವ್ರ ಆಕ್ರಂದನ ಕಣ್ಮುಂದೆ ಹಾದಿಹೋದಾಗ ಹೃದಯತಲ್ಲಣಿಸುತ್ತೆ..


ನೆತ್ತರಿನ ಚರಿತ್ರೆ ಹೊಂದಿರೊ ಸಂಸ್ಥೆಯೊಂದರ ಪ್ರಾಯೋಜಕತ್ವ ಸ್ವೀಕರಿಸೋದು ಒಲಿಂಪಿಕ್ಸ್ ಮೂಲನೀತಿಗೆ ವಿರುದ್ಧವಾದುದ್ದು. ಹೀಗಾಗಿ ಭಾರತೀಯರು ಈ ಕ್ರೀಡಾಕೂಟವನ್ನ ಬಹಿಷ್ಕರಿಸೋದೆ ಲೇಸು. ಈ ಹಿಂದೆ ಒಲಿಂಪಿಕ್ಸ್ ಕ್ರೀಡೆಯನ್ನ ಕೆಲ ದೇಶಗಳು ಬಹಿಷ್ಕರಿಸಿದ ಉದಾಹರಣೆಗಳಿವೆ.. ನಾವು ಯಾಕೆ ಹಾಗೆ ಮಾಡಬಾರದು..?? ನಮ್ಮ ದೇಶಕ್ಕೆ ಬಂದು, ನಮ್ಮವರನ್ನೇ ಬಲಿತೆಗೆದುಕೊಂಡು ಪಲಾಯನ ಮಾಡಿರೊ "ಡೌ" ಸಂಸ್ಥೆಯ ಮಾಲೀಕನಿಗೆ ದಿಕ್ಕಾರ ಹೇಳಲೇ ಬೇಕು.. ದುರಂತದಲ್ಲಿ ಮಡಿದವರಿಗೆ ಗೌರವ ಸಲ್ಲಿಸೋದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.. ಇದ್ಕೆ ಕ್ರೀಡಾಪಟುಗಳು ಹೊರತಲ್ಲ..

ವಿಷ್ಣು ಹೆಗಡೆ , ಕುಮಟಾ



Friday, December 2, 2011

ಕಣ್ಣಿಗೆ ಕಾಣುವ ದೇವರು...


ಆಫೀಸ್ನಲ್ಲಿ ಒತ್ತಡ ಜಾಸ್ತಿಯಾದಾಗ, ಹಿತಶತ್ರುಗಳು ಕಿರಿಕಿರಿ ಮಾಡಿದಾಗ, ಕೈಕೊಟ್ಟು ಹೋದ ಗೆಳೆಯ-ಗೆಳೆತಿಯರು ಕಾಡಿದಾಗ, ಜಂಜಾಟಗಳಿಂದ ಬದುಕು ಭಾರವಾದಾಗ, ಯಾರಲ್ಲೂ ಹೇಳಿಕೊಳ್ಳದ ದು:ಖ ಅಪ್ಪಳಿಸಿದಾಗ, ಅಮ್ಮನ ನೆನಪಾಗುತ್ತೆ.. ಕ್ಷಣ ಮಾತ್ರದಲ್ಲೇ ಮನಸ್ಸು ಮಲ್ಲಿಗೆಯಾಗುತ್ತೆ.. ಹೃದಯ ತಂಪಾಗುತ್ತೆ. ಹಗುರವಾಗುತ್ತೆ. ಬದುಕೆಲ್ಲಾ ನಾದಮಯ ಅನಿಸಿ ಬಿಡುತ್ತೆ. ಮನಸ್ಸಿನಾಳದಿಂದ ಉಕ್ಕೆದ್ದು ಬರುವ ಉದ್ವೇಗ ಕರಗಿಹೋಗುತ್ತೆ.. ಅದ್ಕೆ ಹೇಳೋದು ಅಮ್ಮ ಕಣ್ಣಿಗೆ ಕಾಣುವ ದೇವರು ಅಂತಾ..

ಇತ್ತಿಚೆಗೆ ಊರು ದೂರವಾದಷ್ಟು, ಮನಸ್ಸು ಭಾರವಾಗಿದೆ.. ಏಕಾಂತ ಕಾಡ್ತಿದೆ. ಮೊಗದ ಮುದ್ದಾದ ನಗು ಮಾಯವಾಗಿದೆ. ಅಮ್ಮನ ಪ್ರೀತಿ, ಅಪ್ಪನ ಅಕ್ಕರೆ, ತಂಗಿಯ ಪುಟ್ಟನಗೆ ನೆನಪಾಗ್ತಿದೆ. ಮನೆಯ ಕಡೆ ಮನಸ್ಸು ವಾಲುತ್ತಿದೆ..

ಮನೆಗೆ ಫೋನ್ ಮಾಡುವಾಗಲೆಲ್ಲಾ ಮೊದ್ಲು ನೆನಪಾಗೋದು ಅಮ್ಮನ ಮುಖ. ಅವಳ ಒಲವಿನ ಘಮ.. ಪ್ರೀತಿಯ
ಅಪ್ಪುಗೆ. ಒಬ್ಬನೇ ಕೂತು ತನ್ನ ಬಗ್ಗೆ ಯೋಚಿಸುವಂತೆ ಮಾಡುವ ಶಕ್ತಿ ಅವಳ ನಿಷ್ಕಲ್ಮಶ ಒಲವಿದೆ. ಒಮ್ಮೆಮ್ಮೊಯಂತೂ ಅಮ್ಮನನ್ನ ಬಾಚಿ ತಬ್ಬಿ, ಅವಳ ಮಡಿಲಲ್ಲಿ ಬಿಕ್ಕಿ ಬಿಕ್ಕಿ ಅತ್ತುಬಿಡಬೇಕು ಅನ್ನೋ ಮೌನಯಾತನೆ.

ಹೊಟೇಲ್ಗೆ ಹೋದರೂ ಅಮ್ಮನದ್ದೇ ನೆನಪು.. ಅಡುಗೆ ಎಷ್ಟೇ ಚೆಂದವಿದ್ದರೂ ಬಡಿಸುವ ಕೈ ಆಪ್ತವೆನಿಸುವುದಿಲ್ಲ. ಅನ್ನದಲ್ಲಿ ಪ್ರೀತಿಯ ಸುಳಿವಿರೋದಿಲ್ಲ. ಸೋಮವಾರದ ಹೋಳಿಗೆ ಊಟ ಕೂಡಾ, ಒಲಿನ ತಂಬ್ಳಿ( ಮಜ್ಜಿಗೆ ಸಾರು) ಮುಂದೆ ಸಪ್ಪೆ.. ಎಲ್ಲರೂ ಒಟ್ಟಾಗಿ ಕೂತು, ಸುದ್ದಿ ಹೇಳ್ತಾ , ತಮಾಷೆ ಮಾಡ್ತಾ ಇದ್ರೆ ಊಟಮಾಡಿದ್ದೆ ಗೊತ್ತಾಗದಂತೆ ಕಣ್ಣೆದುರಿಗಿನ ತಟ್ಟೆ ಬರಿದಾಗುವ ಆ ಮೋಡಿಯೇ ಸೊಬಗು.

ವಿಷ್ಣು ಹೆಗಡೆ, ಕುಮಟಾ