ಜಗತ್ತು ಮತ್ತೊಂದು ಆರ್ಥಿಕ ಹಿಂಜರಿತದತ್ತ ಜಾರುತ್ತಿದ್ಯಾ..? ಎಲ್ಲರನ್ನ ಕಾಡುತ್ತಿರೋ ಯಕ್ಷ ಪ್ರಶ್ನೆ ಇದು. ಗ್ರೀಸ್ ನಲ್ಲಿ
ಶುರುವಾದ ಬಿಕ್ಕಟ್ಟು ಈಗ ಯುರೋಪಿಯನ್ ರಾಷ್ಟ್ರಗಳಿಗೂ ಆವರಿಸಿದೆ.. ಪೋರ್ಚುಗಲ್, ಇಟಲಿ, ಸ್ಪೇನ್ ಸಾಲದ ಸುಳಿಗೆ ಸಿಲುಕಿವೆ.. ಈ ಕಂಪನ ಯುರೋಪಿಯನ್ ರಾಷ್ಟ್ರಗಳ ಆರ್ಥಿಕತೆಯನ್ನೇ ಅಲ್ಲಾಡಿಸುತ್ತಿದೆ.. ಹಿಂಜರಿತದ ಸುನಾಮಿ ಭಾರತಕ್ಕೂ ಬಂದು ಅಪ್ಪಳಿಸಿದ್ದು, ಕಳೆದ ನಾಲ್ಕೈದು ತಿಂಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಕಂಪನ ಶುರುವಾಗಿದೆ.. ಈ ಅಪಾಯಕಾರಿ ಬೆಳವಣಿಗೆ ನ್ಯೂಯಾರ್ಕ್ , ಶಾಂಘೈಯಿಂದ ಹಿಡಿದು ಭಾರತದ ಷೇರುಮಾರುಕಟ್ಟೆಗಳನ್ನೂ ಕಾಡುತ್ತಿದೆ.. ಬ್ಯಾಂಕಿಂಗ್, ರಿಯಲ್ ಎಸ್ಟೇಟ್, ಮಾಹಿತಿ ತಂತ್ರಜ್ಞಾನ, ಎಫ್ಎಂಸಿಜಿ, ಶುಗರ್, ಸ್ಟೀಲ್ ಸೆಕ್ಟರ್ ಗಳ ಷೇರುಗಳು ಪಾತಾಳಕ್ಕಿಳಿದಿವೆ.. ಉಳಿದ ವಲಯಗಳ ಷೇರುಗಳೂ ಇದೇ ಹಾದಿಯಲ್ಲಿವೆ..
ಷೇರಿನಲ್ಲಿ ಹಣ ಹೂಡಿದವರು ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ.. ನಾನೂ ಕೂಡಾ..!! ಏನಿಲ್ಲ ಅಂದ್ರೂ ಸುಮಾರು 30 ರಿಂದ 40 ಪರ್ಸೆಂಟ್ ಹಣ ಮಂಗಮಾಯವಾಗಿದೆ.. ಕೊಂಡಾಗ 700 ರೂಪಾಯಿ ಇದ್ದ ಸಂಡೂರ್ ಮ್ಯಾಂಗನೀಸ್ ಈಗ 290ಕ್ಕೆ ಕುಸಿದಿದೆ.. 320ರಷ್ಟಿದ್ದ ಸೀಸಾ ಗೋವಾ 159ಕ್ಕೆ ಇಳಿದಿದೆ.. 58 ರೂಪಾಯಿ ಇದ್ದ ರೇಣುಕಾ ಶುಗರ್ ದಿಢೀರ್ ಜಾರಿಬಿದ್ದು 25ಕ್ಕೆ ಬಂದು ನಿಂತಿದೆ.. ಈ ಎಲ್ಲಾ ಷೇರುಗಳ ಬೆಲೆ ಸದ್ಯಕ್ಕಂತೂ ಏರುವ ಲಕ್ಷಣ ಇಲ್ಲ... ನನಗೂ ಮಾರುವ ಮನಸ್ಸಿಲ್ಲ.. ಆದ್ರೆ, ಒಂದಿಷ್ಟು ಷೇರುಗಳು ಲಾಭ ತಂದುಕೊಟ್ಟಿವೆ.. ಮಹೀಂದ್ರಾ & ಮಹೀಂದ್ರಾ, ಟಾಟಾ ಮೋಟಾರ್, ಅಲಹಾಬಾದ್ ಬ್ಯಾಂಕ್ ಷೇರುಗಳನ್ನ ಲಾಭದಲ್ಲಿರುವಾಗ್ಲೆ ಮಾರಿ, ಬಚಾವಾಗಿದ್ದೇನೆ.. ಎಲ್ಲಾ ಲೆಕ್ಕಾಚಾರ ಹಾಕಿದ್ರೆ, ಕೂಡಿ ಕಳೆದ್ರೆ ಅಲ್ಲಿಂದ ಅಲ್ಲಿಗೆ.. ನೆಚ್ಚಿನ ಸ್ಟ್ರಿಪ್ಟ್ ಹಿಂಡಾಲ್ಕೊನೂ ಕೈಬಿಟ್ಟಿಲ್ಲ.. ಹೀಗಾಗಿ ದುಡಿದಿದ್ದೇ ಹೊಯ್ತು ಅಂತಾ ನಾನೆನೋ ಸುಮ್ನಾಗಬಹುದು.. ಆದ್ರೆ, ಸಾಲಮಾಡಿ ಇನ್ ವೆಸ್ಟ್ ಮಾಡಿದವರ ಕಥೆ ಏನು..? ದುಡಿದ ಎಲ್ಲಾ ದುಡ್ಡಿನ್ನ ಹೂಡಿಕೆ ಮಾಡಿದವರ ಪಾಡೇನು..?
ನನ್ನ ಸ್ನೇಹಿತ(ರವಿ) ಷೇರು ಮಾರ್ಕೆಟ್ "ಜೂಜು" ಅಂತಾನೆ.. ಆತನಿಗೆ ಷೇರಿನ ಬಗ್ಗೆ ಎಬಿಸಿಡಿಯೂ ಗೊತ್ತಿಲ್ಲ.. ಆದ್ರೂ, ಮಾತಾಡ್ತಾನೆ..! ಷೇರುಕ್ಷೇತ್ರ ಬಿಟ್ಟು ಬೇರೆ ವಿಷ್ಯದಲ್ಲಿ ಬುದ್ಧಿವಂತ.. ಆದ್ರೆ, ಖಂಡಿತವಾಗೂ ಷೇರ್ ಮಾರ್ಕೆಟ್ ಜೂಜುಕಟ್ಟೆಯಲ್ಲ.. ಅಲ್ಲಿ ಪ್ರತಿ ಏರಿಳತಕ್ಕೂ ಕಾರಣ ಇರುತ್ತೆ. ಕಂಪನಿಯ ಅಭಿವೃದ್ಧಿ ಮೇಲೆ ಎಲ್ಲಾ ನಿಂತಿದೆ.. ಕಂಪೆನಿ ಉತ್ತಮ ಸಾಧನೆ ತೋರಿಸಿದ್ರೆ ಷೇರುಗಳು ಗಗನಮುಖ.. ಇಲ್ಲದಿದ್ರೆ ಪಾತಾಳಕ್ಕೆ.. ಹಾವು-ಏಣಿ ಆಟಕ್ಕೆ ಅಂತಾರಾಷ್ಟ್ರೀಯ ಬೆಳವಣಿಗೆಗಳೂ ಕಾರಣ.. ವಿಶ್ವದಲ್ಲಾಗೊ ಆರ್ಥಿಕ ಬದಲಾವಣೆಗಳಿಗೆ ತೀವ್ರವಾಗಿ ಸ್ಪಂದಿಸುತ್ತೆ ಮಾರುಕಟ್ಟೆ.. ಈ ಸೂತ್ರದ ಮೇಲೆಯೇ ಕಂಪೆನಿಯ ಷೇರುಗಳ ಕುಣಿತ..
ಒಂದು ಕಂಪನಿಯಲ್ಲಿ ಪ್ರಮೋಟರ್ ಪಾಲು ಎಷ್ಟಿದೆ..? ಆ ಷೇರು ಎಷ್ಟರ ಮಟ್ಟಿಗೆ ವಿದೇಶಿ ಹೂಡಿಕೆದಾರರ ಮನಗದ್ದಿದೆ..? ವಾಲ್ಯುಮ್ ಎಷ್ಟಿದೆ..? ಮುಖಬೆಲೆಯೆಷ್ಟು? ಇಪಿಎಸ್ ಹೇಗಿದೆ..? ಕಂಪನಿಯ ಕಾರ್ಯಕ್ಷಮತೆ, ಯೋಜನೆ, ದೂರದೃಷ್ಟಿ, ಆಡಳಿಮಂಡಳಿ ಯಲ್ಲಿ ಯಾರಿದ್ದಾರೆ..? ಈ ಎಲ್ಲಾ ಅಂಶಗಳನ್ನ ನೋಡಿ ಹೂಡಿಕೆ ಮಾಡಬೇಕು.. ಗೊತ್ತಿಲ್ಲದಿದ್ದರೆ ಸುಮ್ಮನಿರಬೇಕು.. ಯಾರದೊ ಮಾತನ್ನ ಕೇಳಿ, ಬ್ರೋಕರ್ ಮಾತನ್ನ ನಂಬಿ ಹಣ ಹೂಡಿದ್ರೆ ಏನ್ ಬೇಕಾದ್ರೂ ಆಗ್ಬಹುದು.. ಇಂತ ಸಮಯದಲ್ಲಿ ಹಣ ಕಳೆದುಕೊಳ್ಳೋದೆ ಜಾಸ್ತಿ..
ಕೆಲವೊಂದು ಷೇರುಗಳು ತುಂಬಾ ಅಪಾಯಕಾರಿ. 30 ರೂಪಾಯಿ ಇದ್ದ ಷೇರು ಕೆಲವೇ ದಿನಗಳಲ್ಲಿ 70-80 ರೂಪಾಯಿ ಆಗಿಬಿಡುತ್ತೆ. ಆಗ ಒಂದು ರೂಮರ್ ಹರಡುತ್ತೆ. ಆ ಷೇರು ಇನ್ನೂ ಏರುತ್ತೆ ಅಂತಾ.. ಹೊಸದಾಗಿ ಪೇಟೆಗೆ ಎಂಟ್ರಿಕೊಟ್ಟವರು ಮತ್ತೂ ಏರುತ್ತೆ ಅಂತಾ ಖರೀದಿಸುತ್ತಾರೆ. ಇಂತ ಸಮಯದಲ್ಲಿ ಕೃತಕ ಬೇಡಿಕೆ ಸೃಷ್ಟಿಸಿದವರು ಮಾರಿ ಲಾಭ ಮಾಡಿಕೊಳ್ತಾರೆ.. ಕೊಂಡುಕೊಂಡವನು ಮಾತ್ರ ಕೋಡಂಗಿ..
ನನ್ನ ಮತ್ತೊಬ್ಬ ಸ್ನೇಹಿತ(ರಾಜು).. ಈತನದ್ದು ವಿಚಿತ್ರ ನಂಬಿಕೆ.. ಅತಿಯಾದ ಧೈರ್ಯ. ಇವತ್ತು ಇಳಿದಿದೆ, ನಾಳೆ ಏರುತ್ತೆ..
ಮೂರುದಿನದಿಂದ ಡೌನ್ ಆಗ್ತಾನೆ ಇದೆ, ಇಂದು ಪುಟಿದೇಳುತ್ತೆ.. ಈ ತರ ಗೆಸ್ ಮಾಡಿ, ಹಣ ಕಳೆದುಕೊಂಡಿದ್ದಾನೆ.. ಈಗ ಷೇರಿನ ಹೆಸರೆತ್ತಿದ್ರೆ ಸಾಕು ಸಿಡಿಯುತ್ತಾನೆ.. ಮಾರ್ಕೆಟಿನ ಸಹವಾಸವೇ ಬೇಡ ಅಂತಾ ಸುಮ್ಮನಾಗಿದ್ದಾನೆ.. ಮಾರ್ಕೆಟ್ ಕಡೆ ಮುಖ ಹಾಕಿ ಕೂಡಾ ಮಲಗಲ್ವಂತೆ.. ನನಗಂತೂ ಈ ಸ್ಥಿತಿಯಿಲ್ಲ.. ಕೆರೆಯ ನೀರನ್ನ ಕೆರೆಗೆ ಚಲ್ಲಿದ್ದೇನೆ.. ಲಾಸ್ ಆಗಿಲ್ಲ.. ಜೇಬಿಗೆ ಹಣ ಬಂದಿಲ್ಲ.. ಆದ್ರೆ, ಕಲಿತಿದ್ದು ಮಾತ್ರ ಲಾಭ.. ಮುಂದೊಂದು ದಿನ ಹೆಲ್ಪ್ ಆಗೇ ಆಗುತ್ತೆ..
ಷೇರು ಮಾಯಾಲೋಕವಲ್ಲ.. ಜೂಜಲ್ಲ.. ಗೊತ್ತಿಲ್ಲದಿದ್ದವರಿಗೆ ಅದು ನಿಗೂಢಲೋಕ ಅನಿಸುತ್ತದೆ ಅಷ್ಟೆ..!!!
ವಿಷ್ಣು ಹೆಗಡೆ , ಕುಮಟಾ

