Saturday, October 13, 2012

ಈ ದೇಶದಲ್ಲಿ ಇರೋದು ಒಂದೇ ಎಟಿಮ್!!



ಈ ಜಗತ್ತು ನಿಗೂಢಗಳ ನಾಡು. ಅಚ್ಚರಿಗಳ ಬೀಡು. ಇಂತ ವಿಸ್ಮಯಗಳಲ್ಲಿ ವ್ಯಾಟಿಕನ್ ಸಿಟಿ ಕೂಡಾ ಒಂದು. ಇದು ಜಗತ್ತಿನ ಅತ್ಯಂತ ಸಣ್ಣ ಮತ್ತು ಸ್ವತಂತ್ರರಾಷ್ಟ್ರ. ಇದರ ವಿಸ್ತಾರ ಎಷ್ಟು ಗೊತ್ತಾ? ಬರೀ ಅರ್ಧ ಚದರ್ ಕಿಲೋಮೀಟರ್. ಸುಮಾರು 109 ಹೆಕ್ಟೇರ್. ನಮ್ಮಲ್ಲಿನ ಒಂದು ಗ್ರಾಮ ಅಥವಾ ಹಳ್ಳಿಗಿಂತ ಚಿಕ್ಕದು.! ಈ ದೇಶದ ಜನಸಂಖ್ಯೆ ಬರೀ 800.. ದೇಶ ಇರೋದೆ 109 ಹೆಕ್ಟೇರ್. ಇದ್ರಲ್ಲಿ 23 ಹೆಕ್ಟೇರ್ ಗಾರ್ಡನ್. ಈ ಪುಟ್ಟರಾಷ್ಟ್ರದಲ್ಲಿರೋದು ಒಂದೇ ಒಂದು ಎಟಿಮ್. ಆ ಎಟಿಮ್ ಕೆಲಸ ಮಾಡೋದು ಲ್ಯಾಟಿನ್ ಭಾಷೆಯಲ್ಲಿ. ಹೀಗಾಗಿ ವ್ಯಾಟಿಕನ್ ಸಿಟಿಗೆ ಹೋಗುವ ಮುನ್ನ ಯೋಚನೆ ಮಾಡೋದು ಒಳ್ಳೆಯದು.ಇನ್ನೊಂದು ಇಂಟರೆಸ್ಟಿಂಗ್ ವಿಷ್ಯ ಅಂದ್ರೆ, ನಗರದ ಮಧ್ಯಭಾಗದಲ್ಲಿ ಕ್ರಿಶ್ಚಿಯನ್ ಧರ್ಮಗುರುಗಳು ಇರುವ ದೇವಾಲಯ. ಇದು ಜಗತ್ತಿನಲ್ಲಿಯೇ ಅತಿದೊಡ್ಡ ಚರ್ಚ್. ಈ ಪುಟ್ಟರಾಷ್ಟ್ರದಲ್ಲಿ ಜಗತ್ತಿನಲ್ಲಿಯೇ ಅತಿದೊಡ್ಡ ಚರ್ಚ್ ಇದೆ ಅಂದ್ರೆ ನಂಬ್ಲೆ ಬೇಕು.


ಈ ದೇಶ ಕಾಯೋದೆ ಸೈನಿಕರಿಲ್ಲ. ಇಲ್ಲಿ ಶತ್ರುವಿನ ಎದೆಯನ್ನ ಸೀಳಬಲ್ಲ ಕ್ಷಿಪಣಿಗಳಿಲ್ಲ. ಯುದ್ಧ ಟ್ಯಾಂಕರ್ ಗಳಿಲ್ಲ. ಪೊಲೀಸರಿಲ್ಲ. ಹಾಗಾದ್ರೆ, ದೇಶದ ರಕ್ಷಣೆ ಹೇಗೆ ಅನ್ನುವ ಪ್ರಶ್ನೆ ಉದ್ಭವಿಸುವುದು ಸಹಜವೇ.? ಇಡೀ ದೇಶದ ರಕ್ಷಣೆಯ ಹೊಣೆ ಹೊತ್ತಿರೋದು 300 guardsಗಳು. ಇವರಿಗೆ ಪ್ರತ್ಯೇಕ ಯುನಿಫಾರ್ಮ್ ಇದೆ. ಶಾಂತಿ, ಸುವ್ಯವಸ್ಥೆ , ಕಾನೂನು ಕಾಪಾಡೋದು, ಟ್ರಾಫಿಕ್ ವ್ಯವಸ್ಥೆ ನಿಯಂತ್ರಣ, ಕ್ರೈಮ್ ತನಿಖೆ ಇದೆಲ್ಲ ಇವರ ಹೊಣೆ.. ಪೋಪ್ ರಕ್ಷಣೆಗೆ ಸ್ವಿಸ್ guards ಗಳಿದ್ದಾರೆ.



ಅಲ್ಲಿನ ಸಾರಿಗೆ ವ್ಯವಸ್ಥೆ ಬಗ್ಗೆ ಹೇಳಲೇಬೇಕು. ನಮ್ಮಲ್ಲಿನ ಹಾಗೆ ಟ್ರಾಫಿಕ್ ಸಮಸ್ಯೆ ಇಲ್ಲವೇ ಇಲ್ಲ. ಇಡೀ ದೇಶವನ್ನ ಕಾಲ್ನಡಿಗೆಯಲ್ಲೆ ಸುತ್ತಬಹುದು. ಅಲೆಯಬಹುದು. ದೇಶವನ್ನ ಆವರಿಸಿಕೊಂಡಿದ್ದು ಒಂದೇ ಕಿಲೋಮೀಟರ್ ರಸ್ತೆ. ಅದ್ ಬಿಟ್ರೆ, ರಾಷ್ಟ್ರೀಯ ಹೆದ್ದಾರಿಗಳಿಲ್ಲ. ವಿಮಾನ ನಿಲ್ದಾಣಗಳಿಲ್ಲ. ರೈಲ್ವೆ ವ್ಯವಸ್ಥೆ ಇಲ್ಲ. ಒಂದು ಹ್ಯಾಲಿಪ್ಯಾಡ್ ಇದೆ ಅಷ್ಟೆ.!ರಾಜಕೀಯ ಡೊಂಬರಾಟವೇ ಇಲ್ಲ. ವೋಟ್ ಬ್ಯಾಂಕ್ ರಾಜಕಾರಣ ಇಲ್ಲ. ಎಲ್ಲವನ್ನ ನೋಡಿಕೊಳ್ಳುವುದು ಪೋಪ್. ಸರ್ಕಾರದ ಮುಖ್ಯಸ್ಥರು ಅವರೆ. ಆಡಳಿತ ನೋಡಿಕೊಳ್ಳಲು ಆಡಳಿತವ ವರ್ಗ ಇದೆ. ಆಡಿಳಿತವ ವರ್ಗದ ಅಧಿಕಾರಸ್ಥರನ್ನ ಐದು ವರ್ಷದ ಅವಧಿಗಾಗಿ ಆಯ್ಕೆ ಮಾಡಲಾಗುತ್ತದೆ. ಇವರೆಲ್ಲರಿಗೂ ಪೋಪ್ ಮುಖ್ಯಸ್ಥರು.


ವಿಷ್ಣು ಹೆಗಡೆ, ಕುಮಟಾ

Tuesday, October 9, 2012

ಜಲಯುದ್ಧ...




ಕಾವೇರಿ ಹರಿಯುತ್ತಲೇ ಇದ್ದಾಳೆ. ಆಕೆಗೆ ವಿವಾದಗಳ ಅರಿವಿಲ್ಲ. ಜೀವ ಸಿರಿಯಾಗಿದ್ದೇನೆ ಅಹಂ ಇಲ್ಲ. ಬರಿದಾಗುತ್ತೇನೆ ಎಂಬ ಭಯವಿಲ್ಲ. ಮಳೆಯಾದಾಗ ಮೈದುಂಬಿಕೊಂಡು, ಮಳೆಬಾರದಿದ್ದಾಗ ಸೊರಗಿ ಹರಿಯುತ್ತಲೇ ಇದ್ದಾಳೆ ತಣ್ಣಗೆ, ಮೆಲ್ಲಗೆ..

ಆದ್ರೆ ಕರ್ನಾಟಕ, ತಮಿಳುನಾಡು ಮಧ್ಯೆ ಜಲಯದ್ಧ ಆರಂಭವಾಗಿದೆ. ಜೀವನದಿಗಾಗಿ. ಕಾವೇರಿಯ ನೀರಿಗಾಗಿ. ಆಕೆಯ ಮೇಲಿನ ಹಕ್ಕಿಗಾಗಿ. ರಾಜಕೀಯ ಮೇಲಾಟಕ್ಕಾಗಿ. ಕೆಲವರ ಸ್ವಾರ್ಥಕ್ಕಾಗಿ. ಕಾವೇರಿ ನದಿಪ್ರಾಧಿಕರ ತಮಿಳುನಾಡಿಗೆ ನೀರು ಬಿಡಬೇಕೆಂದು ಆದೇಶಿಸುತ್ತಿದ್ದಂತೆ ಕಾವೇರಿ ಕಣಿವೆಯಲ್ಲಿ ಕಾವು. ಸುಪ್ರೀಂ ಕೋರ್ಟ್ ನಿಂದಲೂ ರಾಜ್ಯಕ್ಕೆ ಕಹಿ. ಪ್ರಧಾನಿಯೂ ನೆರವಿಗೆ ಬಾರಲಿಲ್ಲ. ಕಾಂಗ್ರೆಸ್ ಶಾಸಕರು, ಸಂಸದರು, ರಾಜ್ಯದ ಕೇಂದ್ರ ಮಂತ್ರಿಗಳು, ಕೇಂದ್ರದ ಮೇಲೆ ಒತ್ತಡ ಹೇರುವಲ್ಲಿ ವಿಫಲರಾದ್ರು. ಹೀಗಾಗಿ ಇಕ್ಕಟ್ಟಿಗೆ ಸಿಲುಕಿದ ಸರ್ಕಾರ ತಮಿಳುನಾಡಿಗೆ ನೀರು ಬಿಡಲೇ ಬೇಕಾಯಿತು. ಪರಿಣಾಮ ಕಾವೇರಿ ಕಣಿವೆ ಹೊತ್ತಿ ಉರಿಯಿತು. ಪ್ರತಿಭಟನೆಯ ಕಿಡಿ ಈಗ ಬೆಂಕಿಯಾಗಿ ರಾಜ್ಯವನ್ನೇ ಆವರಿಸಿಕೊಂಡಿದೆ. ಮಂಡ್ಯ, ಮೈಸೂರು ಭಾಗದ ರೈತರು ಸಿಡಿದೆದ್ದಿದ್ದಾರೆ. ಸರ್ಕಾರಕ್ಕೆ ಇಕ್ಕಟ್ಟಿನ ಪರಿಸ್ಥಿತಿ. ನೀರುಬಿಟ್ಟರೆ ರೈತರ ವಿರೋಧ. ಬಿಡದಿದ್ದರೆ ನ್ಯಾಯಾಂಗ ನಿಂದನೆ ಆರೋಪದ ಭಯ. 

ರಾಜ್ಯ ಇಂತ ಪರಿಸ್ಥಿತಿ ಎದುರಿಸಿದ್ದು ಇದು ಮೊದಲೇನಲ್ಲ. ಬಂಗಾರಪ್ಪ, ಎಸ್.ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗಲೂ ಇಂತಹದೇ ಪರಿಸ್ಥಿತಿ ಎದುರಾಗಿತ್ತು.ಬರದ ಪರಿಸ್ಥಿತಿಯಲ್ಲೂ ತಮಿಳುನಾಡಿಗೆ ನೀರು ಬಿಡಬೇಕಾದ ಸಂದಿಗ್ದತೆ ಇತ್ತು. ಕಾವೇರಿ ವಿವಾದದ್ದು ಶತಮಾನದ ಸಮಸ್ಯೆ. ಬ್ರಿಟಿಷರ ಕಾಲದಲ್ಲಿ ಆರಂಭವಾದ ಜಲಯುದ್ಧ ಮೈಸೂರು ಮಹಾರಾಜರ ಕಾಲದಲ್ಲೂ ಮುಂದುವರಿದಿತ್ತು. ಈಗಲೂ ಹೊಗೆಯಾಡುತ್ತಲೇ ಇದೆ. ಕಾವೇರಿ ಕೊಳ್ಳದ ಜಲಾಶಯಗಳು ತುಂಬಿದ್ರೆ ಸಮಸ್ಯೆಯಿಲ್ಲ. ಆದ್ರೆ, ಸಮಸ್ಯೆ ಶುರುವಾಗೋದೆ ಕಾವೇರಿಯ ಒಡಲು ಬರಿದಾದಾಗ. ಬರದ ಪರಿಸ್ಥಿತಿ ಬಂದಾಗ..


ಇನ್ನು ಕಾವೇರಿ ವಿವಾದ ರೈತರಿಗೆ ಸಮಸ್ಯೆಯಾದ್ರೆ, ರಾಜಕಾರಣಿಗಳಿಗೆ ವರ. ಅವಕಾಶವಾದಿಗೆ ವೋಟ್ ಬ್ಯಾಂಕ್. ವಿವಾದದಲ್ಲಿ ಪ್ರತಿಬಾರಿಯೂ ರಾಜ್ಯ ಸೋಲುತ್ತಲೇ ಇದೆ. ರಾಜಕೀಯ ಮೇಲಾಟದಲ್ಲಿ ತಮಿಳುನಾಡಿದ ಕೈ ಮೇಲಾಗುತ್ತಿದೆ. ಇದ್ಕೆ ಕಾರಣ ತಮಿಳುನಾಡಿದ ರಾಜಕಾರಣಿಗಳು. ಅಲ್ಲಿನ ಪ್ರಾದೇಶಿಕ ಪಕ್ಷಗಳ ಪವರ್. ಕೇಂದ್ರ ಸರ್ಕಾರದಲ್ಲಿ ಪ್ರತಿ ಬಾರಿಯೂ ತಮಿಳುನಾಡಿನ ರಾಜಕೀಯ ಪಕ್ಷಗಳು ಪಾಲುದಾರರು. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ. ಹೀಗಾಗಿ ಅವುಗಳ ಲಾಬಿಯೇ ನಡೆಯುತ್ತವೆ. ಹಾಗಿದ್ದರೆ ಕರ್ನಾಟಕದ ಪರ ನಿಲ್ಲುವವರು ಯಾರು? ಯಾರೂ ಇಲ್ಲ ಅನ್ನೊದು ಕಹಿ ಸತ್ಯ. ಬಿಜೆಪಿಯ ಕೇಂದ್ರದ ವರಿಷ್ಠರೂ ರಾಜ್ಯದ ಪರ ನಿಲ್ಲವುದಿಲ್ಲ. ಮುಂದಿನ ಚುನಾವಣೆಯಲ್ಲಿ ಅಧಿಕಾರದ ಕನಸು ಕಾಣುತ್ತಿರುವ ಬಿಜೆಪಿ ವರಿಷ್ಠರಿಗೆ ಕರುಣಾನಿಧಿ ಅಥವಾ ಜಯಲಲಿತಾ ಕೃಪೆ ಅನಿವಾರ್ಯ. ಹೀಗಾಗಿ ರಾಜ್ಯದ ಕೂಗನ್ನ, ರೈತರ ಆಕ್ರೋಶವನ್ನ, ಆಕ್ರಂದನವನ್ನ ಕೇಳುವವರೆ ಇಲ್ಲ.

ವಿಷ್ಣು ಹೆಗಡೆ, ಕುಮಟಾ

Saturday, October 6, 2012

ಧಾರವಾಹಿಗಳ ಲೋಕ...



 

ದಿನ ಮುಗಿಯುತ್ತಿದ್ದರೂ ಧಾರವಾಹಿಗಳು ಮುಗಿಯುತ್ತಿರಲಿಲ್ಲ. ಬೆಳಿಗ್ಗೆಯಿಂದ ಸಂಜೆತನಕ ಅದೇ ರಾಗ, ಅದೇ ಹಾಡು.ಟೀವಿ ಆನ್ ಮಾಡಿದ್ರೆ ಸಾಕು, ರಾಧಾ, ಸುಕನ್ಯ, ಕಾದಂಬರಿ ಧಾರವಾಹಿ ಪ್ರೋವೋಗಳ ಸುರಿಮಳೆ. "ಎಂತಾ ಕಾಲಬಂತು ನೋಡಿ. ನಮ್ಮ ಕಾಲದಲ್ಲಿ ಹೀಗೆ ಇರ್ಲಿಲ್ಲ. ಈಗಿನ ಧಾರವಾಹಿಗಳೋ ಧರಿದ್ರ ಧರಿದ್ರ" ಅಂತಾ ಕೆಲವರು ಗೊಣಗುತ್ತಿದ್ರೆ, ಹಲವರು ಮೆಗಾ ಸೀರಿಯಲ್ಲುಗಳ ಮೋಡಿಗೆ ಸಿಲುಕಿಕೊಂಡಿದ್ದಾರೆ. ಧಾರವಾಹಿಗಳ ಟಿಆರ್ ಪಿ ಹೆಚ್ಚುತ್ತಲೇ ಇದೆ. ಮೆಗಾಸೀರಿಯಲ್ಲುಗಳ 'ಪುರಾಣ' ಮುಗಿಯುವ ಲಕ್ಷಣ ಕಾಣ್ತಿಲ್ಲ. ಕೆಲವಂತೂ ಸಾವಿರ ಎಪಿಪೋಡ್ ಗಳನ್ನೂ ದಾಟಿ ಮುನ್ನುಗ್ಗುತ್ತಲೇ ಇವೆ. ಅತ್ತ-ಸೊಸೆ ಜಗಳವಾಡುತ್ತಲೇ ಇದ್ದಾರೆ. ಪ್ರೀತಿ-ಪ್ರೇಮ-ದ್ವೇಷ, ಸಂಬಂಧ-ಅನೈತಿಕ ಸಂಬಂಧ,ಮನೆಜಗಳ.. ಹೀಗೆ ಸೆಂಟಿಮೆಂಟ್ ಕಥೆಗಳೇ ಈ ಧಾರವಾಹಿಗಳ ಜೀವಾಳ. ಮಹಿಳೆಯರೇ ವೀಕ್ಷಕರು. ಹೀಗಾಗಿ ಮೆಗಾಸೀರಿಯಲ್ಲು ಗಳಲ್ಲಿ ಮಹಿಳಾ ಪ್ರಧಾನ ಕಥೆಗಳೇ.. ಮಹಿಳೆಯರೇ ಪ್ರಧಾನ ಪಾತ್ರಧಾರಿಗಳು, ಸೂತ್ರಧಾರಿಗಳು..!

ಈ ಧಾರವಾಹಿಗಳಲ್ಲಿ ನಟರ ನಟನೆ ಅಷ್ಟಕಷ್ಟೆ.. ಭಾವನೆಗಳು ಕಡಿಮೆ. ಕೇವಲ ಹಿನ್ನಲೆ ಸಂಗೀತದಲ್ಲೇ ಸನ್ನಿವೇಶವನ್ನಊಹಿಸಿಕೊಳ್ಳಬೇಕು. ಒಂದೇ ಶಾಟ್ ಗಳನ್ನ ವಿವಿಧ ಎಂಗಲ್ ಗಳಲ್ಲಿ ಬೆದರಿಸುವ ಹಿನ್ನಲೆ ಸಂಗೀತದೊಂದಿಗೆ ತೋರಿಸಿದರೆ ಅದು ಶಾಕ್ ಸನ್ನಿವೇಶ.. ಮುಖದಲ್ಲಿ ಸ್ವಲ್ಪ ನಗು ಜೊತೆಗೆ ಹ್ಯಾಪಿ ಟೋನ್ ಇದ್ದರೆ, ಆಗ ಸಂತಸದ ಸಮಯ.. ಇಲ್ಲಿ ಪಾತ್ರಧಾರಿಯ ಭಾವನೆಗಿಂತ, ಹಿನ್ನಲೆ ಸಂಗೀತದಿಂದಲೇ ಪಾತ್ರದ ಭಾವ ತಿಳಿದುಕೊಳ್ಳಬೇಕಾದ ಪರಿಸ್ಥಿತಿ..

ನಮ್ಮ ಅಜ್ಜಿ-ಅಮ್ಮ ಏನಿಲ್ಲವೆಂದರೂ ದಿನಕ್ಕೆ ಇಂತ 10 ಧಾರವಾಹಿಗಳನ್ನ ನೋಡುತ್ತಾರೆ. ಅಂದರೆ 10 ಕಥೆ. ಅದರೊಗಳೊಗೆ ಏನಿಲ್ಲವೆಂದರೂ 40-50 ಉಪಕಥೆಗಳು. ನೂರಿನ್ನೂರು ಪಾತ್ರಗಳನ್ನ ನೆನಪಿಟ್ಟಿಕೊಳ್ಳಬೇಕು. ಧಾರವಾಹಿಗಳನ್ನ ನೋಡಿ ಅನುಭವವಿರುವ ನಮ್ಮ ಅಜ್ಜಿ-ಅಮ್ಮನಿಗೆ ಇದು ಅಷ್ಟು ಕಷ್ಟದ ವಿಚಾರವೇನಲ್ಲ.

ತುಂಬಾದಿನ ನಡೆದುಕೊಂಡು ಬಂದ ಮೆಗಾ ಸೀರಿಯಲ್ಲುಗಳಿಗೆ ಕಥೆ ಮುಖ್ಯವಲ್ಲ. ಹೆಸರೇ ಧಾರವಾಹಿಗಳನ್ನ ನಡೆಸುತ್ತವೆ. ಶಾಂಪು, ಸೋಪುಗಳ ಜಾಹೀರಾತು ತೋರಿಸಿ, ಮಾರಾಟ ಮಾಡಿಸಿ ವ್ಯವಹಾರ ಮಾಡಿಕೊಳ್ಳುತ್ತಾರೆ ನಿರ್ದೇಶಕರು. ಈ ಧಾರವಾಹಿಗಳ ಮಧ್ಯದಲ್ಲಿ ಬರುವ ಜಾಹೀರಾತುಗಳನ್ನ ನೋಡುವ ಮಹಿಳೆಯರೇ ಸಾಮಾನ್ಯವಾಗಿ, ಮನೆಯಲ್ಲಿ ಕುಟುಂಬಕ್ಕೆ ಬೇಕಾದ ಸಾಮಾನುಗಳನ್ನ ಕೊಳ್ಳುವರು. ಹೀಗಾಗಿ ಜಾಹೀರಾತುಗಳು ಬಿಕರಿಯಾಗುತ್ತಿವೆ. ಪ್ರಾಡೆಕ್ಟ್ ಗಳು ಮಾರಾಟವಾಗುತ್ತಿವೆ. ಹೆಣ್ಣಿನ ಕಣ್ಣೀರು ಹಾಕಿಸಿ, ಜಗಳ ಮಾಡಿಸಿ, ಕಥೆಗಳು ಮುನ್ನುಗ್ಗುತ್ತಲೆ ಇವೆ. ಧಾರವಾಹಿಗಳ ಟಿಆರ್ ಪಿ ಹೆಚ್ಚುತ್ತಲೆ ಇದೆ..

ವಿಷ್ಣು ಹೆಗಡೆ, ಕುಮಟಾ