ಕಾವೇರಿ ಹರಿಯುತ್ತಲೇ ಇದ್ದಾಳೆ. ಆಕೆಗೆ ವಿವಾದಗಳ ಅರಿವಿಲ್ಲ. ಜೀವ ಸಿರಿಯಾಗಿದ್ದೇನೆ ಅಹಂ ಇಲ್ಲ. ಬರಿದಾಗುತ್ತೇನೆ ಎಂಬ ಭಯವಿಲ್ಲ. ಮಳೆಯಾದಾಗ ಮೈದುಂಬಿಕೊಂಡು, ಮಳೆಬಾರದಿದ್ದಾಗ ಸೊರಗಿ ಹರಿಯುತ್ತಲೇ ಇದ್ದಾಳೆ ತಣ್ಣಗೆ, ಮೆಲ್ಲಗೆ..
ಆದ್ರೆ ಕರ್ನಾಟಕ, ತಮಿಳುನಾಡು ಮಧ್ಯೆ ಜಲಯದ್ಧ ಆರಂಭವಾಗಿದೆ. ಜೀವನದಿಗಾಗಿ. ಕಾವೇರಿಯ ನೀರಿಗಾಗಿ. ಆಕೆಯ ಮೇಲಿನ ಹಕ್ಕಿಗಾಗಿ. ರಾಜಕೀಯ ಮೇಲಾಟಕ್ಕಾಗಿ. ಕೆಲವರ ಸ್ವಾರ್ಥಕ್ಕಾಗಿ. ಕಾವೇರಿ ನದಿಪ್ರಾಧಿಕರ ತಮಿಳುನಾಡಿಗೆ ನೀರು ಬಿಡಬೇಕೆಂದು ಆದೇಶಿಸುತ್ತಿದ್ದಂತೆ ಕಾವೇರಿ ಕಣಿವೆಯಲ್ಲಿ ಕಾವು. ಸುಪ್ರೀಂ ಕೋರ್ಟ್ ನಿಂದಲೂ ರಾಜ್ಯಕ್ಕೆ ಕಹಿ. ಪ್ರಧಾನಿಯೂ ನೆರವಿಗೆ ಬಾರಲಿಲ್ಲ. ಕಾಂಗ್ರೆಸ್ ಶಾಸಕರು, ಸಂಸದರು, ರಾಜ್ಯದ ಕೇಂದ್ರ ಮಂತ್ರಿಗಳು, ಕೇಂದ್ರದ ಮೇಲೆ ಒತ್ತಡ ಹೇರುವಲ್ಲಿ ವಿಫಲರಾದ್ರು. ಹೀಗಾಗಿ ಇಕ್ಕಟ್ಟಿಗೆ ಸಿಲುಕಿದ ಸರ್ಕಾರ ತಮಿಳುನಾಡಿಗೆ ನೀರು ಬಿಡಲೇ ಬೇಕಾಯಿತು. ಪರಿಣಾಮ ಕಾವೇರಿ ಕಣಿವೆ ಹೊತ್ತಿ ಉರಿಯಿತು. ಪ್ರತಿಭಟನೆಯ ಕಿಡಿ ಈಗ ಬೆಂಕಿಯಾಗಿ ರಾಜ್ಯವನ್ನೇ ಆವರಿಸಿಕೊಂಡಿದೆ. ಮಂಡ್ಯ, ಮೈಸೂರು ಭಾಗದ ರೈತರು ಸಿಡಿದೆದ್ದಿದ್ದಾರೆ. ಸರ್ಕಾರಕ್ಕೆ ಇಕ್ಕಟ್ಟಿನ ಪರಿಸ್ಥಿತಿ. ನೀರುಬಿಟ್ಟರೆ ರೈತರ ವಿರೋಧ. ಬಿಡದಿದ್ದರೆ ನ್ಯಾಯಾಂಗ ನಿಂದನೆ ಆರೋಪದ ಭಯ.
ರಾಜ್ಯ ಇಂತ ಪರಿಸ್ಥಿತಿ ಎದುರಿಸಿದ್ದು ಇದು ಮೊದಲೇನಲ್ಲ. ಬಂಗಾರಪ್ಪ, ಎಸ್.ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗಲೂ ಇಂತಹದೇ ಪರಿಸ್ಥಿತಿ ಎದುರಾಗಿತ್ತು.ಬರದ ಪರಿಸ್ಥಿತಿಯಲ್ಲೂ ತಮಿಳುನಾಡಿಗೆ ನೀರು ಬಿಡಬೇಕಾದ ಸಂದಿಗ್ದತೆ ಇತ್ತು. ಕಾವೇರಿ ವಿವಾದದ್ದು ಶತಮಾನದ ಸಮಸ್ಯೆ. ಬ್ರಿಟಿಷರ ಕಾಲದಲ್ಲಿ ಆರಂಭವಾದ ಜಲಯುದ್ಧ ಮೈಸೂರು ಮಹಾರಾಜರ ಕಾಲದಲ್ಲೂ ಮುಂದುವರಿದಿತ್ತು. ಈಗಲೂ ಹೊಗೆಯಾಡುತ್ತಲೇ ಇದೆ. ಕಾವೇರಿ ಕೊಳ್ಳದ ಜಲಾಶಯಗಳು ತುಂಬಿದ್ರೆ ಸಮಸ್ಯೆಯಿಲ್ಲ. ಆದ್ರೆ, ಸಮಸ್ಯೆ ಶುರುವಾಗೋದೆ ಕಾವೇರಿಯ ಒಡಲು ಬರಿದಾದಾಗ. ಬರದ ಪರಿಸ್ಥಿತಿ ಬಂದಾಗ..
ಇನ್ನು ಕಾವೇರಿ ವಿವಾದ ರೈತರಿಗೆ ಸಮಸ್ಯೆಯಾದ್ರೆ, ರಾಜಕಾರಣಿಗಳಿಗೆ ವರ. ಅವಕಾಶವಾದಿಗೆ ವೋಟ್ ಬ್ಯಾಂಕ್. ವಿವಾದದಲ್ಲಿ ಪ್ರತಿಬಾರಿಯೂ ರಾಜ್ಯ ಸೋಲುತ್ತಲೇ ಇದೆ. ರಾಜಕೀಯ ಮೇಲಾಟದಲ್ಲಿ ತಮಿಳುನಾಡಿದ ಕೈ ಮೇಲಾಗುತ್ತಿದೆ. ಇದ್ಕೆ ಕಾರಣ ತಮಿಳುನಾಡಿದ ರಾಜಕಾರಣಿಗಳು. ಅಲ್ಲಿನ ಪ್ರಾದೇಶಿಕ ಪಕ್ಷಗಳ ಪವರ್. ಕೇಂದ್ರ ಸರ್ಕಾರದಲ್ಲಿ ಪ್ರತಿ ಬಾರಿಯೂ ತಮಿಳುನಾಡಿನ ರಾಜಕೀಯ ಪಕ್ಷಗಳು ಪಾಲುದಾರರು. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ. ಹೀಗಾಗಿ ಅವುಗಳ ಲಾಬಿಯೇ ನಡೆಯುತ್ತವೆ. ಹಾಗಿದ್ದರೆ ಕರ್ನಾಟಕದ ಪರ ನಿಲ್ಲುವವರು ಯಾರು? ಯಾರೂ ಇಲ್ಲ ಅನ್ನೊದು ಕಹಿ ಸತ್ಯ. ಬಿಜೆಪಿಯ ಕೇಂದ್ರದ ವರಿಷ್ಠರೂ ರಾಜ್ಯದ ಪರ ನಿಲ್ಲವುದಿಲ್ಲ. ಮುಂದಿನ ಚುನಾವಣೆಯಲ್ಲಿ ಅಧಿಕಾರದ ಕನಸು ಕಾಣುತ್ತಿರುವ ಬಿಜೆಪಿ ವರಿಷ್ಠರಿಗೆ ಕರುಣಾನಿಧಿ ಅಥವಾ ಜಯಲಲಿತಾ ಕೃಪೆ ಅನಿವಾರ್ಯ. ಹೀಗಾಗಿ ರಾಜ್ಯದ ಕೂಗನ್ನ, ರೈತರ ಆಕ್ರೋಶವನ್ನ, ಆಕ್ರಂದನವನ್ನ ಕೇಳುವವರೆ ಇಲ್ಲ.
ವಿಷ್ಣು ಹೆಗಡೆ, ಕುಮಟಾ
ವಿಷ್ಣು ಹೆಗಡೆ, ಕುಮಟಾ

