Wednesday, December 19, 2012

ದೊಡ್ಡಣ್ಣನ ನಾಡಿನ 'ಹಿರಿಯಣ್ಣ'




ಅಮೆರಿಕಾದ ಕಂಪೆನಿಗಳು ಬರ್ತಿವೆಯಂತೆ. ನಮಗಿನ್ನು ಎಲ್ಲಿ ಉಳಿಗಾಲ.? ಚಿಂತೆ ಶರುವಾಗಿದೆ, ಮುಂದೆನು ಅಂತಾ? ಗೊತ್ತಿರೋದು ಇದೊಂದೆ ಕಸುಬು. ಹೀಗೆ.. ಒಂದೆಸಮನೆ ಮನಸ್ಸಿನ ಆತಂಕಗಳನ್ನ ಹೊರಹಾಕುತ್ತಲೇ ಇದ್ದ, ಕಿರಾಣಿ ಅಂಗಡಿಯಾತ. ಇದು ಆತನೊಬ್ಬನ ಆತಂಕ ಅಲ್ಲ. ಇಡೀ ಕಿರಾಣಿ ಸಮುದಾಯದ ಅಳಲು. ಧ್ವನಿ. ಇದೆಲ್ಲ ಆತಂಕಕ್ಕೆ ಕಾರಣವಾಗಿದ್ದು ಚಿಲ್ಲರೆ ಕ್ಷೇತ್ರದಲ್ಲಿ ಶೇಕಡಾ 51 ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಕೇಂದ್ರ ಸರ್ಕಾರ ಕೊಟ್ಟ ಅನುಮತಿಯಿಂದ. ಇದರಿಂದಾಗಿ ವಾಲ್ ಮಾರ್ಟ್ ನಂತಹ ವಿದೇಶಿ ರಿಟೇಲ್ ಕಂಪೆನಿಗಳು ಭಾರತಕ್ಕೆ ಬರಲು  ಹೆಬ್ಬಾಗಿಲು ತೆರೆದಂತಾಗಿದೆ.

ಅಮೆರಿಕಾ ಜಗತ್ತಿಗೆ ಹಿರಿಯಣ್ಣ ಆದ್ರೆ, ವಾಲ್ ಮಾರ್ಟ್ ರಿಟೇಲ್ ಕ್ಷೇತ್ರಕ್ಕೆ ದೊಡ್ಡಣ್ಣ. ವಿಶ್ವದೆಲ್ಲೆಡೆ ಚಿಲ್ಲರೆ ಕ್ಷೇತ್ರದಲ್ಲಿ ಕಬಂದ ಬಾಹು ಚಾಚಿದ ದೈತ್ಯ ಸಂಸ್ಥೆ. ಇದರ ವಾರ್ಷಿಕ ಆದಾಯ 420 ಬಿಲಿಯನ್ ಅಮೆರಿಕನ್ ಡಾಲರ್. 15 ದೇಶಗಲ್ಲಿ 8500 ಕ್ಕೂ ಹೆಚ್ಚು ಮಳಿಗೆಗಳಿದ್ದು 2 ಕೋಟಿಗೂ ಅಧಿಕ ಕಾರ್ಮಿಕರಿದ್ದಾರೆ.. ಇನ್ನೊಂದೆರಡು ವರ್ಷಗಳಲ್ಲಿ ಈ ದೈತ್ಯ ಕಂಪೆನಿ ನಗರದೆಲ್ಲೆಡೆ ತಮ್ಮ ಮಳಿಗೆಗಳನ್ನ ತೆರೆಯಲಿವೆ..  ಇದರಿಂದ ಯಾರಿಗೆ ಲಾಭ? ಯಾರಿಗೆ ನಷ್ಟ.? ಹೀಗೆ ಪರ, ವಿರೋಧ ವಾದ ಶುರುವಾಗಿದೆ..

ಭಾರತಲ್ಲಿ ಕೃಷಿ ಕ್ಷೇತ್ರಬಿಟ್ಟರೆ, ಅತಿಹೆಚ್ಚು ಅಸಂಘಟಿತ ಕಾರ್ಮಿಕರಿರೋದು ಚಿಲ್ಲರೆ ಕ್ಷೇತ್ರದಲ್ಲೆ.. ಈ ಕ್ಷೇತ್ರದಲ್ಲಿ ವಾಲ್ ಮಾರ್ಟ್ ನಂತಹ ದೈತ್ಯ ಕಂಪೆನಿಗಳು ಸುಂಟರಗಾಳಿಯಂತೆ ಬಂದು ಅಪ್ಪಳಿಸಿದರೆ ಇವರೆಲ್ಲರ ಗತಿ ಏನು? ಕಿರಾಣಿ ಅಂಗಡಿಯವರು ಹೇಳ ಹೆಸರಿಲ್ಲದೆ ಹೋಗುತ್ತಾರೆ? ದೇಶದ ಆರ್ಥಿಕ ವ್ಯವಸ್ಥೆ ಬಹುರಾಷ್ಟ್ರೀಯ ಕಂಪೆನಿಗಳ ಪಾಲಾಗಲಿವೆ? ನಾವು ಆಹಾರೋತ್ಪನ್ನಗಳ ಮೇಲಿನ ಹಿಡಿವನ್ನ ಕಳೆದುಕೊಳ್ಳಲಿದ್ದೇವೆ.? ಹೀಗೆ ಮುಂದುವರೆಯುತ್ತಲೇ ಹೋಗುತ್ತವೆ ಟೀಕೆ ಮಾಡುವವರ ಸಾಲುಗಳು.

ವಾಲ್ ಮಾರ್ಟ್, ಟೆಸ್ಕೋ, ಕ್ಯಾರ್ ಫೋರ್ ನಂತಹ ಕಂಪೆನಿ ಅಪಾರ ಪ್ರಮಾಣದ ಬಂಡವಾಳ ಹೊಂದಿವೆ. ಇಂತವರ ಮಧ್ಯೆ ನಮ್ಮ ಬಡ ಕಿರಾಣಿ ವ್ಯಾಪಾರಿಗಳು ಸ್ಪರ್ಧಿಸಲು ಸಾಧ್ಯವೇ? ಆರಂಭದಲ್ಲಿ ಕಡಿಮೆ ಬೆಲೆಗೆ ವಸ್ತುಗಳನ್ನ ಮಾರುವ ಈ ಕಂಪೆನಿಗಳು ನಿಧಾನವಾಗಿ ಗ್ರಾಹಕರನ್ನ ತಮ್ಮತ್ತ ಸೆಳೆಯುತ್ತವೆ. ಆಫರ್ ಆಮಿಷವನ್ನ ನೀಡಿ ಜನರಲ್ಲಿ ಕೊಳ್ಳುಬಾಕ ಸಂಸ್ಕೃತಿಯನ್ನ ಬಿತ್ತಿ, ತಮ್ಮ ವಸ್ತುಗಳನ್ನ ಮಾರುತ್ತವೆ. ಇವರಿಗೆ ಸರ್ಧೆ ಮಾಡಲು ಕಿರಾಣಿ ಅಂಗಡಿಯವರಿಗೆ ಸಾಧ್ಯವೇ ಆಗುವುದಿಲ್ಲ. ಐದಾರು ವರ್ಷಗಳ ಬಳಿಕ ಇವರಿಗೆ ಪೈಪೋಟಿಯೇ ಇರುವುದಿಲ್ಲ. ಹೀಗೆ ಮಾರಾಟದಲ್ಲಿ ಏಕಸ್ವಾಮ್ಯತೆ ಸಾಧಿಸಿದ ಬಳಿಕ ಹಂತ ಹಂತವಾಗಿ ಬೆಲೆಗಳನ್ನ ಏರಿಸಿ, ಲಾಭವನ್ನ ಜೇಬಿಗಿಳಸಲು ಆರಂಭಿಸುತ್ತವೆ.. ಈ ಕಂಪೆನಿಗಳು ಅಮೆರಿಕಾದಲ್ಲಿ ಮಾಡಿದ್ದು ಇದನ್ನೆ. ಭಾರತದಲ್ಲೂ ಸಾಧ್ಯವೇ?

ಆದ್ರೆ, ಒಂದು ಅಂಶವನ್ನ ಗಮನಿಸಬೇಕಿದೆ. ವಾಲ್ ಮಾರ್ಟ್ ನಂತಹ ಕಂಪೆನಿಗಳಿಂದ ಸಣ್ಣ ವ್ಯಾಪಾರಸ್ಥರಿಗೆ ಹಾನಿಯಾಗುತ್ತೆ ಅಂದಾದರೆ, ಮೆಕ್ ಡೋನಾಲ್ಡ್ ನಿಂದ ರಸ್ತೆ ಬದಿಯಲ್ಲಿರುವ ಚಾಟ್ ಮತ್ತು ಟೀ ಶಾಪ್ ಗಳಿಗೆ ಇಷ್ಟೊತ್ತಿಗೆ ಹಾನಿಯಾಗಬೇಕಿತ್ತು. ಕೆಎಫ್ ಸಿ ಬಂದ ಮೇಲೆ ರಸ್ತೆಬದಿಯಲ್ಲಿರುವ ಕೋಳಿ ಅಂಗಡಿಗಳು ಮುಚ್ಚಿಹೋಗಬೇಕಿತ್ತು. ಆದ್ರೆ, ಹಾಗಾಗಲಿಲ್ಲ. ವಾಲ್ ಮಾರ್ಟ್ ನಂತಹ ಕಂಪೆನಿಗಳು ಜರ್ಮನಿ, ಉತ್ತರ ಕೋರಿಯಾದಲ್ಲಿ ಯಶಸ್ಸು ಕಾಣಲಿಲ್ಲ. ಇಂತ ಕಂಪೆನಿಗಳ ಯಶಸ್ಸುಆ ಪ್ರದೇಶದ ಬೌಗೋಳಿಕ, ಆರ್ಥಿಕ, ಸಾಮಾಜಿಕ ಅಂಶಗಳನ್ನ ಅವಲಂಬಿಸಿದೆ. ಅಮೆರಿಕಾದ ಜನರ ಜೀವನ ಶೈಲಿಗೂ, ಅವರ ಆರ್ಥಿಕತೆಗು, ನಮಗೂ ತುಂಬಾ ವೆತ್ಯಾಸಗಳಿವೆ. ಹೀಗಾಗಿ ಭಾರತದಲ್ಲಿ ವಾಲ್ ಮಾರ್ಟ್ ಯಶಸ್ಸು ಕಂಡೆಬಿಡುತ್ತದೆ ಅಂತಾ ಹೇಳೋದು ಕಷ್ಟ. ಆದರೆ, ಆತಂಕವಂತೂ ಇದ್ದೆ ಇದೆ.


ವಿಷ್ಣು ಹೆಗಡೆ , ಕುಮಟಾ