ನೆಮ್ಮದಿಯಿತ್ತು. ಶಾಂತತೆಯಿತ್ತು. ಸಂಸ್ಕೃತಿಯಿತ್ತು. ಒಳ್ಳೆಯ ಪರಿಸರ ಇತ್ತು. ಜನ ಕಷ್ಟಪಟ್ಟು ದುಡಿತಿದ್ರು.. ಮಾದರಿ ಊರಾಗಿತ್ತು.. ಈಗ ಎಲ್ಲಾ ಉಲ್ಟಾಪಲ್ಟಾ.. ಕೇವಲ ಆರೇಳು ವರ್ಷದಲ್ಲಿ ಎಷ್ಟೊಂದು ಬದಲಾವಣೆ ಕಂಡಿದೆ ನಮ್ಮೂರು.. ಇದಕ್ಕೆಲ್ಲ ಕಾರಣ, ಕೊಳಕು ರಾಜಕೀಯ.. ಮತಬ್ಯಾಂಕ್ ರಾಜಕಾರಣ. ಶಾಂತಿ-ಸಹಬಾಳ್ವೆಯಿಂದಿದ್ದ ಊರಿನಲ್ಲಿ ದ್ವೇಷದ ಬೀಜವನ್ನ ಬಿತ್ತಿದ್ದು ಪೊಲಿಟಿಕಲ್ ಲೀಡರ್ಗಳು. ಇಂದು ಆ ಬೀಜ, ಹೆಮ್ಮರವಾಗಿ ಬೆಳೆದು ಊರನ್ನೆ ಆವರಿಸಿಕೊಂಡಿದೆ..
ಈಗ ನಮ್ಮೂರ ರಾಜಕೀಯ ದಿಲ್ಲಿ ರಾಜಕೀಯವನ್ನ ಮೀರಿಸುತ್ತೆ..! ಮನೆಗೊಂದು ಪಕ್ಷ ಹುಟ್ಟಿಕೊಂಡಿದೆ.. ಒಬ್ಬ ಲೀಡರ್ ಹಿಂದೆ ನೂರು ಮಂದಿ.. ಈತನ ಸುತ್ತ ಇರೋರೆಲ್ಲಾ ಹೊಗಳು ಭಟರು, ಸಮಯಧಾಕರು. ಮದ್ಯಪ್ರಿಯರು.. ಊರಲ್ಲೀಗ ಒಬ್ಬರನ್ನ ಕಂಡರೆ ಮತ್ತೊಬ್ಬರಿಗೆ ಆಗಲ್ಲ.. ಒಬ್ಬ, ಮೇಲೇರ ಹೊರಟರೆ ಇನ್ನೊಬ್ಬ ಕಾಲೆಳೆಯುತ್ತಾನೆ.. ಅದನ್ನ ನೋಡಿ ನಗುವವರು ಹತ್ತು ಮಂದಿ.. ಹೀಗಾಗಿ ಈಗ ನಮ್ಮೂರನ್ನ ಅಂತ್ರವಳ್ಳಿ ಅಂತಾ ಕರೆಯೋದಕ್ಕಿಂತ "ಅತಂತ್ರವಾದ ಹಳ್ಳಿ" ಅಂತಾ ಕರೆಯೋದೆ ಸೂಕ್ತ..!!!
ನೆಮ್ಮದಿ ಮಾಯವಾಗಿದೆ. ಶಾಂತತೆ ಕದಡಿದೆ. ಕಷ್ಟಪಷ್ಟು ದುಡಿಯೊ ಜನ ಸೋಮಾರಿಗಳಾಗಿದ್ದಾರೆ.. ರಾಜಕೀಯ ಪುಡಾರಿಗಳು, ಪುಂಡರೇ ತುಂಬಿ ತುಳುಕುತ್ತಿದ್ದಾರೆ.. ಊರು ಅಭಿವೃದ್ಧಿಯಾಗಿಲ್ಲ.. ಲೀಡರ್ಗಳ ಜೇಬು ತುಂಬಿದೆ. ಅವ್ರ ಮನೆಯ ರಸ್ತೆಗಳೆಲ್ಲ ಡಾಂಬರೀಕರಣಗೊಂಡಿದೆ. ಬಡವರು ಇನ್ನೂ ಬಡವರಾಗಿದ್ದಾರೆ.. ಹವ್ಯಾಸಿ ಮದ್ಯಪ್ರಿಯರು ಕುಡಿತವನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದ್ದಾರೆ..!
ಇಷ್ಟೆಲ್ಲಾ ಹಾಳಾಗ್ಲಿಕ್ಕೆ ಪ್ರಮುಖ ಕಾರಣ ಗ್ರಾಮಪಂಚಾಯತ್ ಎಲೆಕ್ಷನ್.. ಯಾವಾಗ ಪಂಚಾಯತ್ಗೆ 2 ಕೋಟಿ ಅನುದಾನ ಬಂತೊ ಅಂದಿನಿಂದ ಊರ ಚಿತ್ರಣವೇ ಬದ್ಲಾಯಿತು.. ಎಲ್ಲರ ಚಿತ್ತ ಪಂಚಾಯತ್ಗೆ ಹರಿದುಬರುತ್ತಿರೋ ಅನುದಾನದ ಮೇಲೆ ಬಿತ್ತು. ಮೀಸಲಾತಿಯ ಪರಿಣಾಮವಾಗಿ ಶಿಕ್ಷಣದ ಗಂಧಗಾಳಿಯೇ ಇಲ್ಲದ, ಕನಿಷ್ಟ ತಿಳುವಳಿಕೆಯೂ ಇಲ್ಲದ, ಹೆಬ್ಬಟ್ಟಿನ ಪುಡಾರಿಗಳು ಸದಸ್ಯರಾದರು.. ಅಧ್ಯಕ್ಷರಾದರು.. ಇಂತವರ ಕೈಗೆ ಅಧಿಕಾರ ಹೋದ್ರೆ, ಏನಾಗಬೇಡ..? ದೇವರೆ ಗತಿ..!! ಇವರನ್ನ ಬೇಕಾದಂತೆ ಬಳಸಿಕೊಂಡರು ಶಾಸಕರು. ಲೀಡರ್ಗಳು. ಉದ್ಯಮಿಗಳು. ಪ್ರಭಾವಿಗಳು.. ಎಲ್ಲರೂ ಸೇರಿ ಊರನ್ನೇ ಕೊಳ್ಳೆ ಹೊಡೆದ್ರು.. ಜಾತಿಗಳ ಮಧ್ಯೆ ಕಿಚ್ಚು ಹಚ್ಚಿದ್ರು.. ದೊಡ್ಡ ಕಂದಕವನ್ನೆ ಸೃಷ್ಟಿ ಮಾಡಿದ್ರು.. ಇದೆಲ್ಲದರ ಪರಿಣಾಮವಾಗಿ ಅಣ್ಣನಿಗೆ ತಮ್ಮನೆ ಎದುರಾಳಿಯಾದ..! ಒಂದೇ ಮನೆಯಲ್ಲಿ ಎರಡು ಪಕ್ಷ..!!
ಎಲೆಕ್ಷನ್ ಮುಗಿದ ಮೇಲಾದ್ರು ನೆಮ್ಮದಿ ಇದ್ಯಾ.. ಖಂಡಿತಾ ಇಲ್ಲಾ.. ಮತ್ತೆ ಶುರು ದ್ವೇಷದ ರಾಜಕೀಯ. ಒಳಗೊಳಗೆ ಪಿತೂರಿ.. ಎದುರಾಳಿಯನ್ನ ಹೇಗಾದ್ರು ಮಾಡಿ ತುಳಿಯಲೇಬೇಕು ಅನ್ನೊ ಹಠ.. ಒಟ್ಟಿನಲ್ಲಿ ರಾಜಕೀಯ ಚದುರಂಗದಾಟಕ್ಕೆ ಕೊನೆಯೇ
ಇಲ್ಲ. ಊರಿಗೆ ನೆಮ್ಮದಿ ಎಲ್ಲಿ..
ದೇವಸ್ಥಾನದ ವಿಷ್ಯದಲ್ಲೂ ರಾಜಕೀಯ.. ಎರಡು ಮೂರು ಗುಂಪುಗಳ ಜಗಳದಲ್ಲಿ ಬಲಿಪಶುವಾಗಿದ್ದು "ಪೂಜಾರಿ" ಕುಟುಂಬ.. ಸುಮಾರು 15 ವರ್ಷಗಳಿಂದ ದೇವಸ್ಥಾನದಲ್ಲಿದ್ದ ಭಟ್ರನ್ನ ಬಿಡಿಸ್ಲಾಗಿದೆ.. ಎಲ್ಲರೂ ಸೇರಿ ಮಾಡಬೇಕಾದ ವಾರ್ಷಿಕ ಕಾರ್ಯಕ್ರಮದಲ್ಲೂ ಬೀದಿ ಜಗಳ.. ತಮ್ಮದೇ ಮಾತು ನಡೆಯಬೇಕು ಅನ್ನೊ ಅಹಂ.. ಯಾರೂ ಸೋಲಲ್ಲ.. ಯಾರೂ ಗೆಲ್ಲಲ್ಲ.. ಇವರೆಲ್ಲರಿಗೆ ಊರು ಉದ್ಧಾರವಾಗೋದು ಬೇಕಿಲ್ಲ.. ತಮ್ಮ ಬೆಳೆ ಬೆಯಬೇಕಷ್ಟೆ..
ಊರಲ್ಲಿ ಸೋಮಾರಿಗಳ ಸಂಖ್ಯೆ ಜಾಸ್ತಿಯಾಗ್ಲಿಕ್ಕೆ ಪ್ರಮುಖ ಕಾರಣ ಸರ್ಕಾರಿ ಯೋಜನೆ..! ( ಉದ್ಯೋಗ ಖಾತ್ರಿ ) ಯೋಜನೆಯಡಿ ಕೆಲಸಕ್ಕೆ ಹೋದವರಿಗೆ ಹೇಳೋರು, ಕೇಳೋರು ಇಲ್ಲ.. ಬೆಳಿಗ್ಗೆ 10 ಗಂಟೆಗೆ ಹೋದ್ರೆ ಮಧ್ಯಾಹ್ನ 2ಕ್ಕೆ ಕೆಲ್ಸ ಕ್ಲೋಸ್.. ಆಮೇಲೆ ಟೈಮ್ ಪಾಸ್ .. ಕುಡಿದು ಊರು ಸುತ್ತೋದೆ ಕೆಲ್ಸ.. ಅರ್ಧ ಕೂಲಿನೂ ಮನೆ ಸೇರಲ್ಲ.. ಇವ್ರಿಗೆಲ್ಲ ಬುದ್ಧಿ ಬರೋದು ಯಾವಾಗ..? ಊರು ಅಭಿವೃದ್ಧಿಯಾಗೋದು ಎಂದು..?
ವಿಷ್ಣು ಹೆಗಡೆ, ಕುಮಟಾ

