Sunday, January 29, 2012

ವಿದೇಶದಲ್ಲಿ ಇಲಿಗಳು..!


ಯುವಕರ ಮೇಲೆ ನಿರೀಕ್ಷೆಯಿತ್ತು.. ಹಿರಿಯರ ಮೇಲೆ ವಿಶ್ವಾಸವಿತ್ತು.. ಅದೃಷ್ಟದ ನಾಯಕ ಗೆಲುವಿನ ನಾವಿಕನಾಗುತ್ತಾನೆ ಅನ್ನೊ ನಂಬಿಕೆಯಿತ್ತು.. ಆದ್ರೆ, ಆ ನಂಬಿಕೆ ಹುಸಿಯಾಗಿದೆ. ಗೆಲುವಿನ ಕನಸುಗಳೊಂದಿಗೆ ಹೋದವರಿಗೆ ಸಿಕ್ಕಿದ್ದು ಬ್ಯಾಕ್ ಟು ಬ್ಯಾಕ್ ಸೋಲು. ಹೋಗುವಾಗ ಹೀರೊಗಳಾಗಿದ್ದವರು ಈಗ ಜೀರೊಗಳಾಗಿದ್ದಾರೆ. 

ವಿದೇಶದಲ್ಲಿ ವಿಶೇಷವಾಗಿ ಸೋಲುವುದು ಟೀಮ್ ಇಂಡಿಯಾಕ್ಕೆ ಹೊಸದೆನಲ್ಲ.. ಅದ್ರಲ್ಲೂ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಭಾರತದ ಸಾಧನೆ ಕಳಪೆ. ದೇಶಿಯ ನೆಲದಲ್ಲಿ ಎದುರಾಳಿಗಳ ಮೇಲೆ ಮುಗಿಬೀಳುವ ಹುಲಿಗಳು ಬಿಳಿಯರ ನೆಲದಲ್ಲಿ ಕಾಗದದ ಮೇಲಿನ ಹುಲಿಯೇ. ವಿದೇಶಿ ನೆಲಕ್ಕೆ ಕಾಲಿಟ್ಟ ಕೂಡಲೇ ಆಟಗಾರರ ಪೌರುಷಗಳು ಮಾಯವಾಗುತ್ತೆ. ತಂಡದ ಸಾಮರ್ಥ್ಯ ಕುಗ್ಗುತ್ತೆ. ಹೀನಾಯವಾಗಿ ಸೋಲುತ್ತೆ ತಂಡ.. ಈ ಹಿಸ್ಟರಿ ಈಗ ಆಸ್ಟ್ರೇಲಿಯಾ ಟೂರ್ನಲ್ಲಿ ರಿಪೀಟ್ ಆಗಿದೆ. 64 ವರ್ಷಗಳ ಇತಿಹಾಸದಲ್ಲಿ ಕಾಂಗರೂ ನಾಡಲ್ಲಿ ಟೀಮ್ ಇಂಡಿಯಾ ಗೆದ್ದಿದ್ದು ಐದೇ ಬಾರಿ..! ವಿದೇಶದಲ್ಲಿ ಟೀಮ್ ಇಂಡಿಯಾ ಸಾಧನೆಗೆ ಇದೇ ಕೈಗನ್ನಡಿ.

ಈ ಬಾರಿಯ ಆಸಿಸ್ ಟೂರ್ನಿಯಲ್ಲಂತೂ ಹಿರಿಯ ಬಿಗ್ ಬಾಸ್ ಗಳದ್ದು ತೀರಾ ಕಳೆಪೆಯಾಟ.. ದ್ರಾವಿಡ್ ಕವರ್ ಡ್ರೈವ್  ಸೊಬಗು ಸಂಪೂರ್ಣ ಮರೆಯಾದಂತಿತ್ತು.. ಏಳು ಇನ್ನಿಂಗ್ಸ್ ಗಳಲ್ಲಿ ಆರರಲ್ಲಿ ಬೋಲ್ಡ್..! ಇಂತಾ ಮಹಾನ್ ಆಟಗಾರನೊಬ್ಬ ಈ ರೀತಿ ಔಟಾಗಿದ್ದು ಅಚ್ಚರಿಯೇ. ಆಸ್ಟ್ರೇಲಿಯನ್ನರ ದಾಳಿಗೆ 'ಮಹಾಗೋಡೆ' ಛಿದ್ರ ಛಿದ್ರವಾಗಿದ್ದು ಸುಳ್ಳಲ್ಲ..
ಕಾಂಗರೂ ನಾಡಿಗೆ ಕಾಲಿಟ್ಟಿದ್ದೆ ತಡ ಕಲಾತ್ಮಕ ಆಟಗಾರ ಲಕ್ಷ್ಮಣ್ ಕಲೆಗಾರಿಕೆ ಕೂಡಾ ಕಾಣೆಯಾಗಿದೆ.. ಆಪತ್ಪಾಂಧವ ಆಪತ್ತಿಗೆ ಆಗಲೇ ಇಲ್ಲ. 8 ಇನ್ನಿಂಗ್ಸ್ ಗಳಿಂದ ಲಕ್ಷ್ಮಣ್ ಕಲೆಹಾಕಿದ್ದು 155ರನ್.. ಕಷ್ಟದಲ್ಲಿದ್ದ ತಂಡಕ್ಕೆ ಕ್ರಿಕೆಟ್ ದೇವರೂ ನೆರವಿಗೆ ಬರಲಿಲ್ಲ.. 8-9 ತಿಂಗಳಿಂದ ಮಹಾಶತಕದ ಬರ ಎದುರಿಸುತ್ತಿರೊ ಸಚಿನ್, ಆಸ್ಟ್ರೇಲಿಯಾದಲ್ಲಿ ಬ್ಯಾಟಿಂಗ್ ಬಲ ಪ್ರದರ್ಶಿಸಲೇ ಇಲ್ಲ.

ಈಗ ಸರಣಿ ಸೋಲಿನ ಬಳಿಕ ಹಿರಿಯರ ತಲೆದಂಡದ ಮಾತುಗಳು ಕೇಳಿಬರುತ್ತಿವೆ. ಆಯ್ಕೆದಾರರು ಅಸ್ತ್ರ ಪ್ರಯೋಗಿಸಿದರೂ ಅಚ್ಚರಿಯಿಲ್ಲ.. ಹಾಗೆನಾದ್ರು ಆದಲ್ಲಿ ಮೊದಲು ಔಟ್ ಆಗೋದು ವಿವಿಎಸ್ ಲಕ್ಷ್ಮಣ್.. ಆದ್ರೀಗ, ದ್ರಾವಿಡ್ ತಾವಾಗಿಯೇ ನಿವೃತ್ತಿಯಾಗುತ್ತಾರೆ ಅನ್ನೊ ರೂಮರ್ ಹರಿದಾಡುತ್ತಿದೆ.. ಈ ಗಾಳಿಸುದ್ದಿ ಹುಸಿಯಾಗಿರಲಿ ಅಂತಾ ಆಶಿಸೋಣ.. ಯಾಕಂದ್ರೆ, ವಿಶ್ವಶ್ರೇಷ್ಠ ಆಟಗಾರನ ಬಲ ಇನ್ನೂ ಕುಗ್ಗಿಲ್ಲ.. ವಿಂಡೀಸ್, ಇಂಗ್ಲೆಂಡ್ ಟೂರ್ನಿಯಲ್ಲಿ  ತಂಡದ ನೆರವಿಗೆ ಬಂದಿದ್ದು ಇದೆ ದ್ರಾವಿಡ್.. ಈ ಸತ್ಯವನ್ನ ಇಷ್ಟು ಬೇಗ ಮರೆತರೆ ಹೇಗೆ..? ದಾಖಲೆ ಪುಟ ತೆರೆದ್ರೆ ಇದು ಅರ್ಥವಾಗುತ್ತೆ. ಕೇವಲ ಒಂದು ಟೂರ್ನಿಯ  ಡಾಟಾ ಇಟ್ಟುಕೊಂಡು, ಒಬ್ಬ ಆಟಗಾರನ ಸಾಧನೆ ಅಳೆಯೋದು ಎಷ್ಟು ಸರಿ..? ಹಾಗಾದ್ರೆ, ಆಸಿಸ್ ನಲ್ಲಿ  ಕಳಪೆ ಪ್ರದರ್ಶನ ನೀಡಿದ ಎಲ್ಲಾ ಆಟಗಾರರಿಗೆ ಇದೇ ಫಾರ್ಮುಲಾ ಅನ್ವಯವಾಗಬೇಕಲ್ಲವೆ..? ಆದ್ರೆ, ಒಬ್ಬನ ತೆಲೆದಂಡ ಕೇಳೋದು ಯಾವ ನ್ಯಾಯ..??

ವಿಷ್ಣು ಹೆಗಡೆ, ಕುಮಟಾ

Tuesday, January 24, 2012

ಮೈ ಡಿಯರ್ 'ಟಾಮಿ'


ಟಾಮಿ... ನಾನು ಸಾಕಿದ ಅತ್ಯಂತ ಪ್ರೀತಿಯ ನಾಯಿ. ನಾನು ಸಾಕಿದ್ದು ಅನ್ನುವದಕ್ಕಿಂತ ತಂಗಿ ಸಾಕಿದ್ದು. ಚಿಕ್ಕಂದಿನಿಂದ್ಲೂ ನನಗೆ ಮುದ್ದಾದನಾಯಿಮರಿ ಅಂದ್ರೆ ಇಷ್ಟ. ಸಾಕುವ ಆಸೆ.. ಆದ್ರೆ, ಅಪ್ಪ ಬಿಡ್ತಿರಲಿಲ್ಲ.. ಕೊನೆಗೂ ಹಠ ಮಾಡಿ ಡಾಬರ್ಮನ್
ನಾಯಿಮರಿಯನ್ನ ಸಾಕಿದೆ. ತರುವಾಗ ಮೂರು ತಿಂಗಳದ್ದು.. ಕಂದುಬಣ್ಣದ್ದು.. ಆಗಲೆ ಬಲಿಷ್ಠ ಕಾಲುಗಳಿಂದ, ತೀಕ್ಷ್ಮ ಕಣ್ಣುಗಳಿಂದ ಅಕ್ಕಪಕ್ಕದ ಮನೆಯವರಿಗೆ ಹೆದರಿಕೆ ಹುಟ್ಟಿಸಿತ್ತು.. ಆದ್ರೆ, ಪುಟ್ಟ ಮರಿಯ ಚೇಷ್ಟೆಗಳನ್ನ ನೋಡಿ, ಎಲ್ಲರಿಗೂ
ಅದ್ರ ಮೇಲೆ ಮುದ್ದು..

ನಾವು ಊಟ ಮಾಡುವ ಮೊದಲು ಅದ್ಕೆ ಊಟ.. ತಿಂಡಿ.. ಚಿಕ್ಕ ತಟ್ಟೆಯಲ್ಲಿ ಹಾಲು ಕುಡಿಯುತ್ತಿದ್ದ ಟಾಮಿ, ನೋಡ
ನೋಡುತ್ತಿದ್ದಂತೆಯೇ ನನ್ನೆತ್ತರಕ್ಕೆ ಬೆಳೆದು ನಿಂತಿತ್ತು. ಕೂಗಿದ್ರೆ, ಸಿಂಹಘರ್ಜನೆ.. ಊರಿಗೆ ಕೇಳ್ತಿತ್ತು.. ಅಪರಿಚಿತರನ್ನ ಕಂಡ್ರೆ ಸಾಕು ಮುಗಿ ಬೀಳುತ್ತಿತ್ತು.. ಹೀಗಾಗಿ ಬೋನಿನ ಸುತ್ತಲೂ ಯಾರೂ ಸುಳಿಯುತ್ತಿರಲಿಲ್ಲ.. ಒಂದು ವರ್ಷದ ಹೊತ್ತಿಗೆ ಟಾಮಿಗೆ ವಿಶೇಷ ಮರ್ಯಾದೆ ಸಿಕ್ಕಿತ್ತು.. ಎಲ್ಲರೂ ಸಲುಗೆ ಬಯಸುತ್ತಿದ್ದರು.. ಹೊತ್ತಿಗೆ ಆರೇಳು ಚಪಾತಿ ಅಥವಾ ಆರೇಳು ದೋಸೆ ಕೊಟ್ಟರೂ ಸಾಕಾಗ್ತಿರ್ಲಿಲ್ಲ..

ಕಾಲೇಜು ದಿನಗಳವು.. ನಾನು ಬೆಳಿಗ್ಗೆ ಹೋದ್ರೆ ಮನೆ ಸೆರೋದು ಸಂಜೆ. ತಂಗಿ ಬರೋದು ಸಾಯಂಕಾಲವೆ.. ಮನೆಯವರ ಪಾಡು ದೇವರೇ ಕೇಳಬೇಕು.. ಯಾರ ಮಾತನ್ನೂ ಕೇಳುತ್ತಿರಲಿಲ್ಲ ಟಾಮಿ.ಎಲ್ಲರನ್ನ ಬೆದರಿಸುತ್ತಿತ್ತು.. ಬೋನಿನಿಂದ ಹೊರಬಿಡುವ ಧೈರ್ಯ ಯಾರಿಗೂ ಇರ್ಲಿಲ್ಲ.. ಪ್ರಯತ್ನ ಮಾಡಿದ ಒಂದಿಬ್ಬರಿಗೆ ಹಲ್ಲಿನ ರುಚಿ ತೋರಿಸಿತ್ತು.. ಇದನ್ನರಿತ ಎಲ್ಲರೂ ಸಹವಾಸವೇ ಬೇಡವೆಂದು ಸುಮ್ಮನಾಗಿದ್ದರು.. ಹೀಗಾಗಿ ನಾಲ್ಕಡಿ ಬೆಳೆದ ಟಾಮಿಯನ್ನ ಸಂಭಾಳಿಸೋದೆ ತಂದೆ, ತಾಯಿಗೆ ಕಷ್ಟವಾಗಿತ್ತು.. ಟಾಮಿಯನ್ನ ಮನೆಯಿಂದ ಹೊರ ಕಳಿಸೋದು ಅನಿವಾರ್ಯವಾಗಿತ್ತು.. ಎಲ್ಲರೂ ಸೇರಿ ಮುದ್ದಿನ ನಾಯಿಯನ್ನ ಮುದ್ದಾಗಿ ಸಾಕುವ ಬೇರೊಬ್ಬರಿಗೆ ಕೊಟ್ಟೆವು.. ಅವರೂ ಬೇರೊಬ್ಬರಿಗೆ ಕೊಟ್ಟಿದ್ದಾರಂತೆ.. ಈಗ ಎಲ್ಲಿದೆಯೊ ಗೊತ್ತಿಲ್ಲ..  ಹೇಗಿದೆಯೋ..?

ವಿಷ್ಣು ಹೆಗಡೆ, ಕುಮಟಾ

 

Saturday, January 21, 2012

ಎದುರುಮನೆ ಹುಡುಗಿಯರು...



ನಮ್ಮ ರೂಮ್ನ ಎದುರುಗಡೆ ಮತ್ತೊಂದು ರೂಮ್ ಇದೆ.. ಮೂವರು ನೇಪಾಳಿಗಳು ಅಲ್ಲಿದ್ದಾರೆ.. ಇಬ್ಬರು ಹುಡುಗಿಯರು, ಒಬ್ಬ ಹುಡುಗ.. ಲಿವಿಂಡ್ ಟುಗೆದರ್ ಅಲ್ಲ, ಲಿವಿಂಗ್ ತ್ರಿಗೆದರ್..! ಸುಮಾರು ಒಂದು ವರ್ಷದಿಂದ ಅದೇ ರೂಮ್ನಲ್ಲಿದ್ದಾರೆ. ಎಷ್ಟೊತ್ತಿಗೆ ಹೋಗ್ತಾರೆ, ಬರ್ತಾರೆ ಅಂತಾ ಯಾರಿಗೂ ಗೊತ್ತಿಲ್ಲ.. ತಿಂಗಳಿಗೆ ಮೂರ್ನಾಲ್ಕು ಬಾರಿ ಮಾತ್ರ ದರ್ಶನ.. ಅದ್ ಬಿಟ್ರೆ, ಯಾವಾಗ್ಲೂ ಡೋರ್ ಕ್ಲೋಸ್.. ಆದ್ರೆ , ಬೆಳಿಗ್ಗೆ ಬಾಗಿಲು ತೆಗೆದ್ರೆ ಸಾಕು ವಿಸ್ಕಿ, ರಮ್, ಬಿಯರ್ ಬಾಟ್ಲಿಗಳು, ಸಿಗರೇಟ್ ಪ್ಯಾಕ್ಗಳು, ರಾಶಿ ರಾಶಿ ತಿಂಡಿ ಪೊಟ್ಟಣಗಳು ಕಣ್ಣಿಗೆ ತಟ್ಟುತ್ತೆ.. ಗಾರ್ಬೇಜ್ ತೆಗೆದುಕೊಂಡು ಹೋಗ್ಲಿಕ್ಕೆ ಬರೋರು, "ಏನಪ್ಪಾ, ಇಷ್ಟು ಗಲೀಜು ಮಾಡ್ತಿರಾ" ಅಂತಾ ಬಯ್ಯೋದು ನಮ್ಗೆ. ನೋಡಿ ಸರ್ ನಾವು ರೂಮ್ನಲ್ಲಿ ಅಡುಗೇನು ಮಾಡಲ್ಲ.. ಪ್ರತಿ ದಿನ ಹೊರಗಡೆನೆ ತಿನ್ನೋದು.. ಇದೆಲ್ಲ ಎದುರುಗಡೆಯ ಮಹಿಮೆ ಅಂತಾ ಹೇಳಿದೆವು.. ಒಂದೆರೆಡು ದಿನ ನಮ್ಮ ಮೇಲೆಯೇ ಸಂಶಯ ಪಟ್ಟ.. ಆದ್ರೆ, ಆಮೇಲೆ ಆತನಿಗೆ ಅರ್ಥವಾಯ್ತು..

ಯಾವಾಗ್ಲೂ ರೂಮ್ನಲ್ಲಿ ರಾಕ್ ಮ್ಯೂಜಿಕ್.. ಗಿಟಾರ್ ಸದ್ದು.. ಎಲ್ಲರಿಗೂ ಡಿಸ್ಟರ್ಬ್ ಆಗೋ ತರ.. ಒಮ್ಮೆ, ರಾತ್ರಿ 12 ಗಂಟೆ..
ಸ್ನೇಹಿತ ಬಾಲು ರೂಮ್ಗೆ ಬಂದಿದ್ದ.. ನಾವಿಬ್ಬರೂ ಊಟ ಮಾಡಿ ಹರಟುತ್ತಾ ಕೂತಿದ್ದೇವು.. ಎದುರುಗಡೆಯ ರೂಮ್ನಿಂದ ತುಂಬಾ ಸೌಂಡ್ ಬರ್ತಿತ್ತು.. ಸುಮ್ಮನಿದ್ದೇವು.. ಆದ್ರೆ, ಪಕ್ಕದ ಮನೆಯವ್ರು ಕೇಳಬೇಕಲ್ಲ.. ಓನರ್ಗೆ ಕಂಪ್ಲೆಂಟ್ ಮಾಡಿದ್ರು.. ನಡುರಾತ್ರಿ ಸಿಟ್ಟಿನಲ್ಲಿ ಬಂದ ಓನರ್, ಅವ್ರ ಪಾರ್ಟಿಯನ್ನ ನೋಡಿ ಕಂಗಾಲು.. ನಾವೂ ಕೂಡಾ.. ಏನಿಲ್ಲ ಅಂದ್ರೂ 10-12 ಮಂದಿ ಅಲ್ಲಿದ್ರು.. ಎಲ್ಲರೂ ಸಿಕ್ಕಾಪಟ್ಟೆ ಕುಡಿದು ರಾಕ್ ಮ್ಯೂಜಿಕ್ಗೆ ಹೆಜ್ಜೆ ಹಾಕ್ತಿದ್ರು.. " ನೋಡಿ, ಎಂಜಾಯ್ ಮಾಡಿ. ಆದ್ರೆ, ನಡುರಾತ್ರಿ ಇಷ್ಟೊಂದು ಗಲಾಟೆ ಮಾಡೋದು ಸರಿಯಲ್ಲ" ಅಂತಾ ಹೇಳಿದ್ದಕ್ಕೆ ಓವರ್ ಮೇಲೆ ರೇಗಿಬಿಟ್ರು.. "ಈ ಇಂಡಿಯನ್ ಪೀಪಲ್ಗಳೇ ಸಿಲ್ಲಿ ಮೈಂಡ್" ಅಂತಾ ಮದಿರೆ ಮತ್ತಿನಲ್ಲಿ ತೇಲುತ್ತಿದ್ದ ಹುಡುಗಿಯೊಬ್ಬಳು ಹೇಳಿದ್ದೆ ತಡ ಓನರ್ ಸಿಟ್ಟು ನೆತ್ತಿಗೇರಿತ್ತು.. ನಡುರಾತ್ರಿಯೇ ಎಲ್ಲರನ್ನ ಹೊರಹಾಕಿದ್ರು.. ಎಷ್ಟೆ ಪ್ರತಿಭಟಿಸಿದ್ರು, ಬೇಡಿಕೊಂಡರೂ ಕೇಳಲೇ ಇಲ್ಲ.. ಆ ಕಡೆ ಮನೆ, ಈ ಕಡೆ ಮನೆಯವ್ರು ಎಲ್ಲಾ ಸೇರಿಬಿಟ್ರು.. ಗಲಾಟೆ ಮಾಡುತ್ತಿದ್ದ ಹುಡುಗರಿಬ್ಬರಿಗೆ ಕಪಾಳಮೋಕ್ಷವೂ ಆಯ್ತು.. ಗೊಣಗುತ್ತಾ, ತೂರಾಡುತ್ತಾ ರಸ್ತೆಯಲ್ಲಿ ಮರೆಯಾದ್ರು..

ಮರುದಿನ ಬೆಳಿಗ್ಗೆ ಆಶ್ಚರ್ಯ..! ಕಾಫಿ ಕುಡಿದು ಬರ್ಬೇಕಾದ್ರೆ ಎದುರುಗಡೆ ರೂಮ್ನ ಬಾಗಿಲು ತೆಗೆದಿತ್ತು.. ಬೇರೆ ಯಾರೋ ಬಂದಿರಬೇಕು ಅಂದ್ಕೊಂಡೆ.. ಇಲ್ಲ.. ಅವರೇ.!! ರಾತ್ರಿ ಕುಡಿದು ಗಲಾಟೆ ಮಾಡಿದವರೆ..! ರೂಮ್ ಖಾಲಿ ಮಾಡ್ಲಿಕ್ಕೆ ಬಂದಿರಬೇಕು ಅಂದ್ಕೊಂಡೆ.. ಎಷ್ಟೊತ್ತಾದ್ರು ಜಾಗ ಖಾಲಿ ಮಾಡ್ಲಿಲ್ಲ.. ಮಧ್ಯಾಹ್ನ ಊಟ ಮಾಡಿ ಆಫೀಸ್ಗೆ ಹೊರಟೆ.. ರಸ್ತೆಯಲ್ಲಿ ಹೋಗುವಾಗ ಅಂಕಲ್ ಹೇಳಿದ್ರು.. ಬೆಳಿಗ್ಗೆ ಬೆಳಿಗ್ಗೆ ಬಂದು ಓನರ್ಗೆ ಸಾರಿ ಕೇಳಿದ್ದಾರೆ.. ಇನ್ಮುಂದೆ ಗಲಾಟೆ ಮಾಡಲ್ಲ ಅಂತಾ ಭರವಸೆನೂ ಕೊಟ್ಟಿದ್ದಾರಂತೆ.. ಅದ್ಕೆ ಓನರ್ ಮತ್ತೆ ರೂಮ್ ಕೊಟ್ಟಿದ್ದಾರೆ ಅಂತಾ ತಿಳಿದು ಸುಮ್ಮನಾದೆ..

ಇಷ್ಟೆಲ್ಲಾ ಆದ್ ಮೇಲೆ ಎದುರುಗಟೆಯ ಕಾಟ ಕಡ್ಮೆಯಾಗಿದೆ.. ಹೊರಗಡೆ ಕಸ ಚಲ್ಲೋದಿಲ್ಲ.. ಮ್ಯೂಜಿಕ್ ಸೌಂಡ್ ಬಾಗಿಲು ದಾಟಿ ಬರುತ್ತಿಲ್ಲ.. ಅಕ್ಕಪಕ್ಕದವರಿಗೂ ನೆಮ್ಮದಿ.. ನಮಗೂ..!

ವಿಷ್ಣು ಹೆಗಡೆ, ಕುಮಟಾ

Friday, January 13, 2012

ಹಳ್ಳಿಯಲ್ಲಿ ದಿಲ್ಲಿ ರಾಜಕೀಯ.!!




ನೆಮ್ಮದಿಯಿತ್ತು. ಶಾಂತತೆಯಿತ್ತು. ಸಂಸ್ಕೃತಿಯಿತ್ತು. ಒಳ್ಳೆಯ ಪರಿಸರ ಇತ್ತು. ಜನ ಕಷ್ಟಪಟ್ಟು ದುಡಿತಿದ್ರು.. ಮಾದರಿ ಊರಾಗಿತ್ತು.. ಈಗ ಎಲ್ಲಾ ಉಲ್ಟಾಪಲ್ಟಾ.. ಕೇವಲ ಆರೇಳು ವರ್ಷದಲ್ಲಿ ಎಷ್ಟೊಂದು ಬದಲಾವಣೆ ಕಂಡಿದೆ ನಮ್ಮೂರು.. ಇದಕ್ಕೆಲ್ಲ ಕಾರಣ, ಕೊಳಕು ರಾಜಕೀಯ.. ಮತಬ್ಯಾಂಕ್ ರಾಜಕಾರಣ. ಶಾಂತಿ-ಸಹಬಾಳ್ವೆಯಿಂದಿದ್ದ ಊರಿನಲ್ಲಿ ದ್ವೇಷದ ಬೀಜವನ್ನ ಬಿತ್ತಿದ್ದು ಪೊಲಿಟಿಕಲ್ ಲೀಡರ್ಗಳು. ಇಂದು ಆ ಬೀಜ, ಹೆಮ್ಮರವಾಗಿ ಬೆಳೆದು ಊರನ್ನೆ ಆವರಿಸಿಕೊಂಡಿದೆ..

ಈಗ ನಮ್ಮೂರ ರಾಜಕೀಯ ದಿಲ್ಲಿ ರಾಜಕೀಯವನ್ನ ಮೀರಿಸುತ್ತೆ..! ಮನೆಗೊಂದು ಪಕ್ಷ ಹುಟ್ಟಿಕೊಂಡಿದೆ.. ಒಬ್ಬ ಲೀಡರ್ ಹಿಂದೆ ನೂರು ಮಂದಿ.. ಈತನ ಸುತ್ತ ಇರೋರೆಲ್ಲಾ ಹೊಗಳು ಭಟರು, ಸಮಯಧಾಕರು. ಮದ್ಯಪ್ರಿಯರು.. ಊರಲ್ಲೀಗ ಒಬ್ಬರನ್ನ ಕಂಡರೆ ಮತ್ತೊಬ್ಬರಿಗೆ ಆಗಲ್ಲ.. ಒಬ್ಬ, ಮೇಲೇರ ಹೊರಟರೆ ಇನ್ನೊಬ್ಬ ಕಾಲೆಳೆಯುತ್ತಾನೆ.. ಅದನ್ನ ನೋಡಿ ನಗುವವರು ಹತ್ತು ಮಂದಿ.. ಹೀಗಾಗಿ ಈಗ ನಮ್ಮೂರನ್ನ ಅಂತ್ರವಳ್ಳಿ ಅಂತಾ ಕರೆಯೋದಕ್ಕಿಂತ "ಅತಂತ್ರವಾದ ಹಳ್ಳಿ" ಅಂತಾ ಕರೆಯೋದೆ ಸೂಕ್ತ..!!!

ನೆಮ್ಮದಿ ಮಾಯವಾಗಿದೆ. ಶಾಂತತೆ ಕದಡಿದೆ. ಕಷ್ಟಪಷ್ಟು ದುಡಿಯೊ ಜನ ಸೋಮಾರಿಗಳಾಗಿದ್ದಾರೆ.. ರಾಜಕೀಯ ಪುಡಾರಿಗಳು, ಪುಂಡರೇ ತುಂಬಿ ತುಳುಕುತ್ತಿದ್ದಾರೆ.. ಊರು ಅಭಿವೃದ್ಧಿಯಾಗಿಲ್ಲ.. ಲೀಡರ್ಗಳ ಜೇಬು ತುಂಬಿದೆ. ಅವ್ರ ಮನೆಯ ರಸ್ತೆಗಳೆಲ್ಲ ಡಾಂಬರೀಕರಣಗೊಂಡಿದೆ. ಬಡವರು ಇನ್ನೂ ಬಡವರಾಗಿದ್ದಾರೆ.. ಹವ್ಯಾಸಿ ಮದ್ಯಪ್ರಿಯರು ಕುಡಿತವನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದ್ದಾರೆ..!

ಇಷ್ಟೆಲ್ಲಾ ಹಾಳಾಗ್ಲಿಕ್ಕೆ ಪ್ರಮುಖ ಕಾರಣ ಗ್ರಾಮಪಂಚಾಯತ್ ಎಲೆಕ್ಷನ್.. ಯಾವಾಗ ಪಂಚಾಯತ್ಗೆ 2 ಕೋಟಿ ಅನುದಾನ ಬಂತೊ ಅಂದಿನಿಂದ ಊರ ಚಿತ್ರಣವೇ ಬದ್ಲಾಯಿತು.. ಎಲ್ಲರ ಚಿತ್ತ ಪಂಚಾಯತ್ಗೆ ಹರಿದುಬರುತ್ತಿರೋ ಅನುದಾನದ ಮೇಲೆ ಬಿತ್ತು. ಮೀಸಲಾತಿಯ ಪರಿಣಾಮವಾಗಿ ಶಿಕ್ಷಣದ ಗಂಧಗಾಳಿಯೇ ಇಲ್ಲದ, ಕನಿಷ್ಟ ತಿಳುವಳಿಕೆಯೂ ಇಲ್ಲದ, ಹೆಬ್ಬಟ್ಟಿನ ಪುಡಾರಿಗಳು ಸದಸ್ಯರಾದರು.. ಅಧ್ಯಕ್ಷರಾದರು.. ಇಂತವರ ಕೈಗೆ ಅಧಿಕಾರ ಹೋದ್ರೆ, ಏನಾಗಬೇಡ..? ದೇವರೆ ಗತಿ..!! ಇವರನ್ನ ಬೇಕಾದಂತೆ ಬಳಸಿಕೊಂಡರು ಶಾಸಕರು. ಲೀಡರ್ಗಳು. ಉದ್ಯಮಿಗಳು. ಪ್ರಭಾವಿಗಳು.. ಎಲ್ಲರೂ ಸೇರಿ ಊರನ್ನೇ ಕೊಳ್ಳೆ ಹೊಡೆದ್ರು.. ಜಾತಿಗಳ ಮಧ್ಯೆ ಕಿಚ್ಚು ಹಚ್ಚಿದ್ರು.. ದೊಡ್ಡ ಕಂದಕವನ್ನೆ ಸೃಷ್ಟಿ ಮಾಡಿದ್ರು.. ಇದೆಲ್ಲದರ ಪರಿಣಾಮವಾಗಿ ಅಣ್ಣನಿಗೆ ತಮ್ಮನೆ ಎದುರಾಳಿಯಾದ..! ಒಂದೇ ಮನೆಯಲ್ಲಿ ಎರಡು ಪಕ್ಷ..!!

ಎಲೆಕ್ಷನ್ ಮುಗಿದ ಮೇಲಾದ್ರು ನೆಮ್ಮದಿ ಇದ್ಯಾ.. ಖಂಡಿತಾ ಇಲ್ಲಾ.. ಮತ್ತೆ ಶುರು ದ್ವೇಷದ ರಾಜಕೀಯ. ಒಳಗೊಳಗೆ ಪಿತೂರಿ.. ಎದುರಾಳಿಯನ್ನ ಹೇಗಾದ್ರು ಮಾಡಿ ತುಳಿಯಲೇಬೇಕು ಅನ್ನೊ ಹಠ.. ಒಟ್ಟಿನಲ್ಲಿ ರಾಜಕೀಯ ಚದುರಂಗದಾಟಕ್ಕೆ ಕೊನೆಯೇ
ಇಲ್ಲ. ಊರಿಗೆ ನೆಮ್ಮದಿ ಎಲ್ಲಿ..

ದೇವಸ್ಥಾನದ ವಿಷ್ಯದಲ್ಲೂ ರಾಜಕೀಯ.. ಎರಡು ಮೂರು ಗುಂಪುಗಳ ಜಗಳದಲ್ಲಿ ಬಲಿಪಶುವಾಗಿದ್ದು "ಪೂಜಾರಿ" ಕುಟುಂಬ.. ಸುಮಾರು 15 ವರ್ಷಗಳಿಂದ ದೇವಸ್ಥಾನದಲ್ಲಿದ್ದ ಭಟ್ರನ್ನ ಬಿಡಿಸ್ಲಾಗಿದೆ.. ಎಲ್ಲರೂ ಸೇರಿ ಮಾಡಬೇಕಾದ ವಾರ್ಷಿಕ ಕಾರ್ಯಕ್ರಮದಲ್ಲೂ ಬೀದಿ ಜಗಳ.. ತಮ್ಮದೇ ಮಾತು ನಡೆಯಬೇಕು ಅನ್ನೊ ಅಹಂ.. ಯಾರೂ ಸೋಲಲ್ಲ.. ಯಾರೂ ಗೆಲ್ಲಲ್ಲ.. ಇವರೆಲ್ಲರಿಗೆ ಊರು ಉದ್ಧಾರವಾಗೋದು ಬೇಕಿಲ್ಲ.. ತಮ್ಮ ಬೆಳೆ ಬೆಯಬೇಕಷ್ಟೆ..

ಊರಲ್ಲಿ ಸೋಮಾರಿಗಳ ಸಂಖ್ಯೆ ಜಾಸ್ತಿಯಾಗ್ಲಿಕ್ಕೆ ಪ್ರಮುಖ ಕಾರಣ ಸರ್ಕಾರಿ ಯೋಜನೆ..! ( ಉದ್ಯೋಗ ಖಾತ್ರಿ ) ಯೋಜನೆಯಡಿ ಕೆಲಸಕ್ಕೆ ಹೋದವರಿಗೆ ಹೇಳೋರು, ಕೇಳೋರು ಇಲ್ಲ.. ಬೆಳಿಗ್ಗೆ 10 ಗಂಟೆಗೆ ಹೋದ್ರೆ ಮಧ್ಯಾಹ್ನ 2ಕ್ಕೆ ಕೆಲ್ಸ ಕ್ಲೋಸ್.. ಆಮೇಲೆ ಟೈಮ್ ಪಾಸ್ .. ಕುಡಿದು ಊರು ಸುತ್ತೋದೆ ಕೆಲ್ಸ.. ಅರ್ಧ ಕೂಲಿನೂ ಮನೆ ಸೇರಲ್ಲ.. ಇವ್ರಿಗೆಲ್ಲ ಬುದ್ಧಿ ಬರೋದು ಯಾವಾಗ..? ಊರು ಅಭಿವೃದ್ಧಿಯಾಗೋದು ಎಂದು..?


ವಿಷ್ಣು ಹೆಗಡೆ, ಕುಮಟಾ