Thursday, March 22, 2012

ಬೇವು - ಬೆಲ್ಲ



ಇದು ವಿಜ್ಞಾನ ಯುಗ.. ತಂತ್ರಜ್ಞಾನದಿಂದಾಗಿ ಜೀವನ ಸರಳವಾಗಿದೆ. ಸುಂದರವಾಗಿದೆ.. ಆದ್ರೆ , ಆಧುನಿಕ ಜೀವನ ಶೈಲಿಯಿಂದ 'ಒತ್ತಡ' ಎಂಬ ಖಾಯಿಲೆ ಬಳುವಳಿಯಗಿ ಬಂದಿದೆ. ವೇಗದ ಯುಗದಲ್ಲಿ ಸಮಯವೇ ಸಾಲುತ್ತಿಲ್ಲ. 24 ಗಂಟೆಯೂ ಕಡಿಮೆಯೇ. ಕೆಲವರಿಗಂತೂ ಊಟ, ನಿದ್ದೆಗೂ ಟೈಮ್ ಕೊರತೆ..! ಇವುಗಳ ಮಧ್ಯೆ ಸಂಪ್ರದಾಯ, ಸಂಸ್ಕೃತಿ ಉಳಿಯಲು ಹೇಗೆ ಸಾಧ್ಯ..? ಈ ಶರವೇಗದ ಜೀವನಕ್ಕೆ ಸಿಕ್ಕಿ ಹಬ್ಬ-ಹರಿದಿನಗಳು ಧೂಳೀಪಟವಾಗಿವೆ..



ಸುಮಾರು 10 ವರ್ಷಗಳ ಹಿಂದಿನ ಮಾತು.. ಯುಗಾದಿ ಅಂದ್ರೆ ಎಷ್ಟು ಸಂಭ್ರಮ ಇತ್ತು.. ಮನೆ ಮಂದಿಯೆಲ್ಲಾ ಒಟ್ಟಿಗೆ ಸೇರಿ ಹಬ್ಬ ಆಚರಿಸುತ್ತಿದ್ದರು.. ಒಂದು ವಾರದ ಮುಂಚೆಯೇ ತಯಾರಿ.. ಸಿಹಿ ತಿಂಡಿಗಳು ಮನೆಯಲ್ಲೇ ರೆಡಿ.. ಹೊಸ ಬಟ್ಟೆ ತೊಟ್ಟು, ಬೇವು ಬೆಲ್ಲ  ಸವಿಯುತ್ತಾ, ತುಂಬು ಸಂಸಾರದೊಂದಿಗೆ ಹೋಳಿಗೆ ಊಟದ ಸವಿಯನ್ನ ಸವಿಯೋದೆ ಖುಷಿ.. ಸಂಜೆ ಆದ್ರೆ ಸಾಕು ಎಲ್ಲರು ಊರ ದೇವಸ್ಥಾನದಲ್ಲಿ ಸೇರುತ್ತಿದ್ರು. ಅಲ್ಲಿ ಅರ್ಚಕರಿಂದ ಊರಜನಕ್ಕೆ ಯುಗಾದಿ ಫಲ.. ( ವರ್ಷಫಲ ಕೇಳುವ ಸಂಪ್ರದಾಯ ನಮ್ಮೂರಿನಲ್ಲಿ ಈಗಲೂ ಇದೆ ) ಆದ್ರೆ, ಮೊದಲಿನ ಸಂತಸ, ಸಂಭ್ರಮ ಇಲ್ಲ.. ಚದುರಿದ ಕುಟುಂಬದಲ್ಲಿ ಇರೋದು ಮೂರ್ನಾಲ್ಕು ಮಂದಿ. ಗಂಡ ಅಮೆರಿಕದಲ್ಲಿದ್ರೆ, ಹೆಂಡತಿ ಬೆಂಗಳೂರಿನಲ್ಲಿ.. ಮಕ್ಕಳು ಬೇರೆಲ್ಲೊ ಓದುತ್ತಿರುತ್ತಾರೆ. ಮನೆಯಲ್ಲಿ ಅಜ್ಜ, ಅಜ್ಜಿ ಇಬ್ಬರೇ.. ಮನೆ ಜಗುಲಿ ಖಾಲಿ ಖಾಲಿ.. ಕೆಲಸ ಮಾಡಲು ಅಸಹಾಯಕರಾದ ಅವರಿಗೆ ಮಾರ್ವಾಡಿ ಅಂಗಡಿಯ ಸ್ವೀಟೇ ಗತಿ..

ಈಗಂತೂ ಹಾಕೊ ಬಟ್ಟೆಯಿಂದ ಹಿಡಿದು, ತಿನ್ನೊ ಆಹಾರಕ್ಕೆ ವೆಸ್ಟರ್ನ್ ಮೆರಗು. ಕೃತಕ ಜೀವನ. ಒಂದು ರೀತಿಯ ರೆಡಿಮೇಡ್ ಲೈಫ್. ಫ್ಯಾಶನ್ ಹೆಸರಿನಲ್ಲಿ ಆಚಾರ-ವಿಚಾರಗಳನ್ನ ಬದಿಗೊತ್ತಲಾಗಿದೆ. ನಮ್ಮ ಪೂರ್ವಜರು ಸುಮ್ಮನೆ ಆಚಾರ-ವಿಚಾರವನ್ನ ಹೇಳಿಲ್ಲ. ಖಂಡಿತವಾಗಿಯೂ ನಮಗೆ ಶ್ರೇಷ್ಠವಾದುದನ್ನೆ ಹುಡುಕಿಕೊಟ್ಟಿದ್ದಾರೆ. ಅವರು ನಮಗೆ ಬೆಳೆದು ತೋರಿಸಿದ ಅಕ್ಕಿ,ಗೋಧಿ,ರಾಗಿಗಿಂತ ಉತ್ತಮವಾದ ಆಹಾರ ಎಲ್ಲಿದೆ..? ಫಿಜಾ, ಬರ್ಗ್ ಗೂ  ಬಳಸೋದು ಇದನ್ನೇ ಅಲ್ಲವೇ..!
ಬದಲಾವಣೆ ಏನೋ ಸರಿ.. ಆದ್ರೆ, ಆಧುನೀಕತೆಯ ಹೆಸರಲ್ಲಿ, ಸಂಸ್ಕೃತಿಯನ್ನ ಮರೆತರೆ ಹೇಗೆ..? ಹೊಸ ಆವಿಷ್ಕಾರಗಳನ್ನ
ಅನುಸರಿಸೋಣ. ಅವಲಂಬಿಸೋಣ. ಇದ್ರಿಂದ ಮೂಲ ಸಂಸ್ಕೃತಿಗೆ ಧಕ್ಕೆ ಬಾರದಿರಲಿ.. ಹೊಸ ಹಾದಿಯಲ್ಲಿ ಸಾಗುವಾಗ ಹಳೆಯ ನೆನಪುಗಳು ಬೇಡವೇ..?! ನಮ್ಮತನವನ್ನ ಉಳಿಸಿಕೊಳ್ಳುತ್ತಾ, ಮುಂದೆ ಸಾಗುತ್ತಾ ನವಯುಗಾದಿಯನ್ನ ಆಚರಿಸೋಣ..


ವಿಷ್ಣು ಹೆಗಡೆ, ಕುಮಟಾ