Monday, November 4, 2013

Saturday, November 2, 2013

ಓ ಕನಸೇ!












ಎಲ್ಲಿ ಹೋದೆ
ನನ್ನಿಂದ ದೂರವಾಗಿ
ಸವಿ ನಿದ್ದೆಯಿಂದ
ಮರೆಯಾಗಿ

ನೀನಿರದ ಬದುಕು
ನನೆಗೊಂದು ಶಾಪ
ಬೆಂದಿಹುದು ಮನಸು
ಹೊರಬರದೆ ತಾಪ
ಬಿಡು ಸಾಕು
ಈ ಕೋಪ

ಸವಿ ನಿದ್ರೆಯ
ಗೆಳೆಯ ನೀನು
ಸುಂದರ ಸ್ವಪ್ನಗಳ
ಯಜಮಾನ ನೀನು

ಕತ್ತಲಾಗಿದೆ ಜಗತ್ತು
ಬೆತ್ತಲಾಗಿದೆ ಮನಸು
ಕಹಿಯಾಗಿವೆ ರಾತ್ರಿಗಳು
ನಿನ್ನೊಲವ
ಕೊರತೆಯಿಂದ

ಭಾವನೆ ನೂರಾರು
ಬಣ್ಣದ ಬದುಕಿಗೆ
ಕಲ್ಪನೆ ಸಾವಿರಾರು
ಹುಚ್ಚು ಮನಸಿಗೆ 
ಆದರೆ, ನೀನಿಲ್ಲದೆ
ಇವೆಲ್ಲ ಅಪೂರ್ಣ
ಕಾಯಿಸದಿರು
ಬೇಗ ಬಂದು ಬಿಡು!

ವಿಷ್ಣು ಹೆಗಡೆ, ಕುಮಟಾ

Friday, November 1, 2013

ಜೀವ-ಭಾವ










ನಿನ್ನುಸಿರ ಸೌಗಂಧ
ಹೃದಯಂಗಳ ತುಂಬ
ಕಣ್ಣಲ್ಲಿ ನಿನ್ನದೇ ಬಿಂಬ

ನಿನ್ನ ನಗುವಿನ
ಹೂಮಳೆಗೆ ಚಿಗುರಿವೆ
ಭಾವಗಳು
ಮೌನದ ಮೊಗ್ಗೊಡೆದು
ಅರಳಿವೆ ಕನಸುಗಳು

ನೋವಿನ ನೆನಪುಗಳು
ಅಳಿದುಹುದು
ನಿನ್ನೊಲುಮೆಗೆ
ಜೀವ ಸಿಕ್ಕಿದೆ ಭಾವಕ್ಕೆ
ಬತ್ತಿ ಹೋಗಿದ್ದ ಜೀವಕ್ಕೆ

ವಿಷ್ಣು ಹೆಗಡೆ, ಕುಮಟಾ

Tuesday, September 10, 2013

ಕಾಮನಬಿಲ್ಲು


 








ತಿಳಿ ಮುಗಿಲ
ತಂಗಾಳಿಯಲಿ
ಕಾಮನಬಿಲ್ಲೊಂದು
ಮೈ ಸವರಿತು 

ತರ ತರದ ಅನುಭವ
ಮನದ ತುಂಬ
ನಾ ಮೈರೆತೆ
ಪ್ರಕೃತಿಯ ತುಂಟತನಕ್ಕೆ
ಭೂವಿಯ ಚೆಲುವಿಗೆ

ವಿಷ್ಣು ಹೆಗಡೆ, ಕುಮಟಾ

 

Monday, August 26, 2013

ನನ್ನ ಕಥೆ ಕೇಳಿ!















ಹಲೋ, ನಾನು ರೂಪಾಯಿ
ನನ್ನ ಕಥೆ ಕೇಳಿ
ಹುಟ್ಟಿದಾಗಿನಿಂದ
ಮೌಲ್ಯ ಕಳೆದುಕೊಳ್ಳುತ್ತಲೇ ಇದ್ದೇನೆ
ಅಪಮೌಲ್ಯ ಹೊಸತಲ್ಲ ನನಗೆ
ಆದರೆ, ದಿಢೀರ್
ಕುಸಿದಿರುವುದು
ಇದೇ ಮೊದಲು ನಾನು

ಒಂದೆಡೆ 'ದೊಡ್ಡಣ್ಣ'ನ ಆಘಾತ
ಇನ್ನೊಂದೆಡೆ ದೇಶೀಯ ಕುಸಿತ
ಹೊರ ಹರಿವು ಹೆಚ್ಚಿದೆ
ಒಳ ಹರಿವು ಕಡಿಮೆಯಾಗಿದೆ
ಬಡವಾಗಿರುವೆ, ಸೊರಗಿರುವೆ

ನನ್ನ ಕುಸಿತ ತಡೆಯಲು
ಆರ್ಬಿಐನ ಕ್ರಮ
ಫಲ ಕೊಡಲಿಲ್ಲ
ವಿತ್ತ'ತಜ್ಞ'ರ ಜ್ಞಾನ
ಉಪಯೋಗಕ್ಕೆ ಬರಲಿಲ್ಲ
ಪರಿಣಾಮ ಪತಾಳಕ್ಕಿಳಿದೆ

ನೀವಾದರೂ ನನ್ನ ಕುಸಿತ
ತಡೆಯಲು ಪ್ರಯತ್ನಿಸಿ
ಪೆಟ್ರೋಲ್ ಕಡಿಮೆ ಉಪಯೋಗಿಸಿ
ದೇಶೀಯ ಉತ್ಪನ್ನ ಬಳಸಿ
ಚಿನ್ನದ ಮೋಹ ಕಡಿಮೆ ಮಾಡಿ
ಆಮದು ಅವಲಂಬಿತ
ಐಷಾರಾಮಿ ವಸ್ತುಗಳ
ಖರೀದಿಗೆ ಮಿತಿ ಹಾಕಿ
ನನ್ನ ಜೀವ ಉಳಿಸಿ

ನಾನು ಮತ್ತಷ್ಟು ಕುಸಿದರೆ
ಬದುಕು ಭಾರವಾಗಲಿದೆ
ದರ ಏರಿಕೆಯ ಬಿಸಿ ತಟ್ಟಲಿದೆ


ವಿಷ್ಣು ಹೆಗಡೆ, ಕುಮಟಾ

ಅಸೂಯೆ













ಭೂತಾಯಿ ಮೆರವಣಿಗೆ
ಹೊರಟಿದ್ದಾಳೆ
ನವವಧುವಿನಂತೆ
ಸಿಂಗರಿಸಿಕೊಂಡು


ಚೆಲುವಿಗೆ ಮನಸೋತ
ತಾರೆಗಳು
ಮೋಡದಲ್ಲಿ ಅಡಗಿ
ಕುಳಿತಿವೆ
ಅಸೂಯೆಯಿಂದ!


ವಿಷ್ಣು ಹೆಗಡೆ, ಕುಮಟಾ

ಪ್ರವಾಹ














ಮಳೆಯೋ ಮಳೆ
ಭುವಿ-ಬಾನು ಒಂದಾಗುವಂತೆ
ಭೂಮಿ ನಡುಗಿತು
ಬಾಯ್ತೆರೆಯಿತು
ಮನೆಯೇನು, ಪ್ರಾಣವೂ ಹಾರಿತು
ಪ್ರಳಯಾರ್ಭಟಕ್ಕೆ
ವರುಣನ ಮುನಿಸಿಗೆ

ಎಲ್ಲ ಅಯೋಮಯ
ಸಾವಿಗೆ ಶರಣಾಯಿತು
ರಾಶಿ ರಾಶಿ ಜೀವ
ಎಲ್ಲಿ ನೋಡಿದರೆಲ್ಲಿ
ಗುರುತು ಸಿಗದ ಶವಗಳು
ಪಾಳು ಬಿದ್ದ ಆಸ್ತಿ
ಕುಸಿದ ಕಟ್ಟಡಗಳು
 

ನೊಂದವರ ಆಕ್ರಂದನ
ಮುಗಿಲು ಮುಟ್ಟಿತ್ತು
ಪ್ರಕೃತಿ ಮುನಿದಂತಿತ್ತು
ಮಾನವನ ದುರಾಸೆಗೆ


ವಿಷ್ಣು ಹೆಗಡೆ, ಕುಮಟಾ

Sunday, August 25, 2013

ನೀ ನಕ್ಕಾಗ!



 







ನೀ ಒಮ್ಮೆ ನಕ್ಕಾಗ
ನಕ್ಕು ನೀ ನಲಿದಾಗ
ಕವಿತೆಯೊಂದು ಹುಟ್ಟಿತು

ಇದು, ನಿನ್ನಿಂದಲೇ
ನಿನ್ನ ತುಟಿಯಂಚಿನ 

ನಗೆಯಿಂದಲೇ!

ಆದರೆ, ಬರೆಯಲು
ಪದಗಳೇ ಇಲ್ಲ
ಹೇಗೆ ಪೂರ್ತಿ ಗೊಳಿಸಲಿ
ಹೇಳು...?
ನಿನ್ನ ಕವಿತೆಗೆ
ನೀನೇ ಮೊದಲ ಸಾಲು
ಬರೆದು ಹೋಗು!

ವಿಷ್ಣು ಹೆಗಡೆ, ಕುಮಟಾ
 

Saturday, August 24, 2013

ಹೊಂಗನಸು









ಈ ಸಂಜೆಯ
ಹೊಂಬಿಸಿಲಲಿ

ಹೊಸ ಕನಸಿನ
ಜನನ

ತಣಿದ ತನುಮನ
ನವೋಲ್ಲಾಸದ ದಿನ

ವಿಷ್ಣು ಹೆಗಡೆ, ಕುಮಟಾ
 

ನಿನ್ನದೇ ನಾದ









ನಿನ್ನೊಲುಮೆ
ಅಲೆ ಅಲೆಯಾಗಿ
ಅಪ್ಪಳಿಸಿ
ನನ್ನೊಡಲ ಕಡಲ
ಕದಡಿದೆ


ನಿನ್ನ ನೆನಪುಗಳು
ನನ್ನೊಳಗೆ ತುಂಬಿ
ಭಾವನೆಗಳಿಗೆ ಜೀವಬಂದು
ಹೃದಯವೀಣೆ
ಮಿಡಿಯುತಿದೆ
ನಿನ್ನ ನಾದವ


ವಿಷ್ಣು ಹೆಗಡೆ, ಕುಮಟಾ

Wednesday, June 19, 2013

ನನ್ನವಳು...


ನಲಿವಳು
ಮುಗುಳ್ನಗುವಳು
ನನ್ನ ಕಂಡೊಡನೆ
ನನ್ನವಳು

ಹೊಳೆವ ಕಂಗಳ
ತುದಿಯಂಚಲಿ
ಬೀರುವಳು ಓರೆನೋಟ!
ಯಾರಿಗೂ ಕಾಣದಂತೆ
ಕದ್ದುಮುಚ್ಚಿ ನೋಡುವಳು
ಮುಗ್ದ ಮನಸಿನ
ಮುದ್ದಾದ ಚೆಲುವಿನವಳು

ವಿಷ್ಣು ಹೆಗಡೆ, ಕುಮಟಾ

Thursday, June 13, 2013

ನಗುಮೊಗದವಳು!












ಮುಂಗುರಳ ಸರಿಸಿ
ನಾಚಿ ನಸು ನಕ್ಕಳು
ಅವಳು
ನಗಮೊಗದವಳು

ತಂಗಾಳಿ ಬಂದಾಗ
ಒಮ್ಮೆ ಕಣ್ಮುಚ್ಚಿ
ಕೆನ್ನೆಯ ಸವರಿ
ಬೆವರ ಒರೆಸಿಕೊಂಡಳು

ಮುಖದಲ್ಲಿ ಚಂದ್ರಕಾಂತಿ
ಶ್ವೇತವರ್ಣ, ಕೆಂದುಟಿ
ಮೃದು ಮಾತು
ಮಿತ ಭಾಷಿ  ಅವಳು 

ಕಲ್ಪನೆಯ ಸುಂದರಿ ನೋಡಿದ 
'ಆ ಕ್ಷಣ' ಕಂಡು
ಬಹುದಿನದ ಕನಸು 
ಸಾಕಾರಗೊಂಡು
ಮನತುಂಬಿ ಬಂತು

ಸವಿ ಸ್ವಪ್ನಗಳು 
ದಡ ಸೇರಿತ್ತು
ಅವಳ ನೋಡುತ್ತ 
ಕಾಲ ಓಡುತ್ತಿತ್ತು
ಮಾತನಾಡುತ್ತ..

ಅವಳು, ನನ್ನವಳು
ನಗುಮೊಗದವಳು!

ವಿಷ್ಣು ಹೆಗಡೆ, ಕುಮಟಾ

Sunday, May 26, 2013

ಆ ಬಿಳಿಗಡ್ಡದ ತಾತ ಯಾರು?



ಸಂಜೆಯ ಸಮಯ. ಒಂದು ವಾಕ್ ಗೆ ಹೊರಟಿದ್ದೆ. ಆಗಷ್ಟೆ ಮಳೆ ನಿಂತು, ನೀಲಾಕಾಶ ಕೆಂಪಾಗಿತ್ತು. ತುಂತುರು ಹನಿ ಮೈಯನ್ನ ತಬ್ಬುತ್ತಿತ್ತು. ಮಣ್ಣಿನ ವಾಸನೆ ಹೊತ್ತ ತಂಗಾಳಿ ಮನಕೆ ತಂಪೆರೆದು ಉಲ್ಲಾಸಗೊಳಿಸಿತ್ತು. ನಾನು ಹೊರಟ ಉದ್ದೇಶವನ್ನೇ ಮರೆತು ನನಗರಿವಿಲ್ಲದಂತೆ ಅಲ್ಲೆ ಹತ್ತಿರದಲ್ಲಿರುವ ರಾಮಕೃಷ್ಣಾಶ್ರಮ ಪ್ರವೇಶಿಸಿ, ಧ್ಯಾನ ಮಂದಿರ ಹೊರಗಡೆ ಕೂತಿದಿದ್ದೆ. ಇನ್ನೇನು ಕಣ್ಮುಚ್ಚಿ ಒಂದೆರೆಡು ನಿಮಿಷ ಧ್ಯಾನ ಮಾಡಿ ಹೊರಡಬೇಕು ಅನ್ನುವಷ್ಟರಲ್ಲಿ ಪಕ್ಕದಲ್ಲಿದ್ದ ಇಳಿವಯಸ್ಸಿನ, ಬಿಳಿಗಡ್ಡದ, ರಾಮಜಪ ಮಾಡುತ್ತಿದ್ದ ವ್ಯಕ್ತಿಯೊಬ್ಬ ನಿನ್ನ ಜೀವನದ ಉದ್ದೇಶವೇನು ಅಂತಾ ಕೇಳಿದ.! ಆ ಘಳಿಗೆಯಲ್ಲಿ ಬಂದೆರಗಿದ ಅಪರಿಚಿತ ಭಾವ ಯಾಕೋ ನನ್ನನ್ನ ವಿಚಿಲಿತಗೊಳಿಸಿತು. ಅಷ್ಟಕ್ಕೆ ಸುಮ್ಮನಾಗಲಿಲ್ಲ ಪುಣ್ಯಾತ್ಮ. ಮಗು ನಿಧಾನವಾಗಿ ಯೋಚಿಸಿ ಅಂತಾ ಹೇಳಿ ನಾಪತ್ತೆಯಾದ. ಅಲ್ಲೆ ಪಕ್ಕದಲ್ಲೆ ಏಕಾಂಗಿಯಾಗಿ ಕೂತು ಯೋಚಿಸುತ್ತಾ ಹೋದೆ. ಉತ್ತರ ಹುಡುಕುವುದು ಕಷ್ಟವಾಯಿತು.!

ಇದಲ್ಲ ಅದು, ಅದಲ್ಲ ಇದು ಅಂತಾ ಹುಡುಕುತ್ತಾ ಹೋಗುತ್ತೇವೆ. ಕೈಗೆ ಬಂದಿದ್ದನ್ನ ದೂರ ತಳ್ಳುತ್ತಾ, ಯಾವತ್ತೊ ದೂರ ತಳ್ಳಿದ್ದನ್ನ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತೇವೆ. ಹೆಸರು ಮಾಡಬೇಕು, ಶ್ರೀಮಂತನಾಗಬೇಕು, ಹೊಸ ಮನೆಕಟ್ಟಿ, ಹೊಸ ಕಾರಿನಲ್ಲಿ ಸುತ್ತಾಡಬೇಕು. ಜಗತ್ತಿನಲ್ಲಿರುವ ಎಲ್ಲಾ ವೈಭೋಗವನ್ನ ಅನುಭವಿಸಬೇಕು. ನೆಮ್ಮದಿ-ಸುಖಬೇಕು. ಮಕ್ಕಳು-ಮೊಮ್ಮಕ್ಕಳ ಜೊತೆ ಬದುಕಬೇಕು. ಇಷ್ಟೆಲ್ಲ ಸಿಕ್ಕರೂ ಸಂತೋಷವಿಲ್ಲ. ಮತ್ತೆನಕ್ಕಾಗೋ ಹುಡುಕಾಟ. ಇದನ್ನೆಲ್ಲ ಸಂಪಾದಿಸುವುದೇ ಜೀವನದ ಉದ್ದೇಶನಾ? ಅಥವಾ ಇದಕ್ಕಾಗೆ ಬದುಕಬೇಕಾ? ಇದನ್ನೆಲ್ಲ ಯೋಚಿಸುತ್ತಾ ಹೋದಂತೆ ಉತ್ತರ ಮತ್ತಷ್ಟು ಕಗ್ಗಂಟಾಗುತ್ತಾ ಹೋಯಿತು. ಸ್ನೇಹಿತನೊಬ್ಬ ಹೇಳಿದ ಲೈಫ್ ಈಸ್ ಫೆಸ್ಟಿವಲ್ ಎನ್ನುವ ಮಾತು ನೆನಪಾಯಿತು. ಎಂಥಾ ಅದ್ಭುತ ಕಲ್ಪನೆ ಎಂದು ಸಂತೋಷಪಡುವಷ್ಟರಲ್ಲಿಯೇ ಸನ್ಯಾಸಿಯೊಬ್ಬರು ಹೇಳಿದ ಲೈಫ್ ಈಸ್ ನಥಿಂಗ್, ಒನ್ ಡೇ ವಿ ವಿಲ್ ಡೈ ಅನ್ನುವ ಮಾತು ಮನಸ್ಸನ್ನ ಹೊಕ್ಕಿತು. ದ್ವಂದ್ವ ಕಾಡಿತು. ಗಂಭೀರವಾಗಿ ಕೂತು ನನ್ನನ್ನ ಅರಿಯಲು ಯತ್ನಿಸಿದೆ. ನಾನು ನಾನಾಗಿ ಯೋಚಿಸಿದೆ. ಅಹಂ ಬ್ರಹ್ಮಾಸ್ಮಿ ಅನ್ನುವುದರ ಅರ್ಥ ಅಸ್ಪಷ್ಟವಾಗುತ್ತಾ ಹೋಯಿತು. ಪ್ರಕೃತಿ ಮತ್ತಷ್ಟು ಸುಂದರವೆನಿಸಿತು. ಮಳೆ ಇನ್ನಷ್ಟು ಆಪ್ತವೆನಿಸಿತು. ಏಳೆಂಟು ನಿಮಿಷ ಮನಸಿನೊಂದಿಗೆ ನಡೆದ ಮಾತುಕತೆಯಲ್ಲಿ ಬದುಕಿನ ಉದ್ದೇಶಕ್ಕೆ ಸ್ಪಷ್ಟ ಉತ್ತರ ಸಿಗಲಿಲ್ಲ. ಬಂದ ಯೋಚನೆಗಳನ್ನೆಲ್ಲ ತಳ್ಳಿ ಹಾಕಲು ನೋಡಿ, ಮನಸ್ಸನ್ನ ಏಕಾಗ್ರಗೊಳಿಸಲು ಪ್ರಯತ್ನಿಸಿದೆ. ಮನಸ್ಸು ಸ್ತಬ್ಧಗೊಂಡಿತು.

ಕೆಲ ಹೊತ್ತಿನ ನಂತರ ಕಣ್ತೆರೆದೆ. ಸಯಮ ಓಡಿದಂತೆ ಭಾಸವಾಯಿತು. ಮಠದಲ್ಲಿ ಜನಜಂಗುಳಿ ಮಾಯವಾಗಿತ್ತು. ಹೊರಡೋಣ ಎಂದು ಮತ್ತೆ ಧ್ಯಾನ ಮಂದಿರದತ್ತ ಬಂದಾಗ ಬಿಳಿಗಡ್ಡ ವ್ಯಕ್ತಿಯನ್ನ ನೋಡಿದೆ. ಹಿಂಬಾಲಿಸಿದೆ.! "ನಿನ್ನ ಜೀವನದ ಉದ್ದೇಶವೇನು, ಯೋಚಿಸು ಮಗು" ಅಂತಾ ಹೇಳಿ ನಾಪತ್ತೆಯಾಗುತ್ತಿರುವ ದೃಶ್ಯ ಕಂಡುಬಂತು. ನನಗೆ ಇನ್ನಷ್ಟು ಕೂತುಹಲ ಹೆಚ್ಚಿತು. ಈ ತಾತನನ್ನ ಮಾತಾಡಿಸಲೇಬೇಕು ಅಂತಾ ಅವರತ್ತ ಹೋದೆ. ನೋಡಿದ ತಕ್ಷಣವೇ ನನಗೆ ಮತ್ತದೇ ಪ್ರಶ್ನೆ ಕೇಳಿದರು. ಅವರನ್ನ ಮಾತಿಗೆಳೆಯುವ ಪ್ರಯತ್ನ ಮಾಡಿದೆ. ಮಾತನಾಡಲಿಲ್ಲ, ಅಲ್ಲಿಂದ ಕಾಲ್ಕಿತ್ತರು.ಏನೇ ಇರಲಿ, ನನ್ನೊಳಗೆ ಬದುಕಿನ ಉದ್ದೇಶದ ಪ್ರಶ್ನೆ ಬಿತ್ತಿ ಕೆಲ ಸಮಯ ಯೋಚಿಸುವಂತೆ ಮಾಡಿದ ತಾತನಿಗೆ ಮನಸಿನಲ್ಲೆ ಥ್ಯಾಂಕ್ಸ್ ಹೇಳಿದೆ. ಮನೆಗೆ ಬಂದರೂ ಆ ಬಳಿಗಡ್ಡದ ನಿಗೂಢ ವ್ಯಕ್ತಿಯ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತಲೇ ಇತ್ತು.

- ವಿಷ್ಣು ಹೆಗಡೆ, ಕುಮಟಾ

Sunday, April 28, 2013

ಕನಸಿನಲ್ಲಿ ಬಂದವಳು..














ಮುಂಜಾನೆಯ ಕನಸಿನಲಿ 
ಮಬ್ಬಾದ ಬೆಳಕಿನಲಿ
ಮರೆಯಾದ ಮಾಯಾವಿ ನೀನು 
ನನ್ನ ಕನಸು ನೀನು

ಮೌನದೊಳು ಮಾತಾಗಿ
ಕನಸಿಗೆ ಸ್ಪೂರ್ತಿಯಾಗಿ 
ಭಾವದೊಳು ಬಂಧಿಯಾದ ಭಾವ ನೀನು
ನನ್ನ ಕನಸು ನೀನು 

ಮುಸ್ಸಂಜೆಯ
ತಂಗಾಳಿಯಾಗಿ 
ಜೀವದಾ ಗೆಳತಿಯಾಗಿ
ಮನಕೆ ತಂಪೆರೆವ ಸಿಹಿಗಾಳಿ ನೀನು 
ನನ್ನ ಕನಸು ನೀನು

ವಿಷ್ಣು ಹೆಗಡೆ, ಕುಮಟಾ

ಮೌನಿಯಾದೆ!


 
















ಅನುದಿನ, ಅನುಕ್ಷಣ
ನೆನೆದೆ ನಿನ್ನನೆ
ನೆನಪನು ನೆನೆಯುತ
ಮೌನಿಯಾದೆ ಸುಮ್ಮನೆ

ಕಣ್ಮುಚ್ಚಿ ತೆರೆದರೂ
ನಿನ್ನದೆ ಧ್ಯಾನ
ಕಾದಿರುವೆ ನಿನಗಾಗಿ
ಮೋಡದಿ ಮಳೆಯಾಗಿ
ಇಳೆಯಲಿ ಹರಿದು
ಬಂದು ಸೇರುವೆಯಾ?
ನೀ ಬರುವೆ
ಎಂಬ ಕನಸಿನಲಿ
ನಾ ಇರುವೆ!

ವಿಷ್ಣು ಹೆಗಡೆ, ಕುಮಟಾ
 

Thursday, April 11, 2013

ನನ್ನೂರ ನೋಡಲು...


 











ಮಹಾನಗರಿಯ ಮಾಯಾ ಬದುಕು
ಬೇಸರ ತಂದಿರಲು
ಮಿಡಿಯುತಿದೆ ಮನವು 
ನನ್ನೋರ ಕಾಣಲು
ಹಿಂತಿರುಗುವ ದಿನವನು 
ಕಾಯುತಾ ನಿಂತೆನು
ನನ್ನೂರ ನೋಡಲು...

ಭಾವನೆಗಳ ಕಾಮನೆಗಳು
ಸಮುದ್ರದ ಅಲೆಗಳಂತೆ
ಉಕ್ಕಿ ಉಕ್ಕಿ ಹರಿಯುತಿದೆ
ಅಪ್ಪಳಿ ತವಕಿಸುತಿದೆ
ನನ್ನೂರ ನೋಡಲು...

ವಿಷ್ಣು ಹೆಗಡೆ, ಕುಮಟಾ

ನಗುವ ಚೆಲ್ಲಿದಳು



 










ನಾ ನಡೆವ ದಾರಿಯಲಿ
ನಿಂತಿದ್ದೆ ನೀನು
ಮುದ್ದಾದ ಮುಖವ ಸರಿಸಿ
ನಾಚಿಕೆಯ ನಗು ಬೀರಿದೆ
ಕಾರಣವೇ ಇಲ್ಲದೆ
ನಾ ನಿನ್ನ ನೋಡಿದೆ
ಹೇಳಬಾರದೆ ಯಾರು ನೀ?
ದೇವಲೋಕದ ಸುಂದರಿಯೇ?

ವಿಷ್ಣು ಹೆಗಡೆ, ಕುಮಟಾ

'ಚಿಕನ್ ಪಾಕ್ಸ್' ವೇದನೆ














ನನ್ನ ಪುಟ್ಟ ಕೋಣೆಯ
ತೂಗುತೊಟ್ಟಿಲಲ್ಲಿ ಬಂಧಿಯಾಗಿದ್ದೆ
ಯಾರಿಗೂ ಕಾಣದಂತೆ
ಆ ಎಂಟು ದಿನ

ಮೈತುಂಬ ಕೆಂಪು ಗುಳ್ಳೆಗಳು
ಸಹಿಸಲಾಗದ ಉರಿ
ಅತಿಯಾದ ಜ್ವರ
ಯಮಯಾತನೆ ಘೋರ

ಕನ್ನಡಿಯತ್ತ ಮುಖಮಾಡಿದಾಗ
ನನ್ನದೆ ಪ್ರತಿಬಿಂಬದ ಕುಹಕ ನಗು
ಗುಳ್ಳೆಗಳಿಂದ ತುಂಬಿದ ಮುಖ ನೋಡಿ

ಅದಕ್ಕೆ ನನ್ನ ಪುಟ್ಟ ಕೋಣೆಯ
ತೂಗುತೊಟ್ಟಿಲಲ್ಲಿ ಬಂಧಿಯಾಗಿದ್ದೆ
ಯಾರಿಗೂ ಕಾಣದಂತೆ
ಆ ಎಂಟು ದಿನ

ವಿಷ್ಣು ಹೆಗಡೆ, ಕುಮಟಾ

Wednesday, April 10, 2013

ಗುಳಿಕೆನ್ನೆ ಸುಂದರಿ...













ಮಧ್ಯಾಹ್ನದ ಸುಡುಬಿಸಿಲಿಗೆ
ಕೆಂಪಾದ ಹುಡುಗಿಯ
ಗುಳಿಕೆನ್ನೆ ನೋಡಿ 

ಕಂಪಿಸಿದೆ ಒಮ್ಮೆ
ತುಟಿಯಂಚಿನ ಬೆವರಹನಿ
ಹೊಳೆಯುತ್ತಿತ್ತು ಇಬ್ಬನಿಯಂತೆ..!


ವಿಷ್ಣು ಹೆಗಡೆ, ಕುಮಟಾ

Tuesday, April 2, 2013

ಸಂಗಾತಿ ಹುಡುಕಾಟದಲ್ಲಿ!

















ಕಲ್ಪನೆಯಲ್ಲಿ ರೂಪತಾಳಿದ
ಪದಗಳಿಂದ ಬಣ್ಣಿಸಲಾಗದ
ಚಿತ್ರಗಳಿಂದ ಚಿತ್ರಿಸಲಾಗದ
ಮಾಯಾಜಿಂಕೆಗಾಗಿ ಹುಡುಕಾಟ
ಇನ್ನೆಷ್ಟು ದಿನ ತೊಳಲಾಟ

ಕಾಣದಾಗಿದೆ ವೇದನೆ ನಿನಗೆ
ಹೊರಲಾಗದ ಭಾರ ಮನದೊಳಗೆ
ಸಹಿಸಲಾಗದ ಧಗೆ ಎದೆಯೊಳಗೆ
ಮೌನವೇ ಗತಿಯಾಗಿದೆ ನನಗೆ

ಎಲ್ಲೆಂದು ಹುಡುಕಲಿ ನಾ ನಿನ್ನ
ಬಂದು ಸೇರಲಾರೆಯಾ ನೀ ನನ್ನ
ಬದುಕಿನ ಇಳಿಸಂಜೆ ಮುನ್ನ

ವಿಷ್ಣು ಹೆಗಡೆ, ಕುಮಟಾ

Sunday, March 31, 2013

ನಾನು ನನ್ನ ಕನಸು...









ಬಡವ-ಬಲ್ಲಿದನೆಂಬ ಭೇದ ಇಲ್ಲ
ರಾತ್ರಿಯಾದರೆ ಸಾಕು
ಕರೆಯದೆ ಬರುವನು ಮೆಲ್ಲನೆ
ನಿದ್ದೆಯಲಿ ಕಳ್ಳನಂತೆ ಬಂದು
ಬಣ್ಣ ಬಣ್ಣದ ಆಸೆ ಬಿತ್ತುವನು

ಸುಂದರ ಜಗವ ತೋರಿಸಿ
ಸಾವಿರ ಕಾಮನೆಗಳ ಬಿತ್ತಿ
ಬೆಳದಿಂಗಳಲ್ಲಿ ನಕ್ಷತ್ರ ಮಿನುಗಿಸಿ
ಹೃದಯದಲ್ಲಿ ಚಿತ್ತಾರ ಬಿಡಿಸಿ
ಮರೆಯಾಗುವನು
ಭಾವನೆಗಳಿಗೆ ದನಿಯಾಗುವನು
ನನಗಿವನು ನಿತ್ಯ ಸಂಗಾತಿ
ಕರೆಯದೆ ಬರುವ ಅತಿಥಿ

ಮಿಡಿಯುತಿದೆ ಒಂಟಿ ಮನಸು
ಬೇಗ ಬಂದು ಬಿಡು ಕನಸೇ
ನಿನ್ನಾಗಮನಕ್ಕೆ ಚಂದಿರ ಬಂದಿಹನು
ನಕ್ಷತ್ರಗಳೊಂದಿಗೆ

ವಿಷ್ಣು ಹೆಗಡೆ, ಕುಮಟಾ

Sunday, March 17, 2013

ಮಾಯಾವಿ


















ಪ್ರಶಾಂತ ಮುಂಜಾವಿನಲಿ
ಕುಣಿಕುಣಿದು ಬಂದಳು
ಮನವ ತಣಿಸುವ ಶ್ವೇತಧಾರಿ ಸುಂದರಿ
ನಾ ಕಂಡ ಕನಸಿನಲಿ

ನೀಳ ನಾಸಿಕ, ಅಗಲ ಹಣೆ
ಆಳೆತ್ತರ ಅವಳ ದೇಹ
ನಗೆಯ ಬೀರಿದಳು
ಅತ್ತಿತ್ತ ನೋಡುತ
ಗಾಢ ನಿದ್ದೆಯೊಳೂ
ಗರಿಗೆದರಿತು ಮನೋಲ್ಲಾಸ

ಎಚ್ಚರವಾದಾಗ ಅಗೋಚರ
ಮಾಯವಾದಳು ಮಾಯಾವಿ
ಮತ್ತೇ ಬರಲೇ ಇಲ್ಲ ಆ ಸುಂದರಿ
ನಾ ಕಂಡ ಕನಸಿನಲಿ

ವಿಷ್ಣು ಹೆಗಡೆ, ಕುಮಟಾ

Tuesday, March 12, 2013

ನಮ್ಮವರೇಕೆ ಹೀಗೆ..?



 ಹೋಮ್ ವರ್ಕ್ ಮಾಡದಿರುವ ಆಟಗಾರರು ತಂಡದಿಂದಲೇ ಔಟ್.!!
ಆಸ್ಟ್ರೇಲಿಯಾ ಮ್ಯಾನೇಜ್ ಮೆಂಟ್ ನ ಇಂತದೊಂದು ನಿರ್ಧಾರ ಮೇಲ್ನೋಟಕ್ಕೆ ತಮಾಷೆಯಾಗಿ ಕಾಣಬಹುದು. ಆದರೆ ಶಿಸ್ತನ್ನೆ ಪ್ರಮುಖ ಮಾನದಂಡವಾಗಿಟ್ಟುಕೊಂಡ ಆಸಿಸ್ ಗೆ ಇಂತ ನಿರ್ಧಾರ ಹೊಸದಲ್ಲ. ಅಲ್ಲಿ ತಂಡ ಮುಖ್ಯವೇ ಹೊರತು ವ್ಯಕ್ತಿ ಅಲ್ಲ. ಶಿಸ್ತು ಮೊದಲು. ಆ ಆಟಗಾರ ಎಂಥವನೇ ಇರಲಿ. ಆತನ ರೆಕಾರ್ಡ್ ನ್ನ ನೋಡುವುದು, ಅಳೆಯುವುದು ಆನಂತರವೆ. ಈ ಪಾಲಿಸಿಗಳೇ  ಆಸ್ಟ್ರೇಲಿಯಾ ಕ್ರಿಕೆಟ್ ನ ಜೀವಾಳ. ಸ್ವೀವ್ ವಾ, ರಿಕಿ ಪಾಂಟಿಂಗ್ ನಂತಹ ಶ್ರೇಷ್ಠ ಆಟಗಾರರು ಫಾರ್ಮ್ ಕಳೆದುಕೊಂಡಾಗ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಹೇಳಿದ್ದೇನು ಗೊತ್ತೆ? "ಯುವಕರಿಗೆ ದಾರಿ ಬಡಿ, ನಿಮ್ಮ ಸೇವೆ ಸಾಕು, ವಿಶ್ರಾಂತಿ ತೆಗೆದುಕೊಳ್ಳಲು ನಿಮಗಿದು ಸರಿಯಾದ ಸಮಯ" ಅಂತಾ ಯಾವುದೇ ಮುಲಾಜಿಲ್ಲದೆ ಖಡಕ್ ಸಂದೇಶ ರವಾನಿಸಿತ್ತು. ಇದೇ ಕಾರಣದಿಂದಲೇ ಪಂಟರ್ ದಿಢೀರ್ ಆಗಿ ವಿದಾಯ ಘೋಷಿಸಿದ್ದರು. ತಂಡ ಮುಖ್ಯ, ವ್ಯಕ್ತಿ ಮುಖ್ಯವಲ್ಲ ಎಂಬುದೇ ಅವರ ಶಕ್ತಿ.
ಮೊನ್ನೆ ಹೈದರಾಬಾದ್ ನಲ್ಲಿ ನಡೆದ ದ್ವಿತೀಯ ಟೆಸ್ಟ್ ಸೋತ ಬಳಿಕ ಆಸ್ಟ್ರೇಲಿಯನ್ನರು ಐದನೇ ದಿನವೂ ಅದೇ ಪಿಚ್ ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡಿದ್ದರು. ಅವರು ಹುಟ್ಟಾ ಹೋರಾಟಗಾರರು. ಸೋಲನ್ನ ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಆದರೆ, ಕಳೆದ ಬಾರಿ ಆಸಿಸ್ ಪ್ರವಾಸಕ್ಕೆ ಹೋಗಿದ್ದಾಗ ಧೋನಿ ಪಡೆ ಎಲ್ಲಾ ಟೆಸ್ಟ್ ನಲ್ಲೂ ಮೂರೇ ದಿನಗಳಲ್ಲಿ ಸೋಲಿಗೆ ಶರಣಾಗಿತ್ತು. ಒಮ್ಮೆಯೂ ಇಂತ ಪ್ರಯತ್ನಕ್ಕೆ ಮುಂದಾಗಲಿಲ್ಲ. ಸೋತ ಮರುದಿವೇ ಶಾಪಿಂಗ್ ಮಾಲ್ ಗಳಲ್ಲಿ ಸುತ್ತಾಟ, ಪತ್ನಿ ಜೊತೆ ಜಾಲಿರೈಡ್ ಮಾಡಿದ್ದರು ನಮ್ಮ ಆಟಗಾರರು.! ನಮಗೂ, ಆಸ್ಟ್ರೇಲಿಯನ್ನರಿಗೂ ವೆತ್ಯಾಸ ಇಷ್ಟೆ!

ಆಸ್ಟ್ರೇಲಿಯಾದ ಗ್ರೇಗ್ ಚಾಪೆಲ್ ಭಾರತದ ತಂಡದ ಕೋಚ್ ಆಗಿದ್ದಾಗ, ಶಿಸ್ತನ್ನ ಕಲಿಸುವ ಪ್ರಯತ್ನ ಮಾಡಿದ್ದರು." ಸೆಹ್ವಾಗ್ ಉತ್ತಮ ಆಟಗಾರ. ಆದರೆ, ಆತ ಅಭ್ಯಾಸದಲ್ಲಿ ಮೈ ಬಗ್ಗಿಸುವುದಿಲ್ಲ" ಹೀಗಂತ ಬಹಿರಂಗವಾಗಿಯೇ ಹೇಳಿದ್ದರು. ಯುವರಾಜ್ ಸಿಂಗ್, ಸೌರವ್ ಗಂಗೂಲಿಯ ಅಶಿಸ್ತಿನ ಬಗ್ಗೆಯೂ ಬಿಸಿಸಿಐಗೆ ಪತ್ರ ಬರೆದು ಅಸಮಾಧಾನ ತೊಡಿಕೊಂಡಿದ್ದರು. ಆಟಗಾರರಿಗೆ ಬುದ್ಧಿ ಹೇಳುವ ಬದಲು ಬಿಸಿಸಿಐ ಚಾಪೆಲ್ ಗೆ ಬುದ್ಧಿ ಹೇಳಿತ್ತು. ಪರಿಣಾಮ ಆಟಗಾರರಿಗೆ ಶಿಸ್ತನ್ನ ಕಲಿಸಲು ಹೋದ ಚಾಪೆಲ್, ಎಲ್ಲರಿಗೂ ನಿಷ್ಠುರರಾಗಿ, ಕೊನೆಗೆ ಕೋಚ್ ಪದವಿಯನ್ನೇ ಕಳೆದುಕೊಂಡಿದ್ದರು. ಆದರೆ, ಈಗಿನ ಆಸ್ಟ್ರೇಲಿಯಾ ಕೋಚ್ ಮಿಕಿ ಅರ್ಥರ್, ಅಶಿಸ್ತಿನಿಂದ ನಡೆದುಕೊಂಡ ನಾಲ್ವರು ಆಟಗಾರರನ್ನ ಪಂದ್ಯದಿಂದ ಕೈಬಿಡುವ ನಿರ್ಧಾರಕ್ಕೆ, ಅಲ್ಲಿನ ಮಂಡಳಿಯೇ ಸಂಪೂರ್ಣ ಬೆಂಬಲ ಸೂಚಿಸಿ, ಸಹಕಾರ ನೀಡಿದೆ. ನಮ್ಮ ಬಿಸಿಸಿಐಗೂ, ಆಸ್ಟ್ರೇಲಿಯಾ ಮಂಡಳಿಗೂ ಇರುವ ಅಜಗಜಾಂತರ ವೆತ್ಯಾಸವಿದು.!!

ಸರಿಯಾಗಿ ಹೋಮ್ ವರ್ಕ್ ಮಾಡಿಲ್ಲ ಎಂಬ ಕಾರಣ ಕೊಟ್ಟು, ಉಪನಾಯಕ ಶೇನ್ ವ್ಯಾಟ್ಸನ್, ಹಿರಿಯ ಅನುಭವಿ ಬೌಲರ್ ಮಿಚೆಲ್ ಜಾನ್ಸನ್ ಸೇರಿ ನಾಲ್ವರನ್ನ ಆಸ್ಟ್ರೇಲಿಯಾ ಮುಂದಿನ ಭಾರತ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಕೈಬಿಟ್ಟಿದ್ದು, ಅಲ್ಲಿನ ಮಂಡಳಿಯ ದಿಟ್ಟ ನಿರ್ಧಾರ. ಆದರೆ, ನಮ್ಮಲ್ಲಿ ಇಂತದೊಂದು ನಿರ್ಧಾರವನ್ನ ತೆಗೆದುಕೊಳ್ಳಲು ಬಿಸಿಸಿಐಗೆ ಸಾಧ್ಯವೇ? ಹೋಮ್  ವರ್ಕ್ ಮಾತಿರಲಿ, ಕೆಲ ಹಿರಿಯ ಆಟಗಾರರು ಅಭ್ಯಾಸಕ್ಕೆ ಸರಿಯಾಗಿ ಬರುವುದಿಲ್ಲ. ಕೋಚ್ ಮಾತು ಬಹುತೇಕರಿಗೆ ಅಲಕ್ಷವೇ. ಕಳೆದ ನಾಲ್ಕೈದು ವರ್ಷಗಳಿಂದ ತಂಡದಲ್ಲಿ ಒಳಜಗಳ ಒಳಗೊಳಗೆ ಹೊಗೆಯಾಡುತ್ತಲೇ ಇದೆ. ಧೋನಿಯದ್ದೆ ಒಂದು ಬಣ, ಸೆಹ್ವಾಗ್ ದೇ ಒಂದು ಬಣವಾಗಿದೆ. ಇದೆಲ್ಲ ಕಳೆದ ಆಸಿಸ್ ಪ್ರವಾಸದಲ್ಲೇ ಬಯಲಾಗಿತ್ತು. ಬಹಿರಂಗವಾಗಿಯೇ ಹೇಳಿಕೆ ಕೊಟ್ಟಿದ್ದರು ಆಟಗಾರರು. ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ದರು. ಶಿಸ್ತು ಕ್ರಮದ ಮಾತು ಬೇಡ, ಬಿಸಿಸಿಐ ಸೌಜನ್ಯಕ್ಕೂ ಒಂದೇ ಒಂದು ಎಚ್ಚರಿಕೆಯನ್ನ ಕೊಟ್ಟಿರಲಿಲ್ಲ. ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯ ಇಂತ ಅಸಹಾಯಕತೆಯಿಂದಾಗೇ ತಾವು ಏನು ಮಾಡಿದರೂ ನಡೆಯುತ್ತದೇ ಎಂಬ ಮನೋಭಾವ ಆಟಗಾರರಲ್ಲಿ ಮನೆಮಾಡಿದೆ. ಈ ಮನಸ್ಥಿತಿ ಬದಲಾಗಬೇಕು. ಇದನ್ನ ಬದಲಾಯಿಸಲು ಬಿಸಿಸಿಐಗೆ ಧೈರ್ಯಬೇಕು...

ವಿಷ್ಣು ಹೆಗಡೆ, ಕುಮಟಾ